ನೀರು ಎಂದುಕೊಂಡು ಆ್ಯಸಿಡ್ ಹಾಕಿ ಅಡುಗೆ ಮಾಡಿದ ಮಹಿಳೆ; ಉಂಡವರ ಸ್ಥಿತಿ ಗಂಭೀರ!
ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ನೀರು ಎಂದು ಭಾವಿಸಿ ಆ್ಯಸಿಡ್ ಹಾಕಿ ಅಡುಗೆ ಮಾಡಿದ್ದಾರೆ. ಈ ಅಡುಗೆ ಊಟ ಮಾಡಿದ ಆ ಮಹಿಳೆ ಸೇರಿದಂತೆ ಮನೆಯ 6 ಜನರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೀರು ಎಂದು ಭಾವಿಸಿ ಆ್ಯಸಿಡ್ ಹಾಕಿ ಬೇಯಿಸಿದ ಆಹಾರವನ್ನು ಸೇವಿಸಿದ ನಂತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ 6 ಜನರಲ್ಲಿ ಮೂವರು ವಯಸ್ಕರು ಮತ್ತು ಮೂವರು ಮಕ್ಕಳು ಎಂದು ತಿಳಿದುಬಂದಿದೆ.

ಕೊಲ್ಕತ್ತಾ, ನವೆಂಬರ್ 26: ಪಶ್ಚಿಮ ಬಂಗಾಳದ (West Bengal) ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್ನ ಒಂದು ಕುಟುಂಬದ 6 ಜನರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಅವರೆಲ್ಲರೂ ಮನೆಯಲ್ಲಿ ತಿಂದ ಊಟ. ಆ ಮನೆಯ ಮಹಿಳೆ ನೀರು ಎಂದು ಭಾವಿಸಿ ಆ್ಯಸಿಡ್ ಹಾಕಿ ಅಡುಗೆ ಮಾಡಿದ್ದರು. ಅದನ್ನು ಊಟ ಮಾಡಿದವರ ಸ್ಥಿತಿ ಗಂಭೀರವಾಗಿದೆ. ಈ ವಿಚಿತ್ರ ಘಟನೆ ಕೇಳಿ ಆಸ್ಪತ್ರೆಯ ವೈದ್ಯರು ಹಾಗೂ ಪೊಲೀಸರು ದಂಗಾಗಿದ್ದಾರೆ.
ಈ ಘಟನೆ ನವೆಂಬರ್ 23ರಂದು ಘಾಟಲ್ನ ಮನೋಹರ್ಪುರ I ಗ್ರಾಮ ಪಂಚಾಯತ್ ವ್ಯಾಪ್ತಿಯ ರತ್ನೇಶ್ವರಬತಿ ಪ್ರದೇಶದಲ್ಲಿ ನಡೆದಿದೆ. ನೀರಿನ ಬದಲು ಆಸಿಡ್ ಬಳಸಿ ಬೇಯಿಸಿದ ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ 6 ಜನರು ಅಸ್ವಸ್ಥರಾಗಿದ್ದಾರೆ. ಮೂವರು ಮಕ್ಕಳು ಸೇರಿದಂತೆ 6 ಜನರನ್ನೂ ಕೊಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ಅತ್ಯಾಚಾರ ಪ್ರಕರಣ; ಕಠಿಣ ಕ್ರಮಕ್ಕೆ ಮಮತಾ ಸರ್ಕಾರಕ್ಕೆ ಒಡಿಶಾ ಸಿಎಂ ಒತ್ತಾಯ
ಸಂಧು ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಅವರು ಬೆಳ್ಳಿ ಆಭರಣಗಳನ್ನು ತಯಾರಿಸುವ ವ್ಯವಹಾರ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ, ಕೆಲವು ಆಮ್ಲಗಳನ್ನು ಬೆಳ್ಳಿ ಪಾತ್ರೆಗಳಲ್ಲಿ ಬಳಸಲಾಗುತ್ತದೆ. ಆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆ ಬೆಳ್ಳಿ ಪಾತ್ರೆಗಳಿಗಾಗಿ ಇಟ್ಟಿದ್ದ ಆ್ಯಸಿಡ್ ಅನ್ನು ತೆಗೆದುಕೊಂಡು ಅದನ್ನು ನೀರು ಎಂದು ಭಾವಿಸಿ ಅದರಲ್ಲೇ ಅಡುಗೆ ಮಾಡಿದ್ದಾರೆ. ಆ್ಯಸಿಡ್ ಅನ್ನು ಸಾಮಾನ್ಯವಾಗಿ ನೀರು ಹಾಕಿಡುವ ಪಾತ್ರೆಯಲ್ಲಿ ಇಡಲಾಗಿತ್ತು. ಹೀಗಾಗಿ, ಆ ಮಹಿಳೆ ಅದನ್ನು ನೀರು ಎಂದು ಭಾವಿಸಿ ಅಡುಗೆ ಮಾಡಿದ್ದಾರೆ. ಅದರಲ್ಲಿ ಆ್ಯಸಿಡ್ ಹಾಕಿಟ್ಟಿರುವ ವಿಷಯ ಆಕೆಗೆ ತಿಳಿದಿರಲಿಲ್ಲ.
ಇದನ್ನೂ ಓದಿ: ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ
ಆ ಕುಟುಂಬದ 6 ಜನರು ಆಸಿಡ್ ಮಿಶ್ರಿತ ಊಟವನ್ನು ಸೇವಿಸಿದರು. ನಂತರ, ಅವರಿಗೆ ಹೊಟ್ಟೆ ನೋವು, ವಾಕರಿಕೆ ಮತ್ತು ತಲೆತಿರುಗುವಿಕೆ ಕಾಣಿಸಿಕೊಂಡ ನಂತರ ಅವರನ್ನು ತಕ್ಷಣ ಹತ್ತಿರದ ಕಡಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಅವರಿಗೆ ತುರ್ತು ಚಿಕಿತ್ಸೆ ನೀಡಿದರು.
ಸಮಸ್ಯೆಯ ಗಂಭೀರತೆಯನ್ನು ಅರಿತ ವೈದ್ಯರು, 6 ಮಂದಿಯನ್ನು ಉನ್ನತ ಚಿಕಿತ್ಸೆಗಾಗಿ ಕೋಲ್ಕತ್ತಾದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವವರ ಸ್ಥಿತಿ ಗಂಭೀರವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




