- Kannada News Photo gallery Cricket photos IND vs SL after 1979 India will not win any ODI match in a year kannada news
IND vs SL: ಏಕದಿನ ಸರಣಿ ಸೋತು 45 ವರ್ಷಗಳ ನಂತರ ಬೇಡದ ದಾಖಲೆ ಬರೆದ ಟೀಂ ಇಂಡಿಯಾ
IND vs SL: ವಾಸ್ತವವಾಗಿ 2024 ರಲ್ಲಿ ಭಾರತದ ಮೊದಲ ಏಕದಿನ ಸರಣಿ ಇದಾಗಿತ್ತು. ಇದರ ಜೊತೆಗೆ ಈ ವರ್ಷದ ಕೊನೆಯ ಏಕದಿನ ಸರಣಿ ಕೂಡ ಇದೇ. ಈ ಸರಣಿಯನ್ನು ಹೊರತುಪಡಿಸಿ ಭಾರತ ಈ ವರ್ಷ ಇನ್ನ್ಯಾವುದೇ ಏಕದಿನ ಪಂದ್ಯವನ್ನು ಆಡುವುದಿಲ್ಲ. ಇದರರ್ಥ ಟೀಂ ಇಂಡಿಯಾ ಈ ವರ್ಷ ಆಡಿದ ಏಕೈಕ ಸರಣಿಯನ್ನು ಸೋತಿದೆ.
Updated on: Aug 09, 2024 | 10:41 PM

ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸ ಸೋಲಿನೊಂದಿಗೆ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವೆ ನಡೆದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದಿಂದ ಸೋಲನುಭವಿಸಿತ್ತು. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸರಣಿಯ ಕೊನೆಯ ಪಂದ್ಯ ನಡೆದಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 110 ರನ್ಗಳಿಂದ ಸೋತಿತ್ತು.

ಇದರೊಂದಿಗೆ ಟೀಂ ಇಂಡಿಯಾದ 45 ವರ್ಷಗಳ ಸುದೀರ್ಘ ಗೆಲುವಿನ ಸರಣಿಗೆ ಬ್ರೇಕ್ ಬಿದ್ದಿದೆ. ಇದರ ಜೊತೆಗೆ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಜೋಡಿಯು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಿದ ಭಾರತದ ಮೂರನೇ ನಾಯಕ ಮತ್ತು ಕೋಚ್ ಜೋಡಿ ಎನಿಸಿಕೊಂಡಿದೆ.

ವಾಸ್ತವವಾಗಿ 2024 ರಲ್ಲಿ ಭಾರತದ ಮೊದಲ ಏಕದಿನ ಸರಣಿ ಇದಾಗಿತ್ತು. ಇದರ ಜೊತೆಗೆ ಈ ವರ್ಷದ ಕೊನೆಯ ಏಕದಿನ ಸರಣಿ ಕೂಡ ಇದೇ. ಈ ಸರಣಿಯನ್ನು ಹೊರತುಪಡಿಸಿ ಭಾರತ ಈ ವರ್ಷ ಇನ್ನ್ಯಾವುದೇ ಏಕದಿನ ಪಂದ್ಯವನ್ನು ಆಡುವುದಿಲ್ಲ. ಇದರರ್ಥ ಟೀಂ ಇಂಡಿಯಾ ಈ ವರ್ಷ ಆಡಿದ ಏಕೈಕ ಸರಣಿಯನ್ನು ಸೋತಿದೆ.

ಈ ಮೂಲಕ 1979 ರ ನಂತರ ಟೀಂ ಇಂಡಿಯಾಕ್ಕೆ ವರ್ಷದಲ್ಲಿ ಒಂದೇ ಒಂದು ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಹಿಂದೆ 1979ರಲ್ಲೂ ಟೀಂ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಾಡಿತ್ತು. ಆಡಿದ್ದ ಆ ಎಲ್ಲಾ ಮೂರು ಪಂದ್ಯಗಳನ್ನು ಭಾರತ ಸೋತಿತ್ತು.

ಇದಲ್ಲದೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಭಾರತೀಯ ನಾಯಕರ ಪಟ್ಟಿಗೆ ಇದೀಗ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದಾರೆ. ರೋಹಿತ್ಗಿಂತ ಮೊದಲು ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ಹೆಸರು ಮಾತ್ರ ಈ ಪಟ್ಟಿಯಲ್ಲಿ ಸೇರಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾ 1993 ರಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.

ಇದಾದ ಬಳಿಕ 1997ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂತಹ ಸೋಲು ಕಂಡಿತ್ತು. ಇದೀಗ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಮೂರನೇ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.



















