
ತಿರುಪತಿ, ಜುಲೈ 27: ಸಪ್ತಗಿರಿಧಾಮ ತಿರುಮಲದ ಪ್ರಸಿದ್ಧ ‘ಜಪಾಲಿ ಆಂಜನೇಯ ಸ್ವಾಮಿ ತೀರ್ಥ’ದ ಬಳಿ ಕುಡಿಯುವ ನೀರಿನ ನಲ್ಲಿಗಳಿಂದ ಬಿಳಿ ಬಣ್ಣದ ನೀರು ಹೊರಬರುತ್ತಿದ್ದು, “ನಲ್ಲಿಯಲ್ಲಿ ನೀರಲ್ಲ, ಹಾಲೇ ಹರಿಯುತ್ತಿದೆ” ಎಂಬ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಚಮತ್ಕಾರದ ಕುರಿತು ಭಕ್ತರಲ್ಲಿ ಭಾರಿ ಕುತೂಹಲ ಹಾಗೂ ಚರ್ಚೆಗಳು ಶುರುವಾಗಿದ್ದ ಬೆನ್ನಲ್ಲೇ, ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ವೈಜ್ಞಾನಿಕ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದೆ.
ಸತ್ಯವೇನು?
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಮಾಹಿತಿಯನ್ನು ನಂಬಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿರುವ ಟಿಟಿಡಿ ಆರೋಗ್ಯ ಇಲಾಖೆ ಹಾಗೂ ಆಹಾರ ವಿಶ್ಲೇಷಣಾ ಪ್ರಯೋಗಾಲಯವು ಈ ಕೆಳಗಿನ ಸತ್ಯಗಳನ್ನು ಬಹಿರಂಗಪಡಿಸಿದೆ.
ಅಧಿಕ ನೀರಿನ ಒತ್ತಡ: ಜಪಾಲಿ ತೀರ್ಥದಲ್ಲಿ ನಲ್ಲಿಗಳಿಂದ ನೀರು ಪೈಪ್ ಮುಖಾಂತರ ಅತ್ಯಂತ ವೇಗವಾಗಿ ಹೊರಬರುವಾಗ ನೀರಿನಲ್ಲಿ ‘ಸೂಕ್ಷ್ಮ ಗಾಳಿಯ ಗುಳ್ಳೆಗಳು’ ಸೃಷ್ಟಿಯಾಗುತ್ತವೆ. ಇದರಿಂದಾಗಿ ನೀರು ತಾತ್ಕಾಲಿಕವಾಗಿ ಹಾಲಿನಂತೆ ಬಿಳಿಯಾಗಿ ಕಾಣಿಸುತ್ತದೆ. ನಲ್ಲಿಯಿಂದ ನೀರನ್ನು ಲೋಟಕ್ಕೋ ಅಥವಾ ಪಾತ್ರೆಗೋ ಹಿಡಿದಾಗ ಕೆಲವೇ ಸೆಕೆಂಡುಗಳಲ್ಲಿ ಆ ಗಾಳಿಯ ಗುಳ್ಳೆಗಳು ಒಡೆದುಹೋಗಿ, ನೀರು ತನ್ನ ಸಹಜ ಪಾರದರ್ಶಕ ರೂಪಕ್ಕೆ ಮರಳುತ್ತದೆ.
ಪರೀಕ್ಷಾಲಯದಲ್ಲಿ ನೀರಿನ ಮಾದರಿಯನ್ನು ತಪಾಸಣೆ ನಡೆಸಲಾಗಿದ್ದು, ನೀರು ಸಂಪೂರ್ಣವಾಗಿ ಶುದ್ಧವಾಗಿದೆ. ಇದರಲ್ಲಿ ಯಾವುದೇ ದುರ್ವಾಸನೆ, ಕೆಸರು ಅಥವಾ ಕಲ್ಮಶಗಳಿಲ್ಲ ಎಂದು ತಜ್ಞರು ದೃಢಪಡಿಸಿದ್ದಾರೆ.
ಮತ್ತಷ್ಟು ಓದಿ:
TTD News: ತಿರುಪತಿಯಲ್ಲಿ ಭಕ್ತರಿಗೆ ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ; TTDಯಿಂದ ಹೊಸ ಪ್ರಯೋಗ!
ಜಪಾಲಿ ತೀರ್ಥದ ಮಹತ್ವ: ತಿರುಮಲದ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಜಪಾಲಿ ಆಂಜನೇಯ ಸ್ವಾಮಿ ದೇವಾಲಯವು ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಜಪಾಲಿ ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದ್ದರೆಂಬ ನಂಬಿಕೆಯಿದ್ದು, ಶ್ರೀರಾಮನನ್ನು ಪ್ರಸನ್ನಗೊಳಿಸಲು ಆಂಜನೇಯ ಸ್ವಾಮಿ ನೆಲೆಸಿದ ಸ್ಥಳ ಇದಾಗಿದೆ ಎಂಬ ಐತಿಹಾಸಿಕ ನಂಬಿಕೆಯಿದೆ.
ನೀರಿನಲ್ಲಿ ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತಾಗ ನೀರು ಬಿಳಿಯಾಗಿ ಕಾಣಿಸುವುದು ಒಂದು ಸಾಮಾನ್ಯ ಭೌತಿಕ ಪ್ರಕ್ರಿಯೆಯಾಗಿದೆ. ಇದನ್ನು ಪೈಪ್ಲೈನ್ ವ್ಯವಸ್ಥೆಗಳಲ್ಲಿ ‘ಮೈಕ್ರೋ ಬಬಲ್ ಏರೇಶನ್’ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಫೋಮ್-ಎರೇಟರ್ ಹೊಂದಿರುವ ನಲ್ಲಿಗಳನ್ನು ಬಳಸುವಾಗಲೂ ನೀರು ಬಿಳಿಯಾಗಿ ಬರುವುದು ಇದೇ ಕಾರಣಕ್ಕೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ