AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಮತ ಬೇಕು, ಅಧಿಕಾರ ಕೊಡಲು ಮನಸಿಲ್ಲ: ಸಂಪುಟದಲ್ಲಿ ಸ್ತ್ರೀಯರಿಗೆ ಅವಕಾಶ ಕೊಡದ ಬಗ್ಗೆ ಜೆಡಿಎಸ್ ಆಕ್ರೋಶ

ಮಹಿಳೆಯರ ಮತ ಬೇಕು, ಅಧಿಕಾರ ಕೊಡಲು ಮನಸಿಲ್ಲ: ಸಂಪುಟದಲ್ಲಿ ಸ್ತ್ರೀಯರಿಗೆ ಅವಕಾಶ ಕೊಡದ ಬಗ್ಗೆ ಜೆಡಿಎಸ್ ಆಕ್ರೋಶ

ಗಣಪತಿ ಶರ್ಮಾ
|

Updated on: Aug 04, 2026 | 10:55 AM

Share

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಟೀಕಿಸಿರುವ ಪ್ರತಿಪಕ್ಷ ಜೆಡಿಎಸ್, ಇದು ಮಹಿಳಾ ಸಬಲೀಕರಣಕ್ಕೆ ಮಾಡಿದ ಅವಮಾನ ಎಂದಿದೆ. ಮಾತಿನಲ್ಲಿ ಮಹಿಳಾ ಸಬಲೀಕರಣ ಹೇಳುವ ಕಾಂಗ್ರೆಸ್, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಜೆಡಿಎಸ್ ಎಕ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಆಗಸ್ಟ್ 4: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕಿಗೂ ಮಂತ್ರಿ ಸ್ಥಾನ ದೊರೆತಿಲ್ಲ. ಈ ಬೆಳವಣಿಗೆಯನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ವ್ಯಂಗ್ಯವಾಡಿದೆ. ಬರೀ ಮಾತಿನಲ್ಲಿ ಮಹಿಳಾ ಸಬಲೀಕರಣ ತೋರಿಸಿದರೆ ಆಗುವುದಿಲ್ಲ, ಸಂಪುಟದಲ್ಲಿ ತೋರಿಸಬೇಕಾಗಿತ್ತು ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ​ಚುನಾವಣೆ ಸಮಯದಲ್ಲಿ ಮಹಿಳೆಯರ ಮತ ಬೇಕು, ಆದರೆ ಅಧಿಕಾರದ ಹಂಚಿಕೆ ಬಂದಾಗ ಸ್ಥಾನ ಕೊಡಲು ಮನಸ್ಸಿಲ್ಲ. ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಮಹಿಳೆಯರಿಗೆ ಶೂನ್ಯ ಪ್ರಾತಿನಿಧ್ಯ‌ ರಾಜ್ಯದ ನಾರೀಶಕ್ತಿಗೆ ಮಾಡಿದ ಅಪಮಾನ. ಇದುವೇನಾ ನೀವು ಮಹಿಳೆಯರಿಗೆ ನೀಡುವ ಗೌರವ ಎಂದು ಜೆಡಿಎಸ್ ಪ್ರಶ್ನಿಸಿದೆ.

​ರಾಜ್ಯದ ಶೇಕಡಾ 50ರಷ್ಟಿರುವ ಮಹಿಳಾ ಸಮುದಾಯಕ್ಕೆ ಅಧಿಕಾರದ ಪಾಲು ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲವೇ? ಮಹಿಳಾ ಸಬಲೀಕರಣದ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುವವರು, ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಕಾಂಗ್ರೆಸ್ ಪಕ್ಷದ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ. ​ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಅರ್ಹತೆ ಮತ್ತು ಸಾಮರ್ಥ್ಯವಿರುವ ಮಹಿಳಾ ಜನಪ್ರತಿನಿಧಿಗಳಿದ್ದರೂ ಅವಕಾಶ ನಿರಾಕರಿಸಿರುವುದು ತಾರತಮ್ಯದ ನೀತಿಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣವೇ ಈ ತಪ್ಪನ್ನು ಸರಿಪಡಿಸಿ, ಸಂಪುಟದಲ್ಲಿ ಮಹಿಳೆಯರಿಗೆ ಮನ್ನಣೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us