ಗುಜರಾತ್​​ನ ಮುಂದಿನ ಮುಖ್ಯಮಂತ್ರಿ ಯಾರು?-ರೇಸ್​​ನಲ್ಲಿದ್ದಾರೆ ಈ ಎಲ್ಲ ಪ್ರಮುಖ ನಾಯಕರು

TV9 Digital Desk

| Edited By: Lakshmi Hegde

Updated on: Sep 11, 2021 | 9:30 PM

ಇತ್ತೀಚೆಗೆ ಬಿಜೆಪಿ ರಾಜಕೀಯವಾಗಿ ಏನು ಲೆಕ್ಕಾಚಾರ ಹಾಕುತ್ತಿದೆ..ಯಾವ ಹೆಜ್ಜೆ ಇಡುತ್ತಿದೆ ಎಂಬುದನ್ನು ಹೇಳುವಂತಿಲ್ಲ.  ಅದಕ್ಕೆ ಉದಾಹರಣೆಯಾಗಿದ್ದು ಮೊದಲು ಉತ್ತರಾಖಂಡ.

ಗುಜರಾತ್​​ನ ಮುಂದಿನ ಮುಖ್ಯಮಂತ್ರಿ ಯಾರು?-ರೇಸ್​​ನಲ್ಲಿದ್ದಾರೆ ಈ ಎಲ್ಲ ಪ್ರಮುಖ ನಾಯಕರು
ಮನ್​ಸುಖ್​ ಮಾಂಡವಿಯಾ ಮತ್ತು ಪ್ರಫುಲ್​ ಪಟೇಲ್​

ಒಂದು ಅಚ್ಚರಿಯ ಬೆಳವಣಿಗೆಯಲ್ಲಿ, ನಿರೀಕ್ಷೆಯನ್ನೇ ಮಾಡಿರದ ರೀತಿಯಲ್ಲಿ ಇಂದು ಗುಜರಾತ್​ ಮುಖ್ಯಮಂತ್ರಿ  ವಿಜಯ್​ ರೂಪಾನಿ (Vijay Rupani) ರಾಜೀನಾಮೆ ನೀಡಿದ್ದಾರೆ. ಗುಜರಾತ್​ ವಿಧಾನಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವಾಗ ಮುಖ್ಯಮಂತ್ರಿ (Gujarat Chief Minister) ಬದಲಾವಣೆ ಅಗತ್ಯವಾದರೂ ಏನಿತ್ತು ಎಂಬುದು ಒಂದು ಪ್ರಶ್ನೆಯಾದರೆ, ವಿಜಯ್​ ರೂಪಾನಿ ರಾಜೀನಾಮೆ (Vijay Rupani Resigns)ಯಿಂದ ತೆರವಾದ ಸಿಎಂ ಹುದ್ದೆಗೆ ಏರುವವರು ಯಾರು ಎಂಬುದು ಇನ್ನೊಂದು, ತುಂಬ ಕುತೂಹಲಕಾರಿ ಪ್ರಶ್ನೆ. 

ಗುಜರಾತ್​​ನಲ್ಲಿ 2022ರ ಡಿಸೆಂಬರ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ರಾಜ್ಯದಲ್ಲಿ 182 ವಿಧಾನಸಭಾ ಕ್ಷೇತ್ರಗಳಿದ್ದು, ಇಷ್ಟು ವರ್ಷ ಬಿಜೆಪಿ ಮೇಲುಗೈ ಇದೆ..ಹಾಗೇ ಆ ಪ್ರಾಬಲ್ಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುದು ಆ ಪಕ್ಷದ ಧ್ಯೇಯ. ಒಂದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಮುನ್ನೆಡಸಲು, ಮುಂಬರುವ ಚುನಾವಣೆಯ ನೇತೃತ್ವ ವಹಿಸಲು ಒಬ್ಬ ಯೋಗ್ಯ ನಾಯಕನ್ನು ಬಿಜೆಪಿ ಇದೀಗ ಸಿಎಂ ಹುದ್ದೆಗೆ ಏರಿಸಲಿದೆ. ಹೀಗಿರುವಾಗ ಮುಖ್ಯಮಂತ್ರಿ ಹುದ್ದೆಯ ರೇಸ್​​ನಲ್ಲಿ ನಾಲ್ಕೈದು ಪ್ರಮುಖ ನಾಯಕರಿದ್ದಾರೆ. ಅವರೆಂದರೆ ಈಗ ಗುಜರಾತ್​ನ ಉಪಮುಖ್ಯಮಂತ್ರಿಯಾಗಿರುವ ನಿತಿನ್​ ಪಟೇಲ್​, ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್, ರಾಜ್ಯ ಸಚಿವ ಆರ್​. ಸಿ.ಫಲ್ದು ಮತ್ತು ಬಿಜೆಪಿ ಗುಜರಾತ್​ ರಾಜ್ಯ ಮುಖ್ಯಸ್ಥ ಸಿ.ಆರ್​.ಪಾಟೀಲ್​.  ಆದರೆ ಬಿಜೆಪಿ ಮತ್ತು ಆರ್​ಎಸ್​ಎಸ್​ ವಲಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಹೆಸರೆಂದರೆ ಗುಜರಾತ್​ನ ಬಿಜೆಪಿ ಉಪಾಧ್ಯಕ್ಷ ಗೋರ್ಧನ್​ ಜಡಾಫಿಯಾ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಪರಶೋತ್ತಮ್​ ರುಪಾಲಾ.

ಬಿಜೆಪಿ ಲೆಕ್ಕಾಚಾರ ಊಹಿಸುವಂತಿಲ್ಲ ಇತ್ತೀಚೆಗೆ ಬಿಜೆಪಿ ರಾಜಕೀಯವಾಗಿ ಏನು ಲೆಕ್ಕಾಚಾರ ಹಾಕುತ್ತಿದೆ..ಯಾವ ಹೆಜ್ಜೆ ಇಡುತ್ತಿದೆ ಎಂಬುದನ್ನು ಹೇಳುವಂತಿಲ್ಲ.  ಅದಕ್ಕೆ ಉದಾಹರಣೆಯಾಗಿದ್ದು ಮೊದಲು ಉತ್ತರಾಖಂಡ. 2017ರಲ್ಲಿ ಬಿಜೆಪಿ ಗೆದ್ದಾಗ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್​ರನ್ನು ಈ ಬಾರಿಯ ಮಾರ್ಚ್​​ನಲ್ಲಿ ಕೆಳಗಿಳಿಸಲಾಗಿದೆ. ಅವರಾದ ಬಳಿಕ ಹುದ್ದೆಗೆ ಏರಿದ್ದ ತೀರಥ್ ಸಿಂಗ್​ ಕೂಡ ರಾಜೀನಾಮೆ ನೀಡಿ ಇದೀಗ ಪುಷ್ಕರ್​ ಸಿಂಗ್​ ದಾಮಿ ಅಲ್ಲಿನ ಮುಖ್ಯಮಂತ್ರಿ.  ಪುಷ್ಕರ್ ಸಿಂಗ್​ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಅದಕ್ಕಿಂತಲೂ ದೊಡ್ಡ ಅಚ್ಚರಿ ಕರ್ನಾಟಕ. ರಾಜ್ಯದಲ್ಲಿ ಯಡಿಯೂರಪ್ಪನವರ ಬದಲಾವಣೆ ಇಲ್ಲ..ಯಾವುದೇ ಕಾರಣಕ್ಕೂ ಮಾಡೋದಿಲ್ಲ..ಎಂದು ಹೇಳುತ್ತಲೇ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಲಾಯಿತು. ಯಡಿಯೂರಪ್ಪ ಬಳಿಕ ಇನ್ಯಾರು ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಊಹೆ, ವಿಶ್ಲೇಷಣೆ ಮೇಲೆ ಹೆಸರುಗಳನ್ನು ಹೇಳಿದ್ದೇ ಬಂತು. ಕೊನೇಕ್ಷಣದವರೆಗೂ ಗುಟ್ಟಾಗಿಯೇ ಇಟ್ಟಿದ್ದ ಬಿಜೆಪಿ ಕೊನೆಗೂ ಘೋಷಿಸಿದ್ದು ಅಚ್ಚರಿಯ ಹೆಸರನ್ನೇ ಆಗಿದೆ. ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಅಂದಹಾಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನೂ ಒಂದೂವರೆ ವರ್ಷಗಳ ಕಾಲ ಸಮಯವಿದೆ.

ಇದನ್ನೂ ಓದಿ: ಟೀಂ ಇಂಡಿಯಾವನ್ನು ದೂಷಿಸುತ್ತಿದ್ದ ಆಂಗ್ಲರಿಗೆ ಇರ್ಫಾನ್ ಪಠಾಣ್ ಮಾತಿನ ಚಡಿ ಏಟು

Gujarat CM Resigns: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

(Who Will Be The Next Gujarat Chief Minister here are some Names)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada