ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಮೋದಿಯವರ ಫೋನ್ ಕರೆ ಯಾಕೆ ಸ್ವೀಕರಿಸಿಲ್ಲ ಎಂಬುದಕ್ಕೆ ಕಾರಣ ನೀಡಿದ ವಿನೇಶ್ ಫೋಗಟ್

ಪ್ರಧಾನಿಯಿಂದ ಕರೆ ಬಂದಿತ್ತು ಆದರೆ ನಾನು ಮಾತನಾಡಲು ನಿರಾಕರಿಸಿದೆ. ಕರೆ ನೇರವಾಗಿ ನನಗೆ ಬಂದಿಲ್ಲ ಆದರೆ ಅಲ್ಲಿದ್ದ ಭಾರತೀಯ ಅಧಿಕಾರಿಗಳು ಅವರು (ಪಿಎಂ ಮೋದಿ) ಮಾತನಾಡಲು ಬಯಸಿದ್ದಾರೆ ಎಂದು ನನಗೆ ತಿಳಿಸಿದರು. ನಾನು ಸಿದ್ಧಳಾಗಿದ್ದೆ. ಆದಾಗ್ಯೂ, ಅವರು ಷರತ್ತುಗಳನ್ನು ಹಾಕಿದರು ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.

ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಮೋದಿಯವರ ಫೋನ್ ಕರೆ ಯಾಕೆ ಸ್ವೀಕರಿಸಿಲ್ಲ ಎಂಬುದಕ್ಕೆ ಕಾರಣ ನೀಡಿದ ವಿನೇಶ್ ಫೋಗಟ್
ವಿನೇಶ್ ಫೋಗಟ್
ರಶ್ಮಿ ಕಲ್ಲಕಟ್ಟ

Updated on: Oct 02, 2024 | 5:12 PM

ದೆಹಲಿ ಅಕ್ಟೋಬರ್ 02: ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat), ಅನರ್ಹತೆಯ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ನನಗೆ ಫೋನ್ ಕರೆ ಮಾಡಿದ್ದರು. ಆದರೆ ನಾನು ಅವರ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಈಗ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಫೋಗಟ್, ತನ್ನ ಭಾವನೆಗಳು ಮತ್ತು ಪ್ರಯತ್ನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದನ್ನು ಬಯಸದ ಕಾರಣ ಪ್ರಧಾನಿಯವರ ಫೋನ್ ಕರೆ ಸ್ವೀಕರಿಸಿಲ್ಲ ಎಂದಿದ್ದಾರೆ.

“ಪ್ರಧಾನಿಯಿಂದ ಕರೆ ಬಂದಿತ್ತು ಆದರೆ ನಾನು ಮಾತನಾಡಲು ನಿರಾಕರಿಸಿದೆ. ಕರೆ ನೇರವಾಗಿ ನನಗೆ ಬಂದಿಲ್ಲ ಆದರೆ ಅಲ್ಲಿದ್ದ ಭಾರತೀಯ ಅಧಿಕಾರಿಗಳು ಅವರು (ಪಿಎಂ ಮೋದಿ) ಮಾತನಾಡಲು ಬಯಸಿದ್ದಾರೆ ಎಂದು ನನಗೆ ತಿಳಿಸಿದರು. ನಾನು ಸಿದ್ಧಳಾಗಿದ್ದೆ. ಆದಾಗ್ಯೂ, ಅವರು ಷರತ್ತುಗಳನ್ನು ಹಾಕಿದರು. ಅದೇನೆಂದರೆ ನನ್ನ ತಂಡದಿಂದ ಯಾರೂ ಅಲ್ಲಿರಬಾರದು. ಆದರೆ ಅವರ ಕಡೆಯಿಂದ ಇಬ್ಬರು ಸಾಮಾಜಿಕ ಮಾಧ್ಯಮಕ್ಕಾಗಿ ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಾರೆ ಎಂದು ನನಗೆ ಹೇಳಿದ್ದಾರೆ. ಹಾಗಾಗಿ ನಾನು ಆ ಕರೆ ಸ್ವೀಕರಿಸಲು ನಿರಾಕರಿಸಿದೆ ಎಂದು ಅವರು ದಿ ಲಾಲನ್​​ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ವಿನೇಶ್ ಹೇಳಿದ್ದಾರೆ

“ನನ್ನ ಭಾವನೆಗಳು ಮತ್ತು ಕಠಿಣ ಪರಿಶ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡುವುದು ನನಗೆ ಇಷ್ಟವಿರಲಿಲ್ಲ.” ಸಂಭಾಷಣೆಯನ್ನು ಪ್ರಚಾರ ಮಾಡುವ ಷರತ್ತಿಲ್ಲದೆ ಪ್ರಧಾನ ಮಂತ್ರಿಯಿಂದ ನಿಜವಾದ ಕರೆಯನ್ನು ತಾನು ಪ್ರಶಂಸಿಸುತ್ತೇನೆ ಎಂದು ಫೋಗಟ್ ಹೇಳಿದ್ದಾರೆ.

“ಅವರು ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಅವರು ಅದನ್ನು ರೆಕಾರ್ಡ್ ಮಾಡದೆಯೇ ಕರೆ ಮಾಡಬಹುದಿತ್ತು ಮತ್ತು ನಾನು ಕೃತಜ್ಞಳಾಗಿರುತ್ತಿದ್ದೆ”.ನಿರೂಪಣೆಯನ್ನು ನಿಯಂತ್ರಿಸಲು ಮೋದಿ ಅವರ ಕಚೇರಿ ಷರತ್ತುಗಳನ್ನು ವಿಧಿಸಿದೆ ಎಂದು ವಿನೇಶ್ ಹೇಳಿದ್ದಾರೆ.

“ನಾನು ವಿನೇಶ್ ಜೊತೆ ಮಾತನಾಡಿದರೆ ಅವಳು ಕಳೆದ ಎರಡು ವರ್ಷಗಳ ಬಗ್ಗೆ ಕೇಳುತ್ತಾಳೆ ಎಂದು ಅವರಿಗೆ ತಿಳಿದಿರಬಹುದು. ಬಹುಶಃ ಅದಕ್ಕಾಗಿಯೇ ನನ್ನ ಕಡೆಯಿಂದ ಯಾವುದೇ ಫೋನ್ ಇರುವುದಿಲ್ಲ ಎಂದು ನನಗೆ ಸೂಚಿಸಲಾಗಿದೆ ಏಕೆಂದರೆ ಅವರು ಅವರ ಕಡೆಯಿಂದ ಎಡಿಟ್ ಮಾಡಬಹುದು. ಆದರೆ ನಾನು ಎಡಿಟ್ ಮಾಡುವುದಿಲ್ಲ. ನಾನು ಮೂಲ ವಿಡಿಯೊವನ್ನು ಪೋಸ್ಟ್ ಮಾಡುತ್ತೇನೆ. ಆದ್ದರಿಂದ ಅವರು ನಿರಾಕರಿಸಿದರು ಎಂದು ವಿನೇಶ್ ಹೇಳಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ 83 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ

ಕೇವಲ 100 ಗ್ರಾಂ ತೂಕವನ್ನು ಕಳೆದುಕೊಂಡಿದ್ದಕ್ಕಾಗಿ ಒಲಿಂಪಿಕ್ಸ್‌ನಲ್ಲಿ ತನ್ನ 50 ಕೆಜಿ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡಿದ್ದ ಫೋಗಟ್, ಆಗಿನ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಬಗ್ಗೆ ಮೋದಿ ಮೌನದಿಂದ ನಿರಾಶೆಗೊಂಡಿದ್ದಾರೆ. ವಿನೇಶ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ಇತರ ಕುಸ್ತಿಪಟುಗಳು ಸಿಂಗ್ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಒತ್ತಾಯಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Wed, 2 October 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us