ಜ್ಞಾನವಾಪಿ ಪ್ರಕರಣ: ಮಸೀದಿ ಸಮಿತಿಯ ಮನವಿ ತಿರಸ್ಕರಿಸಿದ ವಾರಣಾಸಿ ನ್ಯಾಯಾಲಯ

Gyanvapi Mosque case ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳ ಕಡೆಯಿಂದ ಶಿವಲಿಂಗದ ಪೂಜಾ ಹಕ್ಕುಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ಜ್ಞಾನವಾಪಿ ಪ್ರಕರಣ: ಮಸೀದಿ ಸಮಿತಿಯ ಮನವಿ ತಿರಸ್ಕರಿಸಿದ ವಾರಣಾಸಿ ನ್ಯಾಯಾಲಯ
ಜ್ಞಾನವಾಪಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Nov 17, 2022 | 10:27 PM

ದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ(Gyanvapi Mosque case) ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ನ್ಯಾಯಾಲಯ (Varanasi court) ಗುರುವಾರ ವಜಾಗೊಳಿಸಿದೆ.ಇದಕ್ಕೂ ಮೊದಲು, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿರುವ “ಶಿವಲಿಂಗ” ದ ಆರಾಧನೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ ಮನವಿಯ ತೀರ್ಪನ್ನು ನ್ಯಾಯಾಲಯವು ಮುಂದೂಡಿತ್ತು. ಅರ್ಜಿಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಲಾಗಿದೆ. ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳ ಕಡೆಯಿಂದ ಶಿವಲಿಂಗದ(Shivling) ಪೂಜಾ ಹಕ್ಕುಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಶಿವಲಿಂಗ ಪತ್ತೆಯಾದ ನಂತರ ವಿಶ್ವ ವೈದಿಕ ಸನಾತನ ಸಂಸ್ಥೆಯು ವಾರಣಾಸಿಯ ತ್ವರಿತ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿತ್ತು. ವಿಶ್ವ ವೈದಿಕ ಸನಾತನ ಸಂಸ್ಥೆಯ ಅಧ್ಯಕ್ಷ ಜಿತೇಂದ್ರ ಸಿಂಗ್ ವಿಶೆನ್ ಅವರ ಪತ್ನಿ ಕಿರಣ್ ಸಿಂಗ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ. ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನ ಪ್ರಾರ್ಥನೆಯನ್ನು ತಕ್ಷಣವೇ ಪ್ರಾರಂಭಿಸಲು ಅನುಮತಿ, ಇಡೀ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸುವುದು ಹಿಂದೂಗಳ  ಬೇಡಿಕೆಗಳಾಗಿವೆ.

ಈ ಸಂದರ್ಭದಲ್ಲಿ, ಆದೇಶ 7/ನಿಯಮ 11 ರ ಅಡಿಯಲ್ಲಿ ನ್ಯಾಯಾಲಯವು ಈ ವಿಷಯವನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೇಳಿದೆ.

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸಲ್ಲಿಸಿದ ಮನವಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿದೆ. ಮುಂದಿನ ವಿಚಾರಣೆ ಡಿಸೆಂಬರ್ 2 ರಂದು ನಡೆಯಲಿದೆಎಂದು ಹಿಂದೂ ಪರ ವಕೀಲ ಅನುಪಮ್ ದ್ವಿವೇದಿ ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುವವರೆಗೆ ಮುಸ್ಲಿಮರಿಗೆ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.

ನ್ಯಾಯಾಲಯದ ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂದು ಹೇಳಲಾದ ಪ್ರದೇಶವನ್ನು ರಕ್ಷಿಸಲು ಸುಪ್ರೀಂಕೋರ್ಟ್ ನವೆಂಬರ್ 11 ರಂದು ತನ್ನ ಹಿಂದಿನ ಆದೇಶವನ್ನು ವಿಸ್ತರಿಸಿತು. ವಾರಣಾಸಿ ನ್ಯಾಯಾಲಯ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ‘ಶಿವಲಿಂಗ’ದ ‘ವೈಜ್ಞಾನಿಕ ತನಿಖೆ’ಗೆ ಅವಕಾಶ ನೀಡಲು ನಿರಾಕರಿಸಿತ್ತು.

ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ವಝೂಖಾನಾದಲ್ಲಿ ಕಂಡುಬಂದಿರುವ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್ ಅನ್ನು ಒತ್ತಾಯಿಸಿದರು. ಆದರೆ, ಅಲ್ಲಿ ಪತ್ತೆಯಾಗಿರುವ ರಚನೆಯು ‘ಕಾರಂಜಿ’ ಎಂದು ಮುಸ್ಲಿಂ ಕಡೆಯವರು ಹೇಳಿದ್ದಾರೆ. ಹಿಂದೂ ಕಡೆಯವರು ಸೆಪ್ಟೆಂಬರ್ 22 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ‘ಶಿವಲಿಂಗ’ ಎಂದು ಹೇಳಿಕೊಳ್ಳುವ ವಸ್ತುವಿನ ಕಾರ್ಬನ್ ಡೇಟಿಂಗ್ ಅನ್ನು ಕೋರಿದ್ದರು.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನಿರಾಕರಿಸಿದ ವಾರಣಾಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನ ಮೊರೆ ಹೋಗುವುದಾಗಿ ಹಿಂದೂ ಕಕ್ಷಿದಾರರು ಹೇಳಿದ್ದಾರೆ.

ಸೆಪ್ಟೆಂಬರ್ 29 ರಂದು ವಿಚಾರಣೆಯಲ್ಲಿ, ಹಿಂದೂಗಳ ಕಡೆಯವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಮೂಲಕ ‘ಶಿವಲಿಂಗ’ದ ವೈಜ್ಞಾನಿಕ ತನಿಖೆ ಮತ್ತು ‘ಅರ್ಘಾ’ ಮತ್ತು ಅದರ ಸುತ್ತಲಿನ ಪ್ರದೇಶದ ಕಾರ್ಬನ್ ಡೇಟಿಂಗ್ ಅನ್ನು ಒತ್ತಾಯಿಸಿದರು. ಸುಪ್ರೀಂಕೋರ್ಟ್‌ನ ಮೇ 17 ರ ಆದೇಶವನ್ನು ಉಲ್ಲೇಖಿಸಿ, ವಾರಣಾಸಿ ನ್ಯಾಯಾಲಯವು ಮಾದರಿಗಳನ್ನು ತೆಗೆದುಕೊಳ್ಳುವ ಮೂಲಕ ಶಿವಲಿಂಗವನ್ನು ಹಾನಿಗೊಳಿಸಿದರೆ, ಅದು ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲಂಘಿಸುತ್ತದೆ” ಎಂದು ಹೇಳಿದೆ.

ಶಿವಲಿಂಗಕ್ಕೆ ಧಕ್ಕೆಯಾದರೆ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗಬಹುದು ಎಂದು ವಾರಣಾಸಿ ನ್ಯಾಯಾಲಯ ಹೇಳಿದೆ. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿ ಮೇ 20 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

Published On - 4:41 pm, Thu, 17 November 22