ಕಾಶ್ಮೀರದ ಅನಂತ್​ನಾಗ್​​ನಲ್ಲಿ ಎನ್​ಕೌಂಟರ್; ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

ಜಂಟಿ ಶೋಧ ತಂಡವು ಉಗ್ರರಿದ್ದ ಸ್ಥಳದ ಕಡೆಗೆ ತೆರಳುತ್ತಿದ್ದಂತೆ ಅಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಜಂಟಿ ಶೋಧ ಕಾರ್ಯಾಚರಣೆಯ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದು ಎನ್‌ಕೌಂಟರ್‌ಗೆ ಕಾರಣವಾಯಿತು

ಕಾಶ್ಮೀರದ ಅನಂತ್​ನಾಗ್​​ನಲ್ಲಿ ಎನ್​ಕೌಂಟರ್; ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ
ಪ್ರಾತಿನಿಧಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Sep 07, 2022 | 8:08 AM

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪೋಷ್ಕ್ರೀರಿ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (Hizbul Mujahideen) ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಎನ್​ಕೌಂಟರ್ ಮಾಡಲಾಗಿದೆ. ಅನಂತ್‌ನಾಗ್‌ನ  (Anantnag) ಪೋಷ್ಕ್ರೀರಿ ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಸೇನೆಯಿಂದ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

“ಶೋಧ ಕಾರ್ಯಾಚರಣೆಯ ಸಮಯದಲ್ಲಿ ಜಂಟಿ ಶೋಧ ತಂಡವು ಉಗ್ರರಿದ್ದ ಸ್ಥಳದ ಕಡೆಗೆ ತೆರಳುತ್ತಿದ್ದಂತೆ ಅಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಜಂಟಿ ಶೋಧ ಕಾರ್ಯಾಚರಣೆಯ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದು ಎನ್‌ಕೌಂಟರ್‌ಗೆ ಕಾರಣವಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎನ್​ಕೌಂಟರ್​ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಯಿತು. ಅವರ ಶವಗಳನ್ನು ಎನ್‌ಕೌಂಟರ್ ನಡೆದ ಸ್ಥಳದಿಂದ ಹೊರತೆಗೆಯಲಾಯಿತು. ಅವರನ್ನು ಜಬ್ಲಿಪೋರಾ ಬಿಜ್‌ಬೆಹರಾ ನಿವಾಸಿ ಡ್ಯಾನಿಶ್ ಅಹ್ಮದ್ ಭಟ್ ಅಲಿಯಾಸ್ ಕೊಕಬ್ ದುರೀ ಮತ್ತು ಫತೇಪೋರಾ ಅನಂತನಾಗ್ ನಿವಾಸಿ ಬಶರತ್ ನಬಿ ಲೋನ್ ಎಂದು ಗುರುತಿಸಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ)ನೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: ಉಗ್ರ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದವರಿಗೆ ₹25 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಹತ್ಯೆ ಮಾಡಲಾದ ಇಬ್ಬರೂ ಭಯೋತ್ಪಾದಕರು 2019ರಿಂದ ಉಗ್ರ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅವರು ಭದ್ರತಾ ಪಡೆಗಳ ಮೇಲಿನ ದಾಳಿಗಳು ಮತ್ತು ಜನರ ಮೇಲಿನ ದೌರ್ಜನ್ಯಗಳು ಸೇರಿದಂತೆ ಅನೇಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದರು. ಸದೂರ ಅನಂತನಾಗ್‌ನಲ್ಲಿ ಇಬ್ಬರು ಪ್ರಾದೇಶಿಕ ಸೇನಾ ಸಿಬ್ಬಂದಿಗಳಾದ ಮಂಜೂರ್ ಅಹ್ಮದ್ ಹತ್ಯೆಯಲ್ಲೂ ಅವರು ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಿಂದ 1 ಎಕೆ-56 ರೈಫಲ್, 35 ಎಕೆ ಸುತ್ತುಗಳು, 2 ಎಕೆ ಮ್ಯಾಗಜೀನ್‌ಗಳು, 1 ಪಿಸ್ತೂಲ್, 1 ಪಿಸ್ತೂಲ್ ಮ್ಯಾಗಜೀನ್ ಮತ್ತು 2 ಪಿಸ್ತೂಲ್ ಸುತ್ತುಗಳು ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರು ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 am, Wed, 7 September 22