
ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯ ಗೆದ್ದರು. ಆಡಿದ ಯದು ಪಂದ್ಯಗಳಲ್ಲಿ 23 ವಿಕೆಟ್ ಪಡೆದು ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಸಿರಾಜ್ ವಿಕೆಟ್ ಪಡೆದಿದ್ದು ಮಾತ್ರವಲ್ಲದೆ ಸತತ ಐದು ಟೆಸ್ಟ್ಗಳನ್ನು ಆಡಿದ್ದು ಮತ್ತು 1113 ಎಸೆತಗಳನ್ನು ಎಸೆದಿರುವುದು ಕೂಡ ಸುದ್ದಿಯಾಗಿತ್ತು.

ಒಂದೆಡೆ, ಬುಮ್ರಾ ಸರಣಿಯ 2 ಪಂದ್ಯಗಳನ್ನು ಆಡದಿದ್ದರೂ, ಮತ್ತೊಂದೆಡೆ, ಸಿರಾಜ್ ಮಾತ್ರ ಒಂದೇ ಒಂದು ಪಂದ್ಯದಿಂದ ಹೊರಗುಳಿಯದೆ ತಂಡಕ್ಕೆ ಅಗತ್ಯವಿದ್ದಾಗಲೆಲ್ಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸಿರಾಜ್ ಅವರ ಈ ಪ್ರದರ್ಶನದಿಂದಲೇ ತಂಡಕ್ಕೆ ಗೆಲುವು ದೊರಕಿತು ಎಂದರೇ ತಪ್ಪಾಗಲಾರದು. ಇದೀಗ ಇದಕ್ಕೆ ಪೂರಕವಾಗಿ ಹೊರಬಿದ್ದಿರುವ ಅಂಕಿಅಂಶಗಳು ಕೂಡ ಸಿರಾಜ್ ಪ್ರದರ್ಶನದ ಮೇಲೆ ತಂಡದ ಸೋಲು ಗೆಲುವು ನಿರ್ಧಾರವಾಗಲಿದೆ ಎಂಬುದನ್ನು ಬಹಿರಂಗಪಡಿಸಿವೆ.

ಟೆಸ್ಟ್ ಕ್ರಿಕೆಟ್ ಬಗ್ಗೆ ಹೇಳುವುದಾದರೆ, ಟೀಂ ಇಂಡಿಯಾ ಸಂಪೂರ್ಣವಾಗಿ ಸಿರಾಜ್ ಮೇಲೆ ಅವಲಂಬಿತವಾಗಿದೆ ಎಂದು ತೋರುತ್ತದೆ. ಸಿರಾಜ್ ಅವರ ಟೆಸ್ಟ್ ವೃತ್ತಿಜೀವನದ ಅಂಕಿಅಂಶಗಳು ಕೂಡ ಇದನ್ನೇ ಹೇಳುತ್ತಿವೆ. ಸಿರಾಜ್ ಇದುವರೆಗೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 22 ಟೆಸ್ಟ್ಗಳನ್ನು ಗೆದ್ದಿದ್ದು, 24 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಉಳಿದಂತೆ 5 ಪಂದ್ಯಗಳು ಡ್ರಾ ಆಗಿವೆ.

ಗಮನಿಸಬೇಕಾದ ಸಂಗತಿಯೆಂದರೆ ಟೀಂ ಇಂಡಿಯಾ ಗೆದ್ದ ಪಂದ್ಯಗಳಲ್ಲಿ ಸಿರಾಜ್ ಅವರ ಪ್ರದರ್ಶನ ಅದ್ಭುತವಾಗಿದೆ. ತಂಡ ಗೆದ್ದಿರುವ 22 ಪಂದ್ಯಗಳಲ್ಲಿ ಸಿರಾಜ್ 76 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಸೋತ 24 ಪಂದ್ಯಗಳಲ್ಲಿ ಸಿರಾಜ್ ಕೇವಲ 32 ವಿಕೆಟ್ಗಳನ್ನು ಕಬಳಿಸಿದ್ದಾರೆ. ಡ್ರಾ ಆದ 5 ಪಂದ್ಯಗಳಲ್ಲಿ ಸಿರಾಜ್ ಕೇವಲ 15 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಸಿರಾಜ್ ಇಲ್ಲಿಯವರೆಗೆ ಗೆದ್ದ ಪಂದ್ಯಗಳಲ್ಲಿ ನಾಲ್ಕು ಬಾರಿ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಕಬಳಿಸಿದ್ದಾರೆ. ಡ್ರಾ ಆದ ಪಂದ್ಯಗಳಲ್ಲಿ ಒಮ್ಮೆ ಮಾತ್ರ ಈ ಸಾಧನೆ ಮಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಟೀಂ ಇಂಡಿಯಾ ಸೋತ ಟೆಸ್ಟ್ ಪಂದ್ಯಗಳಲ್ಲಿ ಸಿರಾಜ್ ಒಮ್ಮೆಯೂ ಐದು ವಿಕೆಟ್ಗಳನ್ನು ಪಡೆದಿಲ್ಲ. ಈ ಅಂಕಿಅಂಶಗಳನ್ನು ಗಮನಿಸಿದರೆ, ಸಿರಾಜ್ ಮೇಲೆ ಟೀಂ ಇಂಡಿಯಾ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ನಾವು ಗಮನಿಸಬಹುದು.

ಇದಕ್ಕೆ ಉದಾಹರಣೆಯಾಗಿ ಓವಲ್ ಟೆಸ್ಟ್ ಪಂದ್ಯವನ್ನೇ ತೆಗೆದುಕೊಳ್ಳಬಹುದು. ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು 6 ರನ್ಗಳಿಂದ ಸೋಲಿಸುವಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಉರುಳಿಸಿದ್ದ ಸಿರಾಜ್, ಒಟ್ಟಾರೆ ಈ ಪಂದ್ಯದಲ್ಲಿ 9 ವಿಕೆಟ್ ಪಡೆದು ಪಂದ್ಯ ವಿಜೇತ ಪ್ರದರ್ಶನ ನೀಡಿದ್ದರು.

ಈಗ ಸಿರಾಜ್ ಏಷ್ಯಾಕಪ್ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಖಚಿತವಿಲ್ಲ. ಏಕೆಂದರೆ ಏಷ್ಯಾಕಪ್ ನಂತರ ಟೀಂ ಇಂಡಿಯಾ ತನ್ನ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಾಗಿರುವುದರಿಂದ ತಂಡದ ಮ್ಯಾನೇಜ್ಮೆಂಟ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗುತ್ತಿದೆ.