Andhra Pradesh: ಪಲ್ನಾಡುವಿನಲ್ಲಿ ವೈಎಸ್‌ಆರ್‌ ಕಾಂಗ್ರೆಸ್, ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ, ನಿಷೇಧಾಜ್ಞೆ ಜಾರಿ

| Updated By: ಡಾ. ಭಾಸ್ಕರ ಹೆಗಡೆ

Updated on: Dec 17, 2022 | 10:06 AM

ಆಂಧ್ರದಲ್ಲಿ ಟಿಡಿಪಿ ನಾಯಕನ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಮಾಚರ್ಲಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Andhra Pradesh: ಪಲ್ನಾಡುವಿನಲ್ಲಿ ವೈಎಸ್‌ಆರ್‌ ಕಾಂಗ್ರೆಸ್, ಟಿಡಿಪಿ ಕಾರ್ಯಕರ್ತರ ನಡುವೆ  ಘರ್ಷಣೆ, ನಿಷೇಧಾಜ್ಞೆ ಜಾರಿ
Car
Image Credit source: India TV
Follow us on

ಆಂಧ್ರಪ್ರದೇಶದಲ್ಲಿ ಟಿಡಿಪಿ ನಾಯಕನ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಮಾಚರ್ಲಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ ಪಲ್ನಾಡು ಜಿಲ್ಲೆಯ ಮಾಚೆರ್ಲಾದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟಿಡಿಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ವೈ​ಎಸ್ಆರ್‌​ ಕಾಂಗ್ರೆಸ್-ಟಿಡಿಪಿ ಕಾರ್ಯಕರ್ತರ ಮಾರಾಮಾರಿ ನಡೆದು, ಕಚೇರಿಗೆ ಬೆಂಕಿ ಹಾಕಿ, ಮನೆಗಳ ಮೇಲೆ ಕೂಡ ದಾಳಿ ಮಾಡಿದ್ದಾರೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚರ್ಲದಲ್ಲಿ ವೈ​ಎಸ್ಆರ್‌​ ಕಾಂಗ್ರೆಸ್​ ಮತ್ತು ಟಿಡಿಪಿ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.

ಮಾಚರ್ಲಾದಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ಟಿಡಿಪಿ ಕಾರ್ಯಕರ್ತರು ರ್ಯಾಲಿ ನಡೆಸಿದ್ದರು. ಪಕ್ಷದ ಉಸ್ತುವಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ನೇತೃತ್ವದಲ್ಲಿ ಟಿಡಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಗಲಾಟೆ ಆರಂಭವಾಗಿ ಎರಡೂ ಪಕ್ಷಗಳ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಹಿಂಸಾತ್ಮಕ ಘರ್ಷಣೆ ನಡೆದ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ.
ಹಿಂಸಾತ್ಮಕ ಘರ್ಷಣೆಯ ಸಮಯದಲ್ಲಿ ವಿಧ್ವಂಸಕ ಕೃತ್ಯಗಳು ನಡೆದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ ಹಲವಾರು ಜನ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿರುವ ಸುದ್ದಿಯೂ ಇದೆ.

ಮಾಚರ್ಲ ಪಟ್ಟಣದಲ್ಲಿ ಎಲ್ಲೆಡೆ ಪೊಲೀಸ್ ಸರ್ಪಗಾವಲಿರಿಸಲಾಗಿದೆ. ಟಿಡಿಪಿ ನಾಯಕ ಬ್ರಹ್ಮರೆಡ್ಡಿ ಕುಟುಂಬ ಗುಂಟೂರಿಗೆ ಸ್ಥಳಾಂತರಿಸಲಾಗಿದೆ.

ವರದಿಗಳ ಪ್ರಕಾರ, ಘರ್ಷಣೆಗಳು ಉಲ್ಬಣಗೊಂಡಾಗ, ಪೊಲೀಸರು ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಕಾರ್ಯಕರ್ತರ ಮೇಲೆ ಸೌಮ್ಯವಾದ ಬಲವನ್ನು ಬಳಸಿದರು. ಬಳಿಕ ಗುಂಪು ಚದುರಿತು. ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳು ಸ್ಥಳಕ್ಕೆ ತಲುಪಿದವು. ಪೊಲೀಸರು ಎರಡೂ ಕಡೆಯವರ ಮನವೊಲಿಸಲು ಯತ್ನಿಸಿದರು.

ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಪಲ್ನಾಡು ಎಸ್ಪಿ ವೈ ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ. ಇದರಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಲ್ಲದೆ ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಘಟನೆಯ ವೀಡಿಯೋ ಇದೀಗ ಮುನ್ನೆಲೆಗೆ ಬಂದಿದ್ದು , ಇದೀಗ ಕಣ್ಮುಂದೆ ಬಂದಿರುವ ವಿಡಿಯೋದಲ್ಲಿ ಜನಸಾಗರವೇ ಕೈಯಲ್ಲಿ ದೊಣ್ಣೆ ಹಿಡಿದುಕೊಂಡಿರುವುದು ಕಂಡು ಬಂದಿದೆ. ವಾಹನಗಳ ಮೇಲೆ ನಿಂತು ಗಲಾಟೆ ಮಾಡುತ್ತಿದ್ದಾರೆ. ಬೈಕ್ ಸವಾರರ ಕೈಯಲ್ಲಿ ದೊಡ್ಡ ದೊಡ್ಡ ದೊಣ್ಣೆ ಇವೆ. ಆದರೆ, ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬುದು ಸ್ಪಷ್ಟವಾಗಿಲ್ಲ.ಪೊಲೀಸರು 10 ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:00 am, Sat, 17 December 22