- Kannada News Photo gallery Cricket photos David Warner has been ruled out Border Gavaskar Test series India and will return home Kannada Cricket News
David Warner: ಪ್ಯಾಟ್ ಕಮಿನ್ಸ್ ಬಳಿಕ ಆಸ್ಟ್ರೇಲಿಯಾ ತೆರಳಿದ ಡೇವಿಡ್ ವಾರ್ನರ್: ಕಾಂಗರೂ ಪಡೆಗೆ ದೊಡ್ಡ ಹಿನ್ನಡೆ
India vs Australia 3rd Test: ಸೋಮವಾರವಷ್ಟೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಇದೀಗ ಸ್ಟಾರ್ ಆರಂಭಿಕ ಡೇವಿಡ್ ವಾರ್ನರ್ ಕೂಡ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ಇವರು ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
Updated on: Feb 21, 2023 | 12:21 PM

ಭಾರತ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗರೂ ಪಡೆ ಆಘಾತದಲ್ಲಿದೆ. ಇದರ ನಡುವೆಯೂ ಶಾಕ್ ಮೇಲೆ ಶಾಕ್ ಅನುಭವಿಸುತ್ತಿದೆ.

ಸೋಮವಾರವಷ್ಟೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಇದೀಗ ಸ್ಟಾರ್ ಆರಂಭಿಕ ಡೇವಿಡ್ ವಾರ್ನರ್ ಕೂಡ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ಇವರು ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ವಾರ್ನರ್ ಅವರ ಮೊಣಕೈ ಮುರಿದ ಕಾರಣ ಇಂಜುರಿಗೆ ತುತ್ತಾಗಿದ್ದು ಮುಂದಿನ ಟೆಸ್ಟ್ಗಳಿಗೆ ಲಭ್ಯವಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ದ್ವಿತೀಯ ಟೆಸ್ಟ್ನ ಮೊದಲ ದಿನ ವಾರ್ನರ್ ಬ್ಯಾಟಿಂಗ್ ಮಾಡುವಾಗ ಸಿರಾಜ್ ಹಾಗೂ ಶಮಿ ಎಸೆತದ ಬೌನ್ಸರ್ಗಳು ಅನೇಕ ಬಾರಿ ಅವರ ದೇಹದ ಮೇಲೆಯೇ ಬಿತ್ತು. ಅದರಲ್ಲೂ ಒಂದು ಸಂದರ್ಭ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿದು ಪೆಟ್ಟುಬಿದ್ದಿತು. ಎರಡು ಬಾರಿ ಹೆಲ್ಮೆಟ್ಗೆ ಬಡಿಯಿತು.

ಎರಡನೇ ಟೆಸ್ಟ್ನ ಮೊದಲ ದಿನವೇ ಗಾಯಕ್ಕೆ ತುತ್ತಾಗಿದ್ದ ವಾರ್ನರ್ ನಂತರ ಭಾರತದ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ಗೂ ಬಂದಿರಲಿಲ್ಲ. ಇದೀಗ ಇವರ ಗಾಯದ ಪ್ರಮಾಣ ದೊಡ್ಡದಾಗಿರುವ ಕಾರಣ ಸರಣಿಯಿಂದಲೇ ಔಟಾಗಿದ್ದಾರೆ. ಈಗಾಗಲೇ ಇವರ ಸ್ಥಾನಕ್ಕೆ ಮ್ಯಾಟಟ್ ರೆನ್ಶಾ ಅವರನ್ನು ಆಯ್ಕೆ ಮಾಡಲಾಗಿದೆ.

ಈಗಾಗಲೇ ಸತತ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ವಾರ್ನರ್ಗೆ ಇದು ದೊಡ್ಡ ಹಿನ್ನಡೆ. ಮೊದಲ ಟೆಸ್ಟ್ನಲ್ಲಿ 1 ರನ್ ಹಾಗೂ 10 ರನ್ಗೆ ವಿಕೆಟ್ ಒಪ್ಪಿಸಿದರೆ, ದ್ವಿತೀಯ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 15 ರನ್ಗೆ ಔಟಾಗಿದ್ದರು.

ಇತ್ತ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಸೋಮವಾರ ಬೆಳಗ್ಗೆ ದಿಢಿರ್ ತಮ್ಮ ಮನೆಗೆ ತೆರಳಿದ್ದಾರೆ. ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ ಕಂಡು ಬಂದಿರುವುದರಿಂದ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿ ಆಗಿದೆ. ಕಮಿನ್ಸ್ ಕೆಲವು ದಿನಗಳ ಮಟ್ಟಿಗಷ್ಟೆ ಸಿಡ್ನಿಗೆ ತೆರಳಿದ್ದಾರೆ. ಮೂರನೇ ಟೆಸ್ಟ್ ಆರಂಭವಾಗುವ ಹೊತ್ತಿಗೆ ತಂಡ ಸೇರಿಕೊಳ್ಳುವ ನಿರೀಕ್ಷೆಯಿದೆ.

ಇಂಡೋ- ಆಸೀಸ್ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 132 ರನ್ಗಳ ಜಯ ಸಾಧಿಸಿತು. ಬಳಿಕ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದು ಬೀಗಿತ್ತು.









