ಅನಂತನಾಗ್‌ನಲ್ಲಿ ಯೋಧರ ಮೇಲೆ ದಾಳಿ ಮಾಡಿದ್ದು ಟಿಆರ್​​ಎಫ್ ಉಗ್ರ ಸಂಘಟನೆ; ಇದಕ್ಕೂ ಎಲ್ಇಟಿಗೂ ಏನು ಸಂಬಂಧ?

|

Updated on: Sep 14, 2023 | 4:36 PM

ಜಂಟಿ ಸೇನಾ-ಪೊಲೀಸ್ ತಂಡದ ಮೇಲಿನ ದಾಳಿಯ ಹೊಣೆಯನ್ನು ಲಷ್ಕರ್‌ನ ರೆಸಿಸ್ಟೆನ್ಸ್ ಫೋರ್ಸ್ ವಹಿಸಿಕೊಂಡಿದೆ. ಈ ಭಯೋತ್ಪಾದಕ ಸಂಘಟನೆಯು 2019 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸಂಘಟನೆ ಆಗಿದೆ. ಈ ಸಂಘಟನೆಯು ಯುವಕರನ್ನು ದಾರಿತಪ್ಪಿಸಿ ಭಯೋತ್ಪಾದಕ ಸಂಘಟನೆಗಳಲ್ಲಿ ತೊಡಗಿಸುವ ಕೆಲಸ ಮಾಡುತ್ತದೆ.

ಅನಂತನಾಗ್‌ನಲ್ಲಿ ಯೋಧರ ಮೇಲೆ ದಾಳಿ ಮಾಡಿದ್ದು ಟಿಆರ್​​ಎಫ್ ಉಗ್ರ ಸಂಘಟನೆ; ಇದಕ್ಕೂ ಎಲ್ಇಟಿಗೂ ಏನು ಸಂಬಂಧ?
ಅನಂತನಾಗ್ ಎನ್​​ಕೌಂಟರ್ ಸ್ಥಳದಲ್ಲಿ ಭದ್ರತಾ ಪಡೆ
Follow us on

ದೆಹಲಿ ಸೆಪ್ಟಂಬರ್ 14: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತನಾಗ್‌ನಲ್ಲಿ (Anantnag Encounter) ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಮೂವರು ಹುತಾತ್ಮರಾಗಿದ್ದಾರೆ. ಇದರಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಒಬ್ಬರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ. ಉಗ್ರರ ಬಗ್ಗೆ ಮಾಹಿತಿ ತಿಳಿದು, ಶೋಧ ಕಾರ್ಯಾಚರಣೆಗಾಗಿ ಸೇನೆ ಮತ್ತು ಪೊಲೀಸರು ಅಲ್ಲಿಗೆ ತಲುಪಿದ ಕೂಡಲೇ ಉಗ್ರರು ದಾಳಿ ನಡೆಸಿದ್ದಾರೆ. ಲಷ್ಕರ್-ಎ-ತೊಯ್ಬಾದ ಅಂಗ ಎಂದು ಕರೆಯಲ್ಪಡುವ ಟಿಆರ್​​ಎಫ್ ಅಥವಾ ದಿ ರೆಸಿಸ್ಟೆನ್ಸ್ ಫೋರ್ಸ್ (The Resistance Front) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಭಯೋತ್ಪಾದಕ ಸಂಘಟನೆ ಯಾವುದು? ಏನು? ಎತ್ತ ಎಂಬುದರ ಬಗ್ಗೆ ತಿಳಿಯೋಣ.

ಜಂಟಿ ಸೇನಾ-ಪೊಲೀಸ್ ತಂಡದ ಮೇಲಿನ ದಾಳಿಯ ಹೊಣೆಯನ್ನು ಲಷ್ಕರ್‌ನ ರೆಸಿಸ್ಟೆನ್ಸ್ ಫೋರ್ಸ್ ವಹಿಸಿಕೊಂಡಿದೆ. ಈ ಭಯೋತ್ಪಾದಕ ಸಂಘಟನೆಯು 2019 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸಂಘಟನೆ ಆಗಿದೆ. ಈ ಸಂಘಟನೆಯು ಯುವಕರನ್ನು ದಾರಿತಪ್ಪಿಸಿ ಭಯೋತ್ಪಾದಕ ಸಂಘಟನೆಗಳಲ್ಲಿ ತೊಡಗಿಸುವ ಕೆಲಸ ಮಾಡುತ್ತದೆ.

ಸಾಮಾನ್ಯವಾಗಿ, ಈ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದಿಂದ ಒಳನುಸುಳುವಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿಯೂ ಈ ಭಯೋತ್ಪಾದಕ ಸಂಘಟನೆಯು ಭಾಗಿಯಾಗಿರುವುದು ಕಂಡುಬಂದಿದೆ. ಈ ವರ್ಷ ಈ ಭಯೋತ್ಪಾದಕ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಕಮಾಂಡರ್ ಶೇಖ್ ಸಜ್ಜದ್ ಗುಲ್ ಎಂದು ಹೇಳಲಾಗುತ್ತದೆ. ಸಜ್ಜದ್ ವಾಟೆಂಡ್ ಉಗ್ರನಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಟಾರ್ಗೆಟ್ ಕಿಲ್ಲಿಂಗ್ (ಗುರಿಯಾಗಿರಿಸಿ ಹತ್ಯೆ) ಭಾಗಿಯಾಗಿದ್ದಾನೆ.

ಅನಂತನಾಗ್ ಜಿಲ್ಲೆಯಲ್ಲಿ ಬುಧವಾರದಿಂದ ಸೇನೆ-ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ಆರಂಭವಾಗಿದೆ. ಭಯೋತ್ಪಾದಕರ ಬಗ್ಗೆ ಸೇನೆಗೆ ಸುಳಿವು ಸಿಕ್ಕಿತ್ತು. ಇದಾದ ಬಳಿಕ ಸೇನೆ ಮತ್ತು ಪೊಲೀಸರು ತಂಡ ರಚಿಸಿ ಜಂಟಿ ಶೋಧ ಕಾರ್ಯಾಚರಣೆಗಾಗಿ ಅಲ್ಲಿಗೆ ತಲುಪಿದ್ದಾರೆ.

ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ  ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಶ್ ಧೌಂಚಕ್ , ಜಮ್ಮು ಮತ್ತು ಕಾಶ್ಮೀರದ ಡಿಎಸ್ಪಿ ಹುಮಾಯೂನ್ ಭಟ್  ಹುತಾತ್ಮರಾಗಿದ್ದಾರೆ.

ಅನಂತನಾಗ್‌ನ ಕೊಕೊರೆನಾಗ್‌ನಲ್ಲಿ ರೆಸಿಸ್ಟೆನ್ಸ್ ಫೋರ್ಸ್‌ನ ಉಗ್ರರು ಅಡಗಿಕೊಂಡಿದ್ದರು. ಮಂಗಳವಾರ ರಾತ್ರಿ ಸೇನೆಗೆ ಈ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಸೇನೆ ಜಂಟಿ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿತ್ತು. ಕರ್ನಲ್ ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸುತ್ತಿದ್ದರು.

ಇದನ್ನೂ ಓದಿ: ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮ ಡಿಎಸ್‌ಪಿ ಹುಮಾಯೂನ್ ಭಟ್​​ಗೆ ಅಪ್ಪನ ಅಂತಿಮ ನಮನ

ಭಯೋತ್ಪಾದಕರ ಹುಡುಕಾಟದಲ್ಲಿ ಭದ್ರತಾ ತಂಡ ಮುಂದೆ ಹೋಗುತ್ತಿತ್ತು . ಇದೇ ವೇಳೆ ಅಡಗಿ ಕುಳಿತಿದ್ದ ಉಗ್ರರು ಸೇನಾ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಅಧಿಕಾರಿಗಳು ಗಾಯಗೊಂಡಿದ್ದಾರೆ .ಗಾಯಗೊಂಡ ಅಧಿಕಾರಿಗಳನ್ನು ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಿದ್ದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

ಹುತಾತ್ಮರಿವರು

ಹುತಾತ್ಮರು ( ಎಡದಿಂದ ಬಲಕ್ಕೆ- ಕರ್ನಲ್ ಮನ್‌ಪ್ರೀತ್ ಸಿಂಗ್, ಹುಮಾಯೂನ್ ಭಟ್, ಮೇಜರ್ ಆಶಿಶ್ ಧೋನಕ್ )

ಒಂದೂವರೆ ತಿಂಗಳ ಹಿಂದೆ ಕಾಶ್ಮೀರದಲ್ಲಿ ತನ್ನ ಕರ್ತವ್ಯವನ್ನು ಪುನರಾರಂಭಿಸಲು ಮೇಜರ್ ಆಶಿಶ್ ಧೋನಕ್ ತನ್ನ ಎರಡು ವರ್ಷದ ಮಗಳು ಸೇರಿದಂತೆ ಅವರ ಕುಟುಂಬವನ್ನು ಬಿಟ್ಟು ಬಂದಿದ್ದು, ಮನೆ ಬದಲಾಯಿಸಲು ಸಹಾಯ ಮಾಡಲು ಅಕ್ಟೋಬರ್‌ನಲ್ಲಿ ಹರಿಯಾಣದ ಪಾಣಿಪತ್‌ಗೆ ಹಿಂತಿರುಗುವುದಾಗಿ ಭರವಸೆ ನೀಡಿದ್ದರು. ಆದರೆ ಬುಧವಾರ ನಡೆದ ಕಾರ್ಯಾಚರಣೆ ವೇಳೆ ಧೋನಕ್ ಹುತಾತ್ಮರಾದರು.

19 ರಾಷ್ಟ್ರೀಯ ರೈಫಲ್ಸ್ (19 RR) ನ ಕಮಾಂಡಿಂಗ್ ಆಫೀಸರ್ ಮತ್ತು ಪ್ರತಿಷ್ಠಿತ ಸೇನಾ ಪದಕ ಪುರಸ್ಕೃತ ಕರ್ನಲ್ ಮನ್‌ಪ್ರೀತ್ ಸಿಂಗ್( 41) ಗುಂಡೇಟು ತಗಲುವುದಕ್ಕಿಂತ ಕೆಲವೇ ಗಂಟೆಗಳ ಮುಂಚೆ ಚಂಡೀಗಢದಲ್ಲಿರುವ ಆರು ವರ್ಷದ ಮಗ ಮತ್ತು ಎರಡು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದೊಂದಿಗೆ ಮಾತನಾಡಿದ್ದರು.

ಉಗ್ರ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಗುಲಾಂ ಹಸನ್ ಭಟ್ ಅವರ ಪುತ್ರ ಹುಮಾಯೂನ್ ಒಂದು ತಿಂಗಳ ಹಿಂದೆಯಷ್ಟೇ ತಂದೆಯಾಗಿದ್ದರು. ಒಂದೂವರೆ ವರ್ಷ ಹಿಂದೆ ಇವರು ಮದುವೆಯಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ