- Kannada News Photo gallery Cricket photos CSK Coach Fleming's shocking statement about MS Dhoni stepping down from captaincy
CSK New Captain: ಧೋನಿ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಕೋಚ್ ಫ್ಲೆಮಿಂಗ್ ಶಾಕಿಂಗ್ ಹೇಳಿಕೆ
MS Dhoni Captain: ಎಂಎಸ್ ಧೋನಿ ಸಿಎಸ್ಕೆ ನಾಯಕತ್ವದಿಂದ ಕೆಳಗಿಳಿದಿದ್ದು, ರುತುರಾಜ್ ಗಾಯಕ್ವಾಡ್ ಅವರನ್ನು ನೂತನ ಕ್ಯಾಪ್ಟನ್ ಆಗಿ ಮಾಡಲಾಗಿದೆ. ಇದೀಗ ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾತನಾಡಿದ್ದಾರೆ. 2022ರಲ್ಲಿ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಾಗ ಅದಕ್ಕೆ ನಾವು ಸಿದ್ಧರಿರಲಿಲ್ಲ ಎಂದಿದ್ದಾರೆ.
Updated on: Mar 22, 2024 | 12:11 PM

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಚೆನ್ನೈನಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ಗುರುವಾರ ಸಿಎಸ್ಕೆ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿತ್ತು. ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದರು. ರುತುರಾಜ್ ಗಾಯಕ್ವಾಡ್ ಅವರನ್ನು ನೂತನ ನಾಯಕನಾಗಿ ಮಾಡಲಾಯಿತು.

ಇದೀಗ ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾತನಾಡಿದ್ದಾರೆ. 2022ರಲ್ಲಿ ಧೋನಿ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದಿದ್ದರು. ಆಗ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ಮಾಡಿದೆವು. ಆದರೆ, ಆಗ ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ ಬೇರೆ ಯಾವುದೇ ನಾಯಕನಿಗೆ ತಮ್ಮ ತಂಡ ಸಿದ್ಧವಾಗಿರಲಿಲ್ಲ ಎಂದು ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.

''2022ರಲ್ಲಿ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಾಗ ಅದಕ್ಕೆ ನಾವು ಸಿದ್ಧರಿರಲಿಲ್ಲ. ಧೋನಿಗೆ ಕ್ರಿಕೆಟ್ ಬಗ್ಗೆ ಉತ್ತಮ ತಿಳುವಳಿಕೆ ಇದೆ. ಆದರೆ ನಾವು ಕ್ಯಾಪ್ಟನ್ ಸ್ಥಾನಕ್ಕೆ ಯುವ ಆಟಗಾರರನ್ನು ಸಿದ್ಧಪಡಿಸಲು ಬಯಸಿದ್ದೇವೆ. ಈ ಬಾರಿ ಆ ಸಿದ್ಧತೆ ನಡೆಸಿದ್ದೇವೆ. ಕಳೆದ ಬಾರಿ ಎಂಎಸ್ ನಾಯಕತ್ವ ತೊರೆದಾಗ ನಾವು ಅದಕ್ಕೆ ಸಿದ್ಧರಿಲ್ಲದ ಕಾರಣ ಆಘಾತಕ್ಕೊಳಗಾಗಿದ್ದೇವೆ. ಈ ಬಾರಿ ನಮಗೆ ಎಲ್ಲ ಗೊತ್ತಿತ್ತು,'' ಎಂದು ಹೇಳಿದ್ದಾರೆ.

''ಹೊಸ ನಾಯಕನನ್ನು ಸಿದ್ಧಪಡಿಸಲು ನಾವು ಶ್ರಮಿಸುತ್ತಿದ್ದೇವೆ. ಯುವಕರನ್ನು ನಂಬಿದ್ದು ಫಲ ನೀಡಿದೆ. ನಾಯಕತ್ವದ ಬಗ್ಗೆ ರುತುರಾಜ್ ಜತೆ ಮಾತನಾಡಿದ್ದೇನೆ. ಇದು ಅವರಿಗೆ ಉತ್ತಮ ಅವಕಾಶ. ಐಪಿಎಲ್ ಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ಧೋನಿ ಫಿಟ್ ಆಗಿ ಕಾಣುತ್ತಿದ್ದು, ಈ ಬಾರಿ ಫಿಟ್ನೆಸ್ ಸಮಸ್ಯೆ ಇರುವುದಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಎಂಎಸ್ ಉತ್ತಮ ಪ್ರದರ್ಶನ ನೀಡಿದ್ದು, ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ,'' ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದರು.

ಐಪಿಎಲ್ನ 17 ನೇ ಸೀಸನ್ಗೆ ಮೊದಲು ಸಿಎಸ್ಕೆ ತಂಡವು ತನ್ನ ಹೊಸ ನಾಯಕನನ್ನು ಘೋಷಿಸಿದೆ. ರುತುರಾಜ್ ಗಾಯಕ್ವಾಡ್ ಅವರನ್ನು ತಂಡದ ನೂತನ ನಾಯಕರನ್ನಾಗಿ ಮಾಡಲಾಗಿದೆ. ಈ ಹಿಂದೆ 2022ರಲ್ಲಿಯೂ ಸಿಎಸ್ಕೆ ಇದೇ ರೀತಿಯ ನಿರ್ಧಾರ ಕೈಗೊಂಡಿತ್ತು. ಆಗ ರವೀಂದ್ರ ಜಡೇಜಾ ಅವರು ತಂಡದ ಹೊಸ ನಾಯಕರಾದರು, ಆದರೆ ಋತುವಿನ ಮಧ್ಯದಲ್ಲಿ, ಜಡೇಜಾ ನಾಯಕತ್ವದಿಂದ ಕೆಳಗಿಳಿದು ಧೋನಿ ಮತ್ತೊಮ್ಮೆ ನಾಯಕತ್ವ ವಹಿಸಿದ್ದರು.
























