ಬಂಗಾಲ ಉಪಸಾಗರದಲ್ಲಿ ಟ್ರಪ್ ಎಫೆಕ್ಟ್ನಿಂದ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಇನ್ನೊಂದು ವಾರ ಮಳೆಯಾಗಲಿದೆ. ನಗರದಲ್ಲಿ ಅಕ್ಟೋಬರ್ 7 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಇತ್ತೀಚೆಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಆಗುತ್ತಿದ್ದು, ಜನರು ಹೈರಾಣಾಗಿದ್ದಾರೆ.
ಮಧ್ಯಾಹ್ನವಾಗುತ್ತಿದ್ದಂತೆ ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟ ವರುಣ, ಕೆಆರ್ ಮಾರುಕಟ್ಟೆ, ಕಾರ್ಪೋರೇಷನ್, ಮೈಸೂರ್ ರೋಡ್, ಚಾಮರಾಜಪೇಟೆ, ಗಾಂಧಿಬಜಾರ್ ಸುತ್ತ ಮುತ್ತ ಮಳೆ ಸುರಿದಿದೆ. ಮಳೆಗೆ ವಾಹನ ಸಾವರರು ಪರದಾಡಿದ್ದಾರೆ.
ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ವಾಹನಗಳು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿ ನೀರು ನಿಂತುಕೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಎನ್ನುತ್ತಿದ್ದಾರೆ ಸ್ಥಳೀಯರು. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೆ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಳೆ ಅವಾಂತರಕ್ಕೆ ಸಿಟಿ ಜನ ಹೈರಾಣಾಗಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮರ ಧರೆಗುರುಳಿದ್ದು, ಕಾರುಗಳ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ.
ಹೆಣ್ಣೂರು ಮುಖ್ಯೆ ರಸ್ತೆಯ ವಡ್ಡರಪಾಳ್ಯ ಬಳಿ ಮಳೆ ನೀರು ನಿಂತಿದ್ದು, ನಿಧಾನವಾಗಿ ಸಂಚರಿಸುವಂತೆ ಬೆಂಗಳೂರು ಸಂಚಾರಿ ಪೊಲೀಸ್ ಮನವಿ ಮಾಡಿದ್ದಾರೆ.