ಎಲ್ಲಿಗೆ ಬರಬೇಕು ಹೇಳಿ, ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತೇನೆ: ಮಾಜಿ ಡಿಜಿಪಿ ಎನ್‌ಸಿ ಅಸ್ತಾನಾ ಟ್ವೀಟ್​​ಗೆ ಬಜರಂಗ್​​ ಪುನಿಯಾ ಪ್ರತಿಕ್ರಿಯೆ

ಭಾನುವಾರ ರಾತ್ರಿ ಸುದ್ದಿಯನ್ನು ಟ್ವೀಟ್ ಮಾಡಿದ ಅಸ್ತಾನಾ, ಹಿಂದಿಯಲ್ಲಿ ಹೀಗೆ ಬರಿದಿದ್ದಾರೆ. ಅಗತ್ಯವಿದ್ದರೆ ಶೂಟ್ ಕೂಡ ಮಾಡುತ್ತೇವೆ. ನೀವು ಹೇಳಿದಾಗ ಅಲ್ಲ. ಇದೀಗ ನಾವು ಕಸದ ಚೀಲದಂತೆ ಎಳೆದು ಹೊರಹಾಕಿದ್ದೇವೆ. ಆರ್ಟಿಕಲ್ 129 ಪೊಲೀಸರಿಗೆ ಗುಂಡು ಹಾರಿಸುವ ಹಕ್ಕನ್ನು ನೀಡುತ್ತದೆ ಎಂದಿದ್ದಾರೆ

ಎಲ್ಲಿಗೆ ಬರಬೇಕು ಹೇಳಿ, ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತೇನೆ: ಮಾಜಿ ಡಿಜಿಪಿ ಎನ್‌ಸಿ ಅಸ್ತಾನಾ ಟ್ವೀಟ್​​ಗೆ ಬಜರಂಗ್​​ ಪುನಿಯಾ ಪ್ರತಿಕ್ರಿಯೆ
ಬಜರಂಗ್ ಪುನಿಯಾ
ರಶ್ಮಿ ಕಲ್ಲಕಟ್ಟ

Updated on: May 29, 2023 | 4:08 PM

ಜಂತರ್ ಮಂತರ್​​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ (Wrestler’s Protest) ಮೇಲೆ ಅಗತ್ಯ ಬಂದರೆ ಗುಂಡು ಹಾರಿಸುತ್ತೇವೆ ಎಂದು ಟ್ವೀಟ್ ಮಾಡಿದ  ಕೇರಳದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎನ್‌ಸಿ ಅಸ್ತಾನಾಗೆ (NC Asthana) ಪ್ರತಿಕ್ರಿಯಿಸಿದ ಕುಸ್ತಿಪಟು ಬಜರಂಗ್ ಪುನಿಯಾ (Bajrang Punia), ನಾನು ಬುಲೆಟ್​​​ಗೆ ಎದೆಯೊಡ್ಡಲು ಸಿದ್ದ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದ ಹೊಸ ಸಂಸತ್ ಭವನದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿರುವ ಧರಣಿ ಸ್ಥಳದಲ್ಲಿ ಪೊಲೀಸ್ ಮತ್ತು ಕುಸ್ತಿಪಟುಗಳ ನಡುವೆ ಎಳೆದಾಟ, ಬಂಧನ ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಪ್ರಾರಂಭವಾಯಿತು. ಫೋಗಟ್ ಸಹೋದರಿಯರು, ಸಾಕ್ಷಿ ಮಲಿಕ್ ಮತ್ತು ಇತರರು ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದಾಗ ಪೊಲೀಸರ ಜತೆ ತಳ್ಳಾಟ, ಎಳೆದಾಟ ನಡೆದಿತ್ತು.

ಕುಸ್ತಿಪಟುಗಳು ಮತ್ತು ಇತರ ಪ್ರತಿಭಟನಾಕಾರರನ್ನು ಬಸ್‌ಗಳಿಗೆ ತಳ್ಳಿ ವಿವಿಧ ಸ್ಥಳಗಳಿಗೆ ಕರೆದೊಯ್ದ ತಕ್ಷಣ, ಪೊಲೀಸ್ ಸಿಬ್ಬಂದಿ ಕುಸ್ತಿಪಟುಗಳು ಪ್ರತಿಭಟನೆ ವೇಳೆ ಬಳಸುತ್ತಿದ್ದ ಮಂಚಗಳು, ಹಾಸಿಗೆಗಳು, ಕೂಲರ್‌ಗಳು, ಫ್ಯಾನ್‌ಗಳು ಮತ್ತು ಟಾರ್ಪಾಲಿನ್ ಸೀಲಿಂಗ್‌ಗಳನ್ನು ತೆಗೆದುಹಾಕುವ ಮೂಲಕ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲು ಪ್ರಾರಂಭಿಸಿದರು.


ಇದಾದ ನಂತರ ಭಾನುವಾರ ರಾತ್ರಿ, ಇದೇ ಸುದ್ದಿಯನ್ನು ಟ್ವೀಟ್ ಮಾಡಿದ ಅಸ್ತಾನಾ, ಹಿಂದಿಯಲ್ಲಿ ಹೀಗೆ ಬರಿದಿದ್ದಾರೆ. ಅಗತ್ಯವಿದ್ದರೆ ಶೂಟ್ ಕೂಡ ಮಾಡುತ್ತೇವೆ. ನೀವು ಹೇಳಿದಾಗ ಅಲ್ಲ. ಇದೀಗ ನಾವು ಕಸದ ಚೀಲದಂತೆ ಎಳೆದು ಹೊರಹಾಕಿದ್ದೇವೆ. ಆರ್ಟಿಕಲ್ 129 ಪೊಲೀಸರಿಗೆ ಗುಂಡು ಹಾರಿಸುವ ಹಕ್ಕನ್ನು ನೀಡುತ್ತದೆ. ಸರಿಯಾದ ಸಂದರ್ಭಗಳಲ್ಲಿ, ಆ ಆಸೆ ಕೂಡ ಈಡೇರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ವಿದ್ಯಾವಂತರಾಗಿರಬೇಕು. ಮತ್ತೊಮ್ಮೆ ಪೋಸ್ಟ್ ಮಾರ್ಟಮ್ ಟೇಬಲ್ ಮೇಲೆ ಭೇಟಿಯಾಗೋಣ.

ಮತ್ತೊಂದು ಟ್ವೀಟ್‌ನಲ್ಲಿ, ಮಾಜಿ ಡಿಜಿಪಿ,ಕೆಲವು ಮೂರ್ಖರು ಗುಂಡು ಹಾರಿಸುವ ಪೊಲೀಸರ ಹಕ್ಕನ್ನು ಅನುಮಾನಿಸುತ್ತಾರೆ. ನಿಮಗೆ ಇಂಗ್ಲಿಷ್ ಓದಲು ಬರುವುದಾದರೆ ಅಖಿಲೇಶ್ ಪ್ರಸಾದ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಓದಿ. ಓದಲು ಬರದ ಅನಕ್ಷರಸ್ಥರು ಈ ಹಕ್ಕನ್ನು ಪರೀಕ್ಷಿಸದಿರುವುದು ಉತ್ತಮ ಸಲಹೆ. ಯಾವುದೇ ಕಾರಣವಿಲ್ಲದೆ ಹೆಂಡತಿಯರು ವಿಧವೆಯರು ಮತ್ತು ಮಕ್ಕಳು ಅನಾಥರಾಗುತ್ತಾರೆ.ಯಾವುದಕ್ಕೂ ನೀವು ನಿಮ್ಮ ಮಿತಿಯಲ್ಲಿರಿ ಎಂದಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿಯ ಟ್ವೀಟ್​​​ಗೆ ಪ್ರತಿಕ್ರಿಯಿಸಿದ ಬಜರಂಗ್ ಪುನಿಯಾ ಈ ಐಪಿಎಸ್ ಅಧಿಕಾರಿ ನಮ್ಮ ಮೇಲೆ ಗುಂಡು ಹಾರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸಹೋದರ, ನಾನು ಇಲ್ಲಿ ಮುಂದೆ ನಿಂತಿದ್ದೇನೆ. ಗುಂಡು ಹೊಡೆಯಲು ಎಲ್ಲಿಗೆ ಬರಬೇಕು ಹೇಳಿ… ಬೆನ್ನು ತೋರಿಸುವುದಿಲ್ಲ, ನಿಮ್ಮ ಗುಂಡಿಗೆ ಎದೆಯೊಡ್ಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ. ಇದೊಂದು ಬಾಕಿ ಇತ್ತು, ಈಗ ನಮ್ಮೊಂದಿಗೆ ಮಾಡಿ ಎಂದು ಪುನಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಅಸ್ತಾನಾ ಅವರನ್ನು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಟೀಕಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ, ಈಗ ಪೂರ್ಣ ಪ್ರಮಾಣದ ಬಾಯಿ ಬಡುಕ. ಅಂತಹ ಉದಾತ್ತ ಸೇವೆಗಳಿಗಾಗಿ ನಮ್ಮ ದೇಶದ ತರಬೇತಿ ಎಲ್ಲಿ ಮತ್ತು ಯಾವಾಗ ತಪ್ಪಾಗಿದೆ? ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Wrestlers Protest: ಮಾನವೀಯತೆ ಮರೆತು ಮಹಿಳಾ ಕುಸ್ತಿಪಟುಗಳನ್ನು ರಸ್ತೆಯಲ್ಲಿ ಎಳೆದೊಯ್ದ ಪೊಲೀಸರು ಜಗತ್ತು ನೋಡುತ್ತಿದೆ ಎಂದ ಅಥ್ಲೀಟ್​ಗಳು

ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಭದ್ರತಾ ಸಿಬ್ಬಂದಿಯನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಪುನಿಯಾ ಮತ್ತು ಇತರ ಪ್ರತಿಭಟನಾಕಾರರ ವಿರುದ್ಧ ಗಲಭೆ ಮತ್ತು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರ ರಾಜಧಾನಿಯಾದ್ಯಂತ 700 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಕುಸ್ತಿಪಟುಗಳು ಸೇರಿದಂತೆ 109 ಪ್ರತಿಭಟನಾಕಾರರನ್ನು ಜಂತರ್ ಮಂತರ್‌ನಲ್ಲಿ ಬಂಧಿಸಲಾಗಿತ್ತು. ಬಂಧಿತರಾದ ಮಹಿಳೆಯರನ್ನು ಸಂಜೆ ನಂತರ ಬಿಡುಗಡೆ ಮಾಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Mon, 29 May 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us