
ನಿನ್ನೆ ರಾತ್ರಿ ಬೆಂಗಳೂರಿನ ಅನೇಕ ಕಡೆಗಳಲ್ಲಿ ಮಳೆ ಸುರಿದಿದೆ. ಆಡುಗೋಡಿ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು, ಬೊಮ್ಮನಹಳ್ಳಿ ಭಾಗದಲ್ಲಿ ಜೋರು ಮಳೆ ಆಗಿದೆ. ಜೋರು ಮಳೆಯಿಂದ ಕೆಲ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಯಿತು.

ಆಟೋ ಮಾರ್ಟ್ ಬಳಿ ಮಳೆ ನೀರು ನಿಂತಿದ್ದರಿಂದ 14 ನೇ ಮುಖ್ಯ ರಸ್ತೆ ಎಚ್ಎಸ್ಆರ್ ಲೇಔಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಭದ್ರಪ್ಪ ಲೇಔಟ್ ರೈಲ್ವೆ ಕೆಳ ಸೇತುವೆಯ ಬಳಿ ಕೂಡ ಮಳೆ ನೀರು ನಿಂತಿದ್ದರಿಂದ ಡಾಲರ್ಸ್ ಕಾಲೋನಿ ಕಡೆಗೆ ಸಂಚಾರ ನಿಧಾನಗತಿಯಲ್ಲಿತ್ತು.

ಇನ್ನು ಇಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮಳೆ ನೀರಿಂದಾಗಿ ಮುಳುಗಿ ಹೋಗಿತ್ತು. ಸಿಂಗಸಂದ್ರ ಮೆಟ್ರೋ ನಿಲ್ದಾಣದಿಂದ ನಗರದ ಕಡೆಗೆ ಸಂಚಾರ ನಿಧಾನಗತಿಯಿತ್ತು. ಸದ್ಯ ರಸ್ತೆಗಳು ಸಹಜ ಸ್ಥಿತಿಗೆ ಬಂದಿದೆ.

ಹೊಸೂರು ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿತ್ತು. ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ ಮತ್ತು ರೂಪೇನ ಅಗ್ರಹಾರದಿಂದ ಬೊಮ್ಮನಹಳ್ಳಿ ಎರಡೂ ಕಡೆಗೆ ಸಂಚಾರ ನಿಧಾನಗತಿಯಲ್ಲಿತ್ತು.

ಅದೇ ರೀತಿಯಾಗಿ ಖೋಡೆ ಕೆಳಸೇತುವೆ ಬಳಿ ಮತ್ತು ಕಸ್ತೂರಿ ನಗರದ ಬಳಿ ಕೂಡ ಮಳೆ ನೀರು ನಿಂತುಕೊಂಡಿತ್ತು. ಹೀಗಾಗಿ ವಾಹನ ಸವಾರರು ಪರದಾಡಿದ್ದಾರೆ.