
ಕಲರ್ ಫುಲ್ ವಿವಿಧ ತಳಿಯ ಹೂವಿನ ಕೃಷಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಖ್ಯಾತಿ ಹೊಂದಿದೆ. ಆದರೆ ಈ ಭಾರಿಯ ಬೇಸಿಗೆ ಹೂ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅತಿಯಾದ ತಾಪಮಾನದಿಂದ ಗಿಡಗಳು ಬೆಳೆಯುತ್ತಿಲ್ಲ, ಹೂಗಳು ಅರಳುತ್ತಿಲ್ಲ. ಮಾರುಕಟ್ಟೆಯಲ್ಲಿ ಹೂ ಸಹ ದೊರೆಯುತ್ತಿಲ್ಲ. ಯಾಕಾದರೂ ಬೇಸಿಗೆ ಬಂತು ಎನ್ನುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿವಿಧ ಹೂ ಗಳನ್ನು ಬೆಳೆಯಾಗಲಾಗುತ್ತದೆ. 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ಹೂ ಬೆಳೆಲಾಗುತ್ತದೆ. ಆದರೆ ಈಗ ತಾಪಮಾನ ಹೆಚ್ಚಾದ ಕಾರಣ, ಹೂ ಗಿಡಗಳನ್ನು ಬೆಳೆಯಲು ಕಷ್ಟ ಸಾಧ್ಯವಾಗುತ್ತಿದೆ. 37-38 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗ್ತಿದೆ. ಇದರಿಂದ ಹೂಗಳು ಬಾಡುತ್ತಿವೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮದ ರೈತ ಮುರಳಿ ಎನ್ನುವವರು ಹಗಲು ರಾತ್ರಿ ಕಷ್ಟಪಟ್ಟು ಲಕ್ಷಾಂತರ ರೂ ಬಂಡವಾಳ ಹೂಡಿ ಸೇವಂತಿ ಹೂ ಬೆಳೆದಿದ್ದಾರೆ. ಆದರೆ ವಿರೀತ ತಾಪಮಾನಕ್ಕೆ ಹೂವಿನ ಗಿಡಗಳು ಮೊಗ್ಗು ಕಟ್ಟಿದ್ದರೂ ಹೂ ಮಾತ್ರ ಬಿಡುತ್ತಿಲ್ಲ.

ಪದೇ ಪದೇ ನೀರು ಬಿಟ್ಟು ಭೂಮಿ ತಂಪಾಗಿಟ್ಟರು ಬಿಸಿಲಿಗೆ ಹೂ ಅರಳುತ್ತಿಲ್ಲ. ಮೂರು ತಿಂಗಳಿಗೆ ಹೂ ಬರಬೇಕಿತ್ತು. ಆದರೆ ಮೂರುವರೆ ತಿಂಗಳಾದರೂ ಹೂ ಅರಳುತ್ತಿಲ್ಲ. ತಾಪಮಾನ ಹೆಚ್ಚಾಗಿ ಹೂವಿನ ಗಿಡ ಬೆಳೆಯಲಾಗುತ್ತಿಲ್ಲ.

ತಂಪಾದ ಹವಗುಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಈಗ ಉಷ್ಣಾಂಶ ದಾಖಲೆ ಮಟ್ಟಕ್ಕೇರಿದೆ. ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ತಳಿಯ ಹೂವುಗಳು ಗಿಡದಲ್ಲೇ ಒಣಗುತ್ತಿದ್ದು, ಬಿಸಿಲಿನ ತಾಪ ಹೂ ಬೆಳೆಗಾರರ ಬದುಕನ್ನು ಕಮರಿಸುತ್ತಿದೆ.