
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ನಗರದ ಸಾಕಷ್ಟು ರಸ್ತೆಗಳು ಜಲಾವೃತವಾಗಿದ್ದರೆ, ಇದೀಗ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಪರಿಣಾಮ ಕೊಡಿಗೆಹಳ್ಳಿ ಅಂಡರ್ಪಾಸ್ ಜಲಾವೃತಗೊಂಡು ವಾಹನಗಳು ಸಿಲುಕಿಕೊಂಡಿವೆ.

ಕೊಡಿಗೆಹಳ್ಳಿ ಅಂಡರ್ಪಾಸ್ನಲ್ಲಿ ನೀರು ತುಂಬಿದ್ದರಿಂದ ಟೆಂಪೊ ಟ್ರಾವೆಲರ್, ಖಾಸಗಿ ಬಸ್ ಸಿಲುಕಿಕೊಂಡಿದೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ.

ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ತುಂಬಿ ಹರಿದಿದ್ದು, ಕೊಡಿಗೆಹಳ್ಳಿ ತಿಂಡ್ಲು ಮುಖ್ಯರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಜಲಾವೃತಗೊಂಡಿದೆ.

ಧಾರಾಕಾರ ಮಳೆಗೆ ಉನ್ನಿಕೃಷ್ಣನ್ ಜಂಕ್ಷನ್ ಮತ್ತು ಟಿವಿಎಸ್ ಕ್ರಾಸ್ ಜಂಕ್ಷನ್ ಹತ್ತಿರ ಮರ ಬಿದ್ದ ಬಿದ್ದಿದೆ. ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಯಲಹಂಕ ಮುಖ್ಯರಸ್ತೆ ರೈತ ಸಂತೆ ಬಳಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದ್ದು, ದಯಮಾಡಿ ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಚರಂಡಿ ಉಕ್ಕಿ ರಸ್ತೆ ಮೇಲೆ ಹೊಳೆಯಂತೆ ನೀರು ಹರಿದಿದೆ.