ತಮಿಳುನಾಡು ಕಲಾಪದಲ್ಲಿ ಸರ್ವಾನುಮತದ ತೀರ್ಮಾನ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯೇ ಮೊದಲು

ತಮಿಳುನಾಡು ವಿಧಾನಸಭೆಯು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ 'ತಮಿಳು ತಾಯಿ ವಾಳ್ತ್ತು' ಕಡ್ಡಾಯಗೊಳಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಕೇಂದ್ರದ 'ವಂದೇ ಮಾತರಂ' ನಿರ್ದೇಶನಕ್ಕೆ ಪ್ರತಿಯಾಗಿ ಈ ಹೆಜ್ಜೆ ಇಡಲಾಗಿದ್ದು, ರಾಜ್ಯದ ಭಾಷಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ. ಮುಖ್ಯಮಂತ್ರಿ ವಿಜಯ್ ಮಾತೃಭಾಷೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. ಇದು ತಮಿಳುನಾಡಿನ ಸಂಸ್ಕೃತಿ ಮತ್ತು ಹೆಮ್ಮೆಯ ಪ್ರತೀಕವಾಗಿದೆ.

ತಮಿಳುನಾಡು ಕಲಾಪದಲ್ಲಿ ಸರ್ವಾನುಮತದ ತೀರ್ಮಾನ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯೇ ಮೊದಲು
ವಿಜಯ್

Updated on: Aug 10, 2026 | 1:58 PM

ಮುಖ್ಯಾಂಶಗಳು

  • ರಾಜ್ಯದ ಅಧಿಕೃತ ಗೀತೆಗೆ ಮೊದಲ ಆದ್ಯತೆ
  • ತಮಿಳುನಾಡು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ
  • ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್

ಚೆನ್ನೈ ಆ,10 : ತಮಿಳುನಾಡಿನ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಯೋಜಿಸುವ ಎಲ್ಲಾ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯದ ಅಧಿಕೃತ ಗೀತೆಯಾದ ‘ತಮಿಳು ತಾಯಿ ವಾಳ್ತ್ತು’ (Tamil Thai Vazthu) ಅನ್ನು ಕಡ್ಡಾಯವಾಗಿ ಮೊದಲು ಹಾಡಬೇಕು ಎಂದು ಆಗ್ರಹಿಸುವ ವಿಶೇಷ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ.

ಕೇಂದ್ರ ಸರ್ಕಾರದ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯನ್ನು ಮೊದಲಿಗೆ ಹಾಡಬೇಕೆಂಬ ನಿರ್ದೇಶನಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. ವಿಪಕ್ಷಗಳಾದ ಡಿಎಂಕೆ (DMK) ಹಾಗೂ ಎಐಎಡಿಎಂಕೆ (AIADMK) ಸೇರಿದಂತೆ ಸದನದ ಎಲ್ಲಾ ಪಕ್ಷಗಳು ಈ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿವೆ.

ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಹಾಗೂ ಇದನ್ನು ಜಾರಿಗೆ ತರಲು ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಘೋಷಿಸಿದರು. ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ರಾಜ್ಯದ ಭಾಷಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ತಮಿಳು ಎಂದರೆ ನಮಗೆ ಬರಿ ಭಾಷೆಯಷ್ಟೇ ಅಲ್ಲ, ಅದು ನಮ್ಮ ಜೀವ ಮತ್ತು ಭಾವನೆ. ತಾಯಿ ಎಷ್ಟು ಪವಿತ್ರವೋ, ಮಾತೃಭಾಷೆಯೂ ಅಷ್ಟೇ ಪವಿತ್ರ.” ಎಂದು ಹೇಳಿದ್ದಾರೆ.

“ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ‘ತಮಿಳು’ ಎನ್ನುವ ಹೆಸರೆತ್ತಿದ ತಕ್ಷಣ ಇಡೀ ತಮಿಳುನಾಡು ಒಂದಾಗಿ ನಿಲ್ಲುತ್ತದೆ. ನಮ್ಮ ರಾಜ್ಯದಲ್ಲಿ ‘ತಮಿಳು ತಾಯಿ ವಾಳ್ತ್ತು’ ಗೀತೆಗೆ ಪ್ರಥಮ ಸ್ಥಾನ ಸಿಗುವುದು ನಮ್ಮ ಹಕ್ಕು. ಇದನ್ನು ಮೊದಲಿಗೆ ಹಾಡುವುದು ದೇಶದ ಐಕ್ಯತೆಗೆ ಅಥವಾ ರಾಜಕೀಯ ವ್ಯವಸ್ಥೆಗೆ ವಿರುದ್ಧವಾದದ್ದಲ್ಲ,” ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ಜಮೀನಿನಲ್ಲಿ ಹೂತುಹಾಕಿದ್ದ 5 ಲಕ್ಷ ರೂ. ನೋಟುಗಳನ್ನು ತಿಂದ ಗೆದ್ದಲು: ಮರೆವಿನಿಂದ ರೈತನಿಗೆ ಎದುರಾಯ್ತು ಬಹುದೊಡ್ಡ ಸಂಕಷ್ಟ

ಹಿನ್ನೆಲೆ ಮತ್ತು ವಿವಾದವೇನು?:

ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೆ ಮೊದಲು ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಪ್ರಥಮವಾಗಿ ಹಾಡಬೇಕೆಂದು ಜುಲೈ 9 ರಂದು ಮಾರ್ಗದರ್ಶಿ ಸೂಚಿ ಹೊರಡಿಸಿತ್ತು. ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಪದವಿ ಪ್ರದಾನ ಸಮಾರಂಭ ಹಾಗೂ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಯನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿತ್ತು. ಇದು ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. 1891 ರಲ್ಲಿ ಮನೋನ್ಮಣಿಯಂ ಸುಂದರನಾರ್ ಅವರು ರಚಿಸಿದ ಈ ಗೀತೆಯನ್ನು, 1970 ರಲ್ಲಿ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ಹಾಡಲು ಆದೇಶಿಸಲಾಗಿತ್ತು ಹಾಗೂ 2021 ರಲ್ಲಿ ಅಧಿಕೃತ ರಾಜ್ಯ ಗೀತೆಯಾಗಿ (State Song) ಘೋಷಿಸಲಾಗಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us