ಕೋಲ್ಕತ್ತಾದ ಕಾಲೇಜಿನಲ್ಲೊಂದು ಬೆಡ್ ರೂಮ್, ಗೆದ್ದಲು ತಿಂದಿರುವ 1 ಕೋಟಿ ರೂ. ನಗದು, ರಿವಾಲ್ವರ್, ಕಾಂಡೋಮ್ ಪತ್ತೆ
ಕೋಲ್ಕತ್ತಾದ ಪ್ರತಿಷ್ಠಿತ ಸುರೇಂದ್ರನಾಥ್ ಕಾಲೇಜಿನ ವಿದ್ಯಾರ್ಥಿ ಸಂಘದ ಕೊಠಡಿಯಲ್ಲಿ ಬೆಡ್ ರೂಂ, ಗೆದ್ದಲು ತಿಂದ 1 ಕೋಟಿ ರೂ. ನಗದು, ರಿವಾಲ್ವರ್ ಮತ್ತು ಕಾಂಡೋಮ್ಗಳು ಪತ್ತೆಯಾಗಿವೆ. ಈ ಆಘಾತಕಾರಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಕಾಲೇಜು ಆಡಳಿತ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಕೊಠಡಿಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲು ನಿರ್ಧರಿಸಿದೆ.

ಕೋಲ್ಕತ್ತಾ, ಜೂನ್ 03: ಕೋಲ್ಕತ್ತಾ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕಾಲೇಜು(College)ಗಳಲ್ಲಿ ಒಂದಾದ ಸುರೇಂದ್ರನಾಥ್ ಕಾಲೇಜಿನಲ್ಲಿ ಬೆಡ್ ರೂಮ್ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲದೆ ಆ ರೂಮಿನಲ್ಲಿ ಎರಡು ಚೀಲಗಳಲ್ಲಿ ಗೆದ್ದಲು ತಿಂದಿರುವ 1 ಕೋಟಿ ರೂ. ನಗದು, ರಿವಾಲ್ವರ್ ಹಾಗೂ ಕಾಂಡೋಮ್ಗಳು ಪತ್ತೆಯಾಗಿವೆ.
ಮೇ 4 ರ ಚುನಾವಣಾ ಫಲಿತಾಂಶಗಳ ನಂತರ ವಿದ್ಯಾರ್ಥಿ ಸಂಘದ ಕೊಠಡಿಗೆ ಸಂಪೂರ್ಣವಾಗಿ ಬೀಗ ಹಾಕಲಾಗಿತ್ತು. ಮಳೆಗಾಲದ ಮುನ್ನ ಡೆಂಗ್ಯೂ ತಡೆಗಟ್ಟುವಿಕೆಗಾಗಿ ಪುರಸಭೆಯ ಆರೋಗ್ಯ ತಂಡವು ಕಾಲೇಜಿಗೆ ಭೇಟಿ ನೀಡಿದಾಗ, ಈ ಕೊಠಡಿಯ ಸ್ವಚ್ಛತೆಯೂ ಅತ್ಯಗತ್ಯವಾಗಿತ್ತು. ಕಾಲೇಜು ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ತೆರೆದು ಪರಿಶೀಲಿಸಿದಾಗ, ಅಲ್ಲಿ ಹಳೆಯ ಅಲ್ಮೇರಾವೊಂದರಲ್ಲಿ 500 ಮತ್ತು 100 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಚೀಲಗಳು ಪತ್ತೆಯಾಗಿವೆ.
ದೀರ್ಘಕಾಲದಿಂದ ಕೊಠಡಿ ಮುಚ್ಚಿದ್ದರಿಂದ ಹೆಚ್ಚಿನ ನೋಟುಗಳನ್ನು ಗೆದ್ದಲುಗಳು ತಿಂದು ಹಾಕಿದ್ದವು. ಜತೆಗೆ ಮದ್ಯದ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್ಗಳು ಕೂಡಾ ಸಿಕ್ಕಿವೆ. ಇದರ ಜೊತೆಗೆ, ಕಾಲೇಜಿನ ಮತ್ತೊಂದು ಭಾಗದಲ್ಲಿ ಕೆಲವು ಸೂಟ್ಕೇಸ್ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಭಾಗಶಃ ಹಾನಿಗೊಳಗಾದ ಅಥವಾ ಸುಟ್ಟ ಸ್ಥಿತಿಯಲ್ಲಿರುವ ಹಳೆಯ ಕರೆನ್ಸಿ ನೋಟುಗಳು ಕಂಡುಬಂದಿವೆ. ಕಾಲೇಜು ಆಡಳಿತ ಮಂಡಳಿಯು ಈ ವಿಷಯದಲ್ಲಿ ಯಾವುದೇ ವಿಳಂಬ ಮಾಡದೆ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ಮುಚಿಪರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಹಣ ಹಾಗೂ ಪತ್ತೆಯಾದ ಹಳೆಯ ವೋಚರ್ಗಳನ್ನು ವಶಕ್ಕೆ ಪಡೆದುಕೊಂಡು, ಪಾರದರ್ಶಕ ತನಿಖೆಯನ್ನು ಆರಂಭಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್ಗೆ ಚಪ್ಪಲಿ ಏಟು
ಸುಮಾರು ಒಂದು ವರ್ಷದ ನಂತರ ವಿದ್ಯಾರ್ಥಿಗಳ ಸಂಘ ಕೊಠಡಿಯನ್ನು ತೆರೆಯಲಾಯಿತು. 2019 ರಿಂದ ಕ್ಯಾಂಪಸ್ ಚುನಾವಣೆಗಳು ನಡೆಯದ ಕಾರಣ, ಕಾಲೇಜುಗಳಲ್ಲಿನ ಸಂಘ ಕೊಠಡಿಗಳನ್ನು ಮುಚ್ಚುವಂತೆ ಕಲ್ಕತ್ತಾ ಹೈಕೋರ್ಟ್ ಆಗಿನ ಟಿಎಂಸಿ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರ 2025 ರಲ್ಲಿ ಅದನ್ನು ಮುಚ್ಚಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಿಗೆ ಇಲ್ಲಿ ಬೆಡ್ ರೂಮಿರುವುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ತಪಾಸಣೆಯ ವೇಳೆ, ಕಾಲೇಜಿನ ಹೊಸ ಕಟ್ಟಡದ ಐದನೇ ಮಹಡಿಯಲ್ಲಿರುವ ಎರಡು ಬೀಗ ಹಾಕಿದ ಕೊಠಡಿಗಳನ್ನು ಪ್ರಾಂಶುಪಾಲರ ಸಮ್ಮುಖದಲ್ಲಿ ತೆರೆಯಲಾಯಿತು. ಈ ಕೊಠಡಿಗಳಲ್ಲಿ ಹಾಸಿಗೆಗಳು, ಕಪಾಟುಗಳು ಹಾಗೂ ಮೇಜು-ಕುರ್ಚಿಗಳಿರುವುದು ಕಂಡುಬಂದಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವನ್ನು ಪೂರೈಸಲು ಈ ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು ಎಂದು ಹಗಲು ಪಾಳಿಯ ಉಸ್ತುವಾರಿ ಶಿಕ್ಷಕ ಪೂರ್ಣೇಂದು ಪ್ರಕಾಶ್ ಪಾಲ್ ತಿಳಿಸಿದ್ದಾರೆ.
ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಬೇಕಾದ ಈ ಕೊಠಡಿಗಳಲ್ಲಿ ವಸತಿ ಮಾದರಿಯ ಪೀಠೋಪಕರಣಗಳು ಪತ್ತೆಯಾಗಿರುವುದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಈ ಎಲ್ಲಾ ಕೊಠಡಿಗಳನ್ನು ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಹೆಚ್ಚುವರಿ ಕ್ಲಾಸ್ರೂಮ್ಗಳನ್ನಾಗಿ ಮಾತ್ರ ಬಳಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಪತ್ತೆಯಾದ ಹಣದ ಮೂಲ ಮತ್ತು ವೋಚರ್ಗಳ ಕುರಿತು ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತ ತನಿಖೆ ನಡೆಸುತ್ತಿವೆ. ಶಾಸಕ ಸಜಲ್ ಘೋಷ್ ಸೇರಿದಂತೆ ಪ್ರಮುಖ ನಾಯಕರು ಈ ತನಿಖೆಯನ್ನು ಸ್ವಾಗತಿಸಿದ್ದು, ಇದು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸುಧಾರಣೆ ಮತ್ತು ವ್ಯವಸ್ಥಿತ ಪಾರದರ್ಶಕತೆಯನ್ನು ತರಲು ಉತ್ತಮ ಅವಕಾಶ ಎಂದು ಆಶಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




