10 ದಿನಗಳ ಬಳಿಕ ಕೋರ್ಟ್ ಮುಂದೆ ಶರಣಾದ ತ್ವಿಶಾ ಶರ್ಮಾ ಪತಿ ಸಮರ್ಥ್ ಸಿಂಗ್

ಮಾಡೆಲ್ ತ್ವಿಶಾ ಶರ್ಮಾ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ತಿರುವು ಲಭಿಸಿದೆ. ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಹಾಗೂ ಪತಿ ಸಮರ್ಥ್ ಸಿಂಗ್ ಕೊನೆಗೂ ಕಾನೂನಿಗೆ ಶರಣಾಗಲು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ತ್ವಿಶಾ ಶರ್ಮಾ ಅವರ ಸಾವಿನ ನಂತರ ಪೊಲೀಸರು ವರದಕ್ಷಿಣೆ ಕಿರುಕುಳ ಮತ್ತು ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸ್ ದಾಖಲಾದಾಗಿನಿಂದ ಅವರ ಪತಿ ಸಮರ್ಥ್ ಸಿಂಗ್ ನಾಪತ್ತೆಯಾಗಿದ್ದರು.

10 ದಿನಗಳ ಬಳಿಕ ಕೋರ್ಟ್ ಮುಂದೆ ಶರಣಾದ ತ್ವಿಶಾ ಶರ್ಮಾ ಪತಿ ಸಮರ್ಥ್ ಸಿಂಗ್
Twisha Sharma With Her Husband

Updated on: May 22, 2026 | 6:59 PM

ನವದೆಹಲಿ, ಮೇ 22: ತ್ವಿಶಾ ಶರ್ಮಾ (Twisha Sharma) ಅವರ ಕುಟುಂಬಸ್ಥರು ಈ ಮೊದಲಿನಿಂದಲೂ ತಮ್ಮ ಮಗಳ ಸಾವಿನಲ್ಲಿ ಸಮರ್ಥ್ ಸಿಂಗ್ ಅವರದ್ದೇ ವ್ಯವಸ್ಥಿತ ಸಂಚು ಎಂದು ಆರೋಪಿಸುತ್ತಿದ್ದರು. ಈಗ ಪತಿ ಶರಣಾಗಿರುವುದರಿಂದ ಮತ್ತು ಇತ್ತ ದೆಹಲಿ ಏಮ್ಸ್ ತಜ್ಞರು ಎರಡನೇ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಆರಂಭಿಸಿರುವುದರಿಂದ, ತ್ವಿಶಾ ಅವರದ್ದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ನಿಜವಾದ ರಹಸ್ಯ ಸದ್ಯದಲ್ಲೇ ಬಹಿರಂಗಗೊಳ್ಳಲಿವೆ.

ಕಳೆದ 10 ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್ ಇಂದು ಮಧ್ಯಪ್ರದೇಶದ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದಾರೆ. ದೆಹಲಿ ಏಮ್ಸ್ (AIIMS) ಮೂಲಕ ತ್ವಿಶಾ ಶರ್ಮಾ ಅವರ ಶವದ ಎರಡನೇ ಮರಣೋತ್ತರ ಪರೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಮರ್ಥ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಮೊದಲೇ ಆತ ಸಲ್ಲಿಸಿದ್ದ ಮುಂಗಡ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದರಿಂದ, ಪೊಲೀಸರು ಯಾವುದೇ ಕ್ಷಣದಲ್ಲೂ ತನ್ನನ್ನು ಬಂಧಿಸಬಹುದು ಮತ್ತು ಕಠಿಣ ಪೊಲೀಸ್ ವಿಚಾರಣೆಗೆ ಒಳಪಡಿಸಬಹುದು ಎಂಬುದನ್ನು ಅರಿತು, ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ನೇರವಾಗಿ ನ್ಯಾಯಾಲಯದ ಮುಂದೆ ಶರಣಾಗುವ ತಂತ್ರ ಹೂಡಿದ್ದಾರೆ.


ಇದನ್ನೂ ಓದಿ: ದೆಹಲಿ ಏಮ್ಸ್​​ನಿಂದ ತ್ವಿಶಾ ಶರ್ಮಾ 2ನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ

ಸಮರ್ಥ್ ಸಿಂಗ್ ನ್ಯಾಯಾಲಯದ ಆವರಣಕ್ಕೆ ಆಗಮಿಸುತ್ತಿದ್ದಂತೆ ತನಿಖಾಧಿಕಾರಿಗಳು ಮತ್ತು ಪೊಲೀಸರು ಅಲರ್ಟ್ ಆಗಿದ್ದಾರೆ. ನ್ಯಾಯಾಲಯವು ಆತನ ಶರಣಾಗತಿಯನ್ನು ಅಂಗೀಕರಿಸಿದ ತಕ್ಷಣ, ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ.


ತ್ವಿಶಾ ಶರ್ಮಾ ಅವರ ಸಾವು ಸಾಮಾನ್ಯ ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಅವರ ಪೋಷಕರು ಮತ್ತು ಕುಟುಂಬದವರು ಗಂಭೀರ ಆರೋಪ ಮಾಡಿದ್ದರು. ಮೊದಲನೇ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ಲೋಪದೋಷಗಳಿರಬಹುದು. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿರಬಹುದು ಎಂದು ಶಂಕಿಸಿದ ಕುಟುಂಬಸ್ಥರು, ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us