Yasin Malik: ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್

ಕಳೆದ 10 ದಿನಗಳಿಂದ ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.

Yasin Malik: ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್
ಯಾಸಿನ್ ಮಲಿಕ್
Image Credit source: Hindustan Times
Edited By:

Updated on: Aug 02, 2022 | 8:56 AM

ಶ್ರೀನಗರ: ತಿಹಾರ್ ಜೈಲಿನಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ (Yasin Malik) ತನ್ನ ಪ್ರಕರಣದಲ್ಲಿ ನ್ಯಾಯಯುತ ವಿಚಾರಣೆಯನ್ನು ಕೋರಿ ದೆಹಲಿಯ ತಿಹಾರ್ ಜೈಲಿನಲ್ಲಿ (Delhi Tihar Jail) ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಉಪವಾಸ ಸತ್ಯಾಗ್ರಹವನ್ನು ಅವರು ಸೋಮವಾರ ಸಂಜೆ ಸ್ಥಗಿತಗೊಳಿಸಿದ್ದಾರೆ. ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಾಗಿರುವ ಯಾಸಿನ್ ಮಲಿಕ್ ಭಯೋತ್ಪಾದನೆಗೆ ಫಂಡಿಂಗ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, ಎರಡು ಪ್ರಕರಣಗಳಲ್ಲಿ ಖುದ್ದು ಹಾಜರಾಗುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಕಳೆದ 10 ದಿನಗಳಿಂದ ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಸೋಮವಾರ ಸಂಜೆ ತಮ್ಮ ಮನವಿಯನ್ನು ಸಂಬಂಧಿತ ಅಧಿಕಾರಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದ ನಂತರ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ರುಬಯ್ಯ ಸಯೀದ್‌ ಅಪಹರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಮ್ಮು ನ್ಯಾಯಾಲಯದಲ್ಲಿ ತಾನು ದೈಹಿಕವಾಗಿ ಹಾಜರಾಗಲು ಅನುಮತಿ ನೀಡಬೇಕೆಂಬ ಅವರ ಮನವಿಗೆ ಕೇಂದ್ರ ಸರ್ಕಾರ ಉತ್ತರಿಸಲು ನಿರಾಕರಿಸಿದಾಗ ಯಾಸಿನ್ ಮಲಿಕ್ ಜುಲೈ 22ರಂದು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರ ಮಾಡಿದ್ದರು.

ಇದನ್ನೂ ಓದಿ: Breaking Yasin Malik ಭಯೋತ್ಪಾದನೆಗೆ ನಿಧಿ ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್​​ಗೆ ಜೀವಾವಧಿ ಶಿಕ್ಷೆ

ದೆಹಲಿ ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಸಂದೀಪ್ ಗೋಯೆಲ್ ಮನವಿಯ ಮೇರೆಗೆ ಯಾಸಿನ್ ಮಲಿಕ್ ಕೈಗೊಳ್ಳಲು ನಿರ್ಧರಿಸಿದ್ದ 2 ತಿಂಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ನನ್ನ ಕೋರಿಕೆಯ ಮೇರೆಗೆ, ಜುಲೈ 22ರಿಂದ ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಪರಾಧಿ ಯಾಸಿನ್ ಮಲಿಕ್ ಸೋಮವಾರ ಸಂಜೆ ತನ್ನ ಉಪವಾಸವನ್ನು ನಿಲ್ಲಿಸಿದ್ದಾರೆ” ಎಂದು ಗೋಯೆಲ್ ಹೇಳಿದ್ದಾರೆ.

ರಕ್ತದೊತ್ತಡದಲ್ಲಿ ಏರಿಳಿತದ ನಂತರ ಕಳೆದ ವಾರ ಯಾಸಿನ್ ಮಲಿಕ್ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೈಲಿಗೆ ಹಿಂತಿರುಗಿದ ನಂತರವೂ ಅವರು ಏನನ್ನೂ ತಿನ್ನಲು ಒಪ್ಪಲಿಲ್ಲ. 1989ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ ಮತ್ತು 1990ರಲ್ಲಿ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳನ್ನು ಕೊಂದ ಪ್ರಕರಣಗಳಲ್ಲಿ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್ ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Yasin Malik: ನ್ಯಾಯಯುತ ವಿಚಾರಣೆಗೆ ಒತ್ತಾಯಿಸಿ ತಿಹಾರ್ ಜೈಲಿನಲ್ಲಿ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ

56 ವರ್ಷದ ಯಾಸಿನ್ ಮಲಿಕ್ ವಿಶೇಷ ಭಯೋತ್ಪಾದಕ ಮತ್ತು ಟಾಡಾ (TADA) ಕಾಯ್ದೆಯಡಿ ನ್ಯಾಯಾಲಯದ ಮುಂದೆ ಹಾಜರಾಗಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ನ್ಯಾಯಾಲಯವು ಈ ಹಿಂದೆ ಮೇ 19ರಂದು ಭಯೋತ್ಪಾದನೆ ಫಂಡಿಂಗ್ ಪ್ರಕರಣಗಳಲ್ಲಿ ಯಾಸಿನ್ ಮಲಿಕ್ ಅಪರಾಧಿ ಎಂದು ಸಾಬೀತು ಮಾಡಿತ್ತು. ಮೇ 25ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

Published On - 8:55 am, Tue, 2 August 22