ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಫೆಬ್ರವರಿ 9 ರಿಂದ ಶುರುವಾಗಲಿದೆ. ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದೇ ಈಗ ಕುತೂಹಲ. ಇದಕ್ಕೆ ಮುಖ್ಯ ಕಾರಣ ಪ್ರಮುಖ ಆಟಗಾರರ ಅಲಭ್ಯತೆ.
ಅಂದರೆ ಈ ಸರಣಿಗೆ ಅಜಿಂಕ್ಯ ರಹಾನೆ ಹಾಗೂ ಹುನಮ ವಿಹಾರಿ ಆಯ್ಕೆಯಾಗಿಲ್ಲ. ಮತ್ತೊಂದೆಡೆ ಅಪಘಾತದಿಂದ ಗಾಯಗೊಂಡಿರುವ ರಿಷಭ್ ಪಂತ್ ತಂಡದಲ್ಲಿಲ್ಲ. ಹಾಗೆಯೇ ತಂಡಕ್ಕೆ ಆಯ್ಕೆಯಾಗಿದ್ದ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತ.
ಇಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಾಣಿಸಿಕೊಂಡರೆ ಶುಭ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಒಂದು ವೇಳೆ ಗಿಲ್ ಓಪನಿಂಗ್ ಮಾಡಿದ್ರೆ ಕೆಎಲ್ಆರ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಇನ್ನು ಕೆಎಲ್ ರಾಹುಲ್ ಹೆಚ್ಚುವರಿ ಜವಾಬ್ದಾರಿವಹಿಸಿಕೊಂಡರೆ ಸೂರ್ಯಕುಮಾರ್ ಯಾದವ್ಗೆ ಅವಕಾಶ ಸಿಗಲಿದೆ.
ಅಂದರೆ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಹಾಗೂ ಕೆಎಸ್ ಭರತ್ ಆಯ್ಕೆಯಾಗಿದ್ದಾರೆ. ಆದರೆ ಈ ಇಬ್ಬರಿಗಿಂತ ವಿಕೆಟ್ ಕೀಪಿಂಗ್ನಲ್ಲಿ ಕೆಎಲ್ ರಾಹುಲ್ ಹೆಚ್ಚಿನ ಅನುಭವ ಹೊಂದಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ಕೂಡ ಅವರೇ ವಹಿಸಿಕೊಂಡರೆ ಹೆಚ್ಚುವರಿ ಬ್ಯಾಟ್ಸ್ಮನ್ನ ಕಣಕ್ಕಿಳಿಸುವ ಆಯ್ಕೆ ಟೀಮ್ ಇಂಡಿಯಾಗೆ ಸಿಗಲಿದೆ.
ಅದರಂತೆ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡುವ ಅವಕಾಶ ದೊರೆಯಲಿದೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಸ್ಥಾನವನ್ನು ತುಂಬಬಲ್ಲ ಆಟಗಾರನ ಅವಶ್ಯಕತೆ ಟೀಮ್ ಇಂಡಿಯಾಗಿದೆ. ಹೀಗಾಗಿ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ರನ್ನು ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ.
ಆದರೆ ಸೂರ್ಯಕುಮಾರ್ಗೆ ಚಾನ್ಸ್ ಸಿಗಬೇಕಿದ್ದರೆ ಇಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ರೆ ಕೆಎಸ್ ಭರತ್ ಆಡುವ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ. ಅದರಂತೆ ನಾಗಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ಗೆ ಚೊಚ್ಚಲ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.