ಉತ್ತರಪ್ರದೇಶ ಗಣಿ ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ; ಗಣಿಯೊಳಗೆ ಸಿಲುಕಿರುವವರು ಇನ್ನೂ ಹಲವರು
Uttar Pradesh stone mine collapse incident: ಉತ್ತರಪ್ರದೇಶದ ಗಣಿ ಕುಸಿತ ಘಟನೆಯಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿದೆ. ನಿನ್ನೆ ಶನಿವಾರ ಒಬ್ಬರ ಮೃತದೇಹ ಸಿಕ್ಕಿತ್ತು. ಭಾನುವಾರ ಇನ್ನಿಬ್ಬರ ಶವ ಪತ್ತೆಯಾಗಿದೆ. ಕಲ್ಲಿನ ಕ್ವಾರಿಯ ಅವಶೇಷಗಳಡಿ ಇನ್ನೂ 9 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ. ಶನಿವಾರ ಘಟನೆ ಸಂಭವಿಸಿದಾಗ ಅಂದಾಜು 12 ಮಂದಿ ಇದ್ದರೆನ್ನಲಾಗಿದೆ.

ಲಕ್ನೋ, ನವೆಂಬರ್ 16: ಉತ್ತರಪ್ರದೇಶದ ಸೋನ್ಭದ್ರ ಜಿಲ್ಲೆಯ ಬಿಲ್ಲಿ ಮರಕುಂಡಿ (Billi Markundi) ಎಂಬಲ್ಲಿನ ಕಲ್ಲಿನ ಕ್ವಾರಿಯೊಂದು ಕುಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿದೆ. ನಿನ್ನೆ ಶನಿವಾರ (ನ. 15) ಸಂಭವಿಸಿದ ಈ ದುರಂತದಲ್ಲಿ (mining collapse) ನಿನ್ನೆಯೇ ಒಬ್ಬರು ಸಾವನ್ನಪ್ಪಿರುವುದು ಖಚಿತಪಟ್ಟಿತ್ತು. ಇವತ್ತು ನಡೆದ ಶೋಧದಲ್ಲಿ ಇನ್ನೂ ಇಬ್ಬರ ಶವ ಸಿಕ್ಕಿದೆ.
ಈ ಕಲ್ಲಿನ ಕ್ವಾರಿಯಲ್ಲಿ ಕಲ್ಲಿನ ಅವಶೇಷಗಳಡಿಯಲ್ಲಿ ಒಂಬತ್ತು ಮಂದಿ ಈಗಲೂ ಸಿಲುಕಿದ್ದಾರೆ ಎನ್ನಲಾಗಿದೆ. ಆದರೆ, ದುರಂತ ಸಂಭವಿಸಿದಾಗ ಎಷ್ಟು ಮಂದಿ ಕೆಲಸಗಾರರು ಅಲ್ಲಿ ಇದ್ದರು ಎಂಬುದು ಗೊತ್ತಾಗಿಲ್ಲ. 12 ಮಂದಿ ಇದ್ದಿರಬಹುದು ಎಂದು ಹೇಳಲಾಗುತ್ತಿದೆ. ಉತ್ತರಪ್ರದೇಶ ಸಚಿವ ಸಂಜೀವ್ ಗೋಂಡ್ ಅವರು ನೀಡಿರುವ ಮಾಹಿತಿ ಪ್ರಕಾರ ಸುಮಾರು 12 ಮಂದಿ ಕೆಲಸಗಾರರು ದುರಂತ ಸ್ಥಳದಲ್ಲಿ ಇದ್ದರು.
ಇದನ್ನೂ ಓದಿ: ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು; ಹಲವು ಕಾರ್ಮಿಕರು ಕಣ್ಮರೆ
ಅವಶೇಷಗಳಡಿ ಸಿಲುಕಿರುವ ಇತರ ಕಾರ್ಮಿಕರನ್ನು ರಕ್ಷಿಸಲು ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ) ಮತ್ತು ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡದ ಮೇಲಿಂದ ಬಿದ್ದ ಕಲ್ಲುಗಳು ದೊಡ್ಡ ಗಾತ್ರದ್ದಾದ್ದರಿಂದ ಅವುಗಳನ್ನು ತೆರವುಗೊಳಿಸುವ ಕೆಲಸ ಕಷ್ಟವಾಗಿದೆ. ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಲಕರಣೆಗಳು ಮತ್ತು ಉಪಕರಣಗಳು ಲಭ್ಯ ಇದ್ದು, ತ್ವರಿತವಾಗಿ ರಕ್ಷಣಾ ಕಾರ್ಯ ನಡೆಸಲು ಯತ್ನಿಸಲಾಗುತ್ತಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಬದ್ರಿನಾಥ್ ಸಿಂಗ್ ಅವರು ಘಟನೆಗೆ ಕಾರಣವೇನೆಂದು ಪತ್ತೆ ಮಾಡಲು ತನಿಖೆಗೆ ಆದೇಶಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ವಾಗೀಶ್ ಸಿಂಗ್ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಅವರು ಸಲ್ಲಿಸುವ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




