
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ ರನ್ಗಳ ಮಳೆ ಹರಿಸಿದ್ದ ಟೀಂ ಇಂಡಿಯಾದ ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್ ಆರಂಭವಾದ ಬಳಿಕ ರನ್ ಬರ ಎದುರಿಸುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್ ಮರೆತವರಂತೆ ವರ್ತಿಸುತ್ತಿರುವ ಅಭಿಷೇಕ್ ಟೀಂ ಇಂಡಿಯಾವನ್ನು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇಂದು ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ ಅದೇ ಕೆಲಸ ಮಾಡಿದರು.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಸೂಪರ್ 8 ಸುತ್ತಿನ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಹೀಗಾಗಿ ಟೀಂ ಇಂಡಿಯಾ ಸೆಮಿಫೈನಲ್ಗೇರಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಅದಕ್ಕೆ ಪೂರಕವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಆದರೆ ತಂಡದ ಕಳಪೆ ಫಿಲ್ಡಿಂಗ್ ಕಾರಣದಿಂದಾಗಿ ತಂಡಕ್ಕೆ ವಿಕೆಟ್ ಪಡೆಯುವ ಹಲವು ಅವಕಾಶಗಳು ಕೈತಪ್ಪಿದವು. ಅದರಲ್ಲೂ ಎರಡು ಸುಲಭವಾದ ಕ್ಯಾಚ್ಗಳನ್ನು ಕೈಚೆಲ್ಲಿದ ಅಭಿಷೇಕ್ ಶರ್ಮಾ ಟೀಂ ಇಂಡಿಯಾ ಪಾಲಿಗೆ ಅಕ್ಷರಶಃ ವಿಲನ್ ಆದರು. ಅಭಿಷೇಕ್ ಕ್ಯಾಚ್ ಬಿಟ್ಟ ಈ ಎರಡು ಕ್ಯಾಚ್ಗಳಿಂದ ವಿಂಡೀಸ್ ಪಡೆ ಭರ್ಜರಿ ಲಾಭ ಪಡೆಯಿತು.

ವಿಂಡೀಸ್ ಪರ ಆರಂಭಿಕನಾಗಿ ಬಂದಿದ್ದ ರೋಸ್ಟನ್ ಚೇಸ್ 14 ರನ್ ಗಳಿಸಿ ಆಡುತ್ತಿದ್ದಾಗ ಐದನೇ ಓವರ್ನಲ್ಲಿ ವಿಕೆಟ್ ಪಡೆಯುವ ಅವಕಾಶ ನೀಡಿದ್ದರು. ಆದರೆ ಅಭಿಷೇಕ್ ಶರ್ಮಾ ಅತಿ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಇದರ ಲಾಭ ಪಡೆದ ಚೇಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಲ್ಲದೆ 25 ಎಸೆತಗಳಲ್ಲಿ 160 ಸ್ಟ್ರೈಕ್ ರೇಟ್ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 40 ರನ್ ಬಾರಿಸಿದರು.

19ನೇ ಓವರ್ನಲ್ಲೂ ಅಭಿಷೇಕ್ ಶರ್ಮಾ ಮತ್ತೊಂದು ಕ್ಯಾಚ್ ಕೈಚೆಲ್ಲಿದರು. ಅರ್ಷದೀಪ್ ಬೌಲ್ ಮಾಡಿದ ಈ ಓವರ್ಬಲ್ಲಿ ಪೊವೆಲ್ ನೀಡಿದ ಸರಳ ಕ್ಯಾಚ್ ಅನ್ನು ಅಭಿಷೇಕ್ ಹಿಡಿಯುವಲ್ಲಿ ವಿಫಲರಾದರು. ಇದರ ಲಾಭ ಪಡೆದ ವಿಂಡೀಸ್ ಪಡೆ ತಂಡದ ಮೊತ್ತವನ್ನು 195 ರನ್ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ಯಿತು. ಈ ಪಂದ್ಯದಲ್ಲಿ ಅಭಿಷೇಕ್ ಮಾತ್ರವಲ್ಲದೆ ಉಳಿದವರು ಕೂಡ ಅತ್ಯಂತ ಕಳಪೆ ಫಿಲ್ಡಿಂಗ್ ಮಾಡಿದರು.

ಕಳಪೆ ಫಿಲ್ಡಿಂಗ್ ನಂತರ ಅಭಿಷೇಕ್ ಶರ್ಮಾ ಬ್ಯಾಟಿಂಗ್ನಲ್ಲಾದರೂ ಒಂದೊಳ್ಳೆ ಇನ್ನಿಂಗ್ಸ್ ಆಡಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಆದರೆ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಈ ಪಂದ್ಯದಲ್ಲಿ ಅಭಿಷೇಕ್ 11 ಎಸೆತಗಳಲ್ಲಿ 2 ಬೌಂಡರಿ ಸಹಿತ 10 ರನ್ ಬಾರಿಸಿ ಔಟಾದರು.