ಕೊರೊನಾಕ್ಕಿಂತಲೂ ಬಿಜೆಪಿ ಅಪಾಯಕಾರಿ: ಟಿಎಂಸಿ ಸಂಸದೆಯ ಟೀಕೆಗೆ ಕಮಲ ಕಿಡಿ

| Updated By: ರಾಜೇಶ್ ದುಗ್ಗುಮನೆ

Updated on: Jan 15, 2021 | 10:26 PM

ನುಸ್ರತ್ ಜಹಾನ್ ಹೇಳಿಕೆಗೆ ಬಿಜೆಪಿಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಅಮಿತ್ ಮಾಳವೀಯ ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿಯ ಸಹ ಸಂಚಾಲಕರೂ ಆಗಿರುವ ಅವರು, ಟಿಎಂಸಿ ಕೊರೊನಾ ಲಸಿಕೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೊರೊನಾಕ್ಕಿಂತಲೂ ಬಿಜೆಪಿ ಅಪಾಯಕಾರಿ: ಟಿಎಂಸಿ ಸಂಸದೆಯ ಟೀಕೆಗೆ ಕಮಲ ಕಿಡಿ
ಟಿಎಂಸಿ ಸಂಸದೆ ನುಸ್ರತ್ ಜಹಾನ್ (ಸಂಗ್ರಹ ಚಿತ್ರ)
Follow us on

ಕೋಲ್ಕತ್ತಾ: ‘ಕೊರೊನಾಕ್ಕಿಂತಲೂ ಅಪಾಯಕಾರಿ ಮನುಷ್ಯರು ನಿಮ್ಮನ್ನು ಸುತ್ತುವರೆದಿರಬಹುದು, ನಿಮ್ಮ ಕಿವಿ ಮತ್ತು ಕಣ್ಣುಗಳನ್ನು ಸದಾ ಜಾಗೃತವಾಗಿರಿಸಿಕೊಳ್ಳಿ. ನಿಮಗೆ ಗೊತ್ತೇ? ಬಿಜೆಪಿ ಕೊರೊನಾಕ್ಕಿಂತಲೂ ಅಪಾಯಕಾರಿ. ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲಾಗದ ಬಿಜೆಪಿಗೆ ಮಾನವೀಯತೆಯೇ ಇಲ್ಲ’ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಬಿಜೆಪಿಯನ್ನು ಟೀಕಿಸಿದ್ದರು. ಅವರ ಈ ಟೀಕೆ ಬಿಜೆಪಿ ಸಿಟ್ಟಾಗಿದೆ.

ನುಸ್ರತ್ ಜಹಾನ್ ಹೇಳಿಕೆಗೆ ಬಿಜೆಪಿಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಅಮಿತ್ ಮಾಳವೀಯ ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿಯ ಸಹ ಸಂಚಾಲಕರೂ ಆಗಿರುವ ಅವರು, ಟಿಎಂಸಿ ಕೊರೊನಾ ಲಸಿಕೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಗೆ ಪಶ್ಚಿಮ ಬಂಗಾಳದ ಶ್ರಮ ಸಂಸ್ಕೃತಿಯ ಅರಿವಿಲ್ಲ. ಹಣದ ಹೊಳೆಯಲ್ಲಿ ಮುಳುಗಿರುವ ಬಿಜೆಪಿ ಕೇವಲ ವ್ಯವಹಾರವನ್ನೊಂದೇ ಅರಿತಿದೆ. ಧರ್ಮಗಳ ನಡುವೆ ಕಲಹ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಎಲ್ಲೆಡೆ ನಡೆಸುತ್ತಿದೆ ಎಂದು ಸಂಸದೆ ನುಸ್ರತ್ ಜಹಾನ್ ಇತ್ತೀಚಿಗೆ ರಕ್ತದಾನ ಶಿಬಿರವೊಂದರಲ್ಲಿ ಹೇಳಿದ್ದರು.

ಮೊದಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದ ಸಿದ್ದಿಕುಲ್ಲಾ ಚೌಧರಿ ಕೊರೊನಾ ಲಸಿಕೆ ತುಂಬಿದ ವಾಹನವನ್ನು ತಡೆಗಟ್ಟಿದರು. ಇದೀಗ ಟಿಎಂಸಿ ಸಂಸದೆ ಬಿಜೆಪಿಯನ್ನು ಕೊರೊನಾಕ್ಕೆ ಹೋಲಿಸುತ್ತಿದ್ದಾರೆ ಎಂದು ಅಮಿತ್ ಮಾಳವೀಯ ಟೀಕಿಸಿದ್ದಾರೆ.

‘ಒಂದಾಗಿ ಬಿಜೆಪಿಯನ್ನು ವಿರೋಧಿಸೋಣ ಬನ್ನಿ..’ ಕಾಂಗ್ರೆಸ್​ಗೆ ಆಹ್ವಾನ ನೀಡಿದ ಟಿಎಂಸಿ