ಭಾರತಕ್ಕೆ ಹೊರಟಿದ್ದ ಅಫ್ಘಾನ್​ ಹಿಂದು-ಸಿಖ್​​ರಿಗೆ ವಿಮಾನ ಹತ್ತಲು ಬಿಡದ ತಾಲಿಬಾನ್​ ಉಗ್ರರು; 12 ತಾಸು ಕಾದಿದ್ದೂ ವ್ಯರ್ಥ

| Updated By: Lakshmi Hegde

Updated on: Aug 21, 2021 | 5:45 PM

ಭಾರತಕ್ಕೆ ತೆರಳಬೇಕು ಎಂದು ಹಿಂದು ಮತ್ತು ಸಿಖ್​​ ಸಮುದಾಯದ 72 ಜನರನ್ನೊಳಗೊಂಡ ಮೊದಲ ಬ್ಯಾಚ್​ ಶುಕ್ರವಾರದಿಂದಲೂ ಏರ್​ಪೋರ್ಟ್​ನ ಹೊರಗೆ ಕಾಯುತ್ತಿತ್ತು. ಬರೋಬ್ಬರಿ 12 ತಾಸುಗಳು ಕಾದ ಬಳಿಕವೂ ಅವರಿಗೆ ಅಲ್ಲಿಂದ ತೆರಳಲು ತಾಲಿಬಾನಿಗಳು ಬಿಡಲಿಲ್ಲ.

ಭಾರತಕ್ಕೆ ಹೊರಟಿದ್ದ ಅಫ್ಘಾನ್​ ಹಿಂದು-ಸಿಖ್​​ರಿಗೆ ವಿಮಾನ ಹತ್ತಲು ಬಿಡದ ತಾಲಿಬಾನ್​ ಉಗ್ರರು; 12 ತಾಸು ಕಾದಿದ್ದೂ ವ್ಯರ್ಥ
ಸಾಂಕೇತಿಕ ಚಿತ್ರ
Follow us on

ಅಫ್ಘಾನಿಸ್ತಾನದ ಹಿಂದು ಮತ್ತು ಸಿಖ್​ ಸಮುದಾಯಗಳಿಗೆ ಸೇರಿದ 72 ಜನರ ಬ್ಯಾಚ್​​ ಕಾಬೂಲ್​ ಏರ್​ಪೋರ್ಟ್ (Kabul Airport)​ನಲ್ಲಿ ಭಾರತೀಯ ಏರ್​ಫೋರ್ಸ್​ ವಿಮಾನ (IAF Plane)ವನ್ನು ಹತ್ತಲು ಮುಂದಾಗುತ್ತಿದ್ದಾಗ, ತಾಲಿಬಾನ್​ ಉಗ್ರ (Taliban Terrorists)ರು ಅವರನ್ನು ತಡೆದಿದ್ದಾರೆ. ಅಷ್ಟೇ ಅಲ್ಲ, ಆ 72 ಮಂದಿಯನ್ನು ಕಾಬೂಲ್​ ವಿಮಾನ ನಿಲ್ದಾಣದಿಂದ ವಾಪಸ್ ಕಳಿಸಿದ್ದಾರೆ. ಈ 72 ಮಂದಿಯಲ್ಲಿ ಅಫ್ಘಾನಿಸ್ತಾನದ ಹಿಂದಿನ ಸಂಸತ್ತಿನ ಇಬ್ಬರು ಅಲ್ಪಸಂಖ್ಯಾತ ಸದಸ್ಯರೂ ಇದ್ದರು. ಉಗ್ರರ ಕೈವಶವಾದ ಅಫ್ಘಾನಿಸ್ತಾನದಿಂದ ಸಾವಿರಾರು ಜನರು ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಸಿಕ್ಕ ವಿಮಾನವನ್ನು ಹತ್ತಿ ಪಲಾಯನ ಮಾಡುತ್ತಿದ್ದಾರೆ. ಅದರಂತೆ ಅಫ್ಘಾನ್​​ನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು-ಸಿಖ್​​ರಿಗೆ ಭಾರತದಲ್ಲಿ ಅವಕಾಶ ಕೊಡಲಾಗುವುದು ಎಂದು ಹೇಳಲಾಗಿತ್ತು.

ಭಾರತಕ್ಕೆ ತೆರಳಬೇಕು ಎಂದು ಹಿಂದು ಮತ್ತು ಸಿಖ್​​ ಸಮುದಾಯದ 72 ಜನರನ್ನೊಳಗೊಂಡ ಮೊದಲ ಬ್ಯಾಚ್​ ಶುಕ್ರವಾರದಿಂದಲೂ ಏರ್​ಪೋರ್ಟ್​ನ ಹೊರಗೆ ಕಾಯುತ್ತಿತ್ತು. ಬರೋಬ್ಬರಿ 12 ತಾಸುಗಳು ಕಾದ ಬಳಿಕವೂ ಅವರಿಗೆ ಅಲ್ಲಿಂದ ತೆರಳಲು ತಾಲಿಬಾನಿಗಳು ಬಿಡಲಿಲ್ಲ. ಅವರು ಇನ್ನೇನು ಭಾರತೀಯ ವಾಯುಸೇನೆ ವಿಮಾನವನ್ನು ಹತ್ತಬೇಕು ಎನ್ನುವಷ್ಟರಲ್ಲಿ ತಾಲಿಬಾನ್​ ಉಗ್ರರು ತಡೆದಿದ್ದಾರೆ. ಅಲ್ಲಿಂದಲೇ ವಾಪಸ್​ ಕಳೆಸಿದ್ದಾರೆ ಎಂದು ವಿಶ್ವ ಪಂಜಾಪಿ ಸಂಸ್ಥೆ (WPO) ಅಧ್ಯಕ್ಷ ವಿಕ್ರಮಜಿತ್​ ಸಿಂಗ್​ ಸಾಹ್ನಿ ತಿಳಿಸಿದ್ದಾರೆ. ಹಾಗೇ, ಈ 72 ಮಂದಿಯನ್ನು ಕಾಬೂಲ್​ನಲ್ಲಿ ಗುರುದ್ವಾರಕ್ಕೆ ಸುರಕ್ಷಿತವಾಗಿ ವಾಪಸ್​ ಕಳಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಸದ್ಯಕ್ಕಂತೂ ಅಫ್ಘಾನ್​ನಲ್ಲಿರುವ ಹಿಂದು ಮತ್ತು ಸಿಖ್​ರನ್ನು ಭಾರತಕ್ಕೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಒಂದೋ ತಾಲಿಬಾನಿಗಳ ಜತೆ ಮಾತುಕತೆ ನಡೆಸಬೇಕು. ಇಲ್ಲವಾದರೆ,  ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುರು ತೇಗ್​ ಬಹದ್ದೂರ್​ ಅವರ 400ನೇ ಜನ್ಮಜಯಂತಿ ನಿಮಿತ್ತ ಸಿಖ್​​ರು ಭಾರತಕ್ಕೆ ಭೇಟಿ ಕೊಡಲೇಬೇಕಿದೆ ಎಂಬುದನ್ನು ತಾಲಿಬಾನಿಗಳಿಗೆ ಮನವರಿಕೆ ಮಾಡಿಕೊಡಬೇಕು. ಇನ್ನು ಹಿಂದುಗಳ ವಿಚಾರದಲ್ಲೂ ಕೂಡ ಅಂಥದ್ದೇ ಯಾವುದಾದರೂ ಕಾರಣ ಹೇಳಬೇಕು ಎಂದು ಸಾಹ್ನಿ ಅಭಿಪ್ರಾಯಪಟ್ಟಿದ್ದಾರೆ.

ಗುರುದ್ವಾರದಲ್ಲಿ ಆಶ್ರಯ
ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಸಿಖ್​ ಮತ್ತು ಹಿಂದುಗಳು ಕಷ್ಪಪಡುತ್ತಿದ್ದಾರೆ. ಅದರಲ್ಲಿ ಸುಮಾರು 280 ಸಿಖ್​ರು ಮತ್ತು 30-40 ಹಿಂದುಗಳು ಕಾಬೂಲ್​ನ ಗುರುದ್ವಾರದಲ್ಲಿ ಉಳಿದುಕೊಂಡಿದ್ದಾರೆ. ತಾಲಿಬಾನಿಗಳು ಅವರಿಗೆ ಸುರಕ್ಷತೆಯ ಭರವಸೆ ನೀಡಿದ್ದಾರೆ. ನಿಮ್ಮ ಸುರಕ್ಷತೆ ನಮ್ಮ ಹೊಣೆ. ಶಾಂತಿಯಿಂದ ಇರುತ್ತೇವೆ. ಈ ದೇಶ ಬಿಡಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ

Gujarat Earthquake: ಕಚ್​​ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು