
ಬೆಂಗಳೂರು ನಗರ ಪೊಲೀಸ್ ಆಯಕ್ತರಾಗಿದ್ದ ಬಿ. ದಯಾನಂದ್ ಅವರು ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷ ಅಧಿಕಾರಿಯಾಗಿದ್ದರು.

ನಿಷ್ಠೆಯಿಂದ ಕರ್ತವ್ಯ ಪಾಲಿಸುತ್ತಿದ್ದ ಬಿ. ದಯಾನಂದ್ ಅವರು ಅಷ್ಟೇ ಜನಸ್ನೇಹಿ ಅಧಿಕಾರಿ ಕೂಡಾ ಆಗಿದ್ರು. ಹೌದು ಇವರು ತಮ್ಮ ಕಚೇರಿಗೆ ಬರುವಂತಹ ಸಾರ್ವಜನಿಕರನ್ನು ಸೌಜನ್ಯದಿಂದ ಮಾತನಾಡಿ, ಸಮಸ್ಯೆಗಳನ್ನು ಆಲಿಸಿ, ಆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು.

ನಗರದ ಆರೋಗ್ಯಕರ ಭವಿಷ್ಯಕ್ಕಾಗಿ, ನಿಷ್ಠೆಯಿಂದ ಕರ್ತವ್ಯ ಪಾಲಿಸುತ್ತಿದ್ದರು, ಸಾರ್ವಜನಿಕರ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುತ್ತಿದ್ದರು. ಹೀಗೆ ಇವರು ಸಿಸ್ಟಮ್ಯಾಟಿಕ್ ಆಗಿ ಹಾಗೂ ಜನಪರವಾಗಿ ಕೆಲಸ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅಷ್ಟೇ ಅಲ್ಲದೆ ಶಾಲಾ ಕಾಲೇಜುಗಳಿಗೆ ಹೋಗಿ ಸೈಬರ್ ಕ್ರೈಂ, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಜನರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದ ಇವರು ಜನರ ಅಚ್ಚುಮೆಚ್ಚಿನ ಪೊಲೀಸ್ ಅಧಿಕಾರಿಯಾಗಿದ್ದರು.

ಇವರ ಅಧಿಕಾರ ಅವಧಿಯಲ್ಲಿ ಈ ಮೊದಲು ಯಾವುದೇ ಘೋರ ದುರಂತ ಅಥವಾ ಘಟನೆಗಳು ನಡೆದಿರಲಿಲ್ಲ. ಆದರೆ ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭದ್ರತೆ ನಿರ್ವಹಣೆ ವೈಫಲ್ಯವಾಗಿದೆ ಎಂದು ಆರೋಪದ ಮೇರೆಗೆ ದಕ್ಷ ಅಧಿಕಾರಿ ಬಿ. ದಯಾನಂದ್ ಅವರನ್ನು ಅಮಾನತು ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.