
IPL 2023: ಆರ್ಸಿಬಿ ತಂಡದಲ್ಲಿ ಕನ್ನಡಿಗರಿರುತ್ತಾರೋ, ಇಲ್ಲವೋ..ಆದರೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಪ್ರತಿ ವರ್ಷ ಒಬ್ಬ ಕನ್ನಡಿಗನಂತು ಇರುವುದು ಪಕ್ಕಾ...ಇದು ಈ ಬಾರಿ ಕೂಡ ಮುಂದುವರೆದಿದೆ.

ಈ ಹಿಂದೆ ಕೆಎಲ್ ರಾಹುಲ್, ಜಗದೀಶ್ ಸುಚಿತ್, ಮಯಾಂಕ್ ಅಗರ್ವಾಲ್ ಸೇರಿದಂತೆ ಅನೇಕ ಕನ್ನಡಿಗರು ಪಂಜಾಬ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಇಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸುನಿಲ್ ಜೋಶಿ ಇದ್ದರೆ, ವೇಗದ ಅಸ್ತ್ರವಾಗಿ ಯುವ ವೇಗಿ ತಂಡದಲ್ಲಿದ್ದಾರೆ.

ಹೌದು, ಪಂಜಾಬ್ ಕಿಂಗ್ಸ್ ತಂಡದಲ್ಲಿ ಈ ಬಾರಿ ಕರ್ನಾಟಕದ ವೇಗಿ ವಿಧ್ವತ್ ಕಾವೇರಪ್ಪ ಸ್ಥಾನ ಪಡೆದಿದ್ದಾರೆ. ಆದರೆ ಇದುವರೆಗೆ ಕನ್ನಡಿಗನಿಗೆ ಐಪಿಎಲ್ ಪಂದ್ಯವಾಡುವ ಅವಕಾಶ ದೊರೆತ್ತಿಲ್ಲ. ಇದೀಗ ಆರ್ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವಾಡಲು ಸಜ್ಜಾಗಿದೆ.

ಅತ್ತ ಪಂಜಾಬ್ ಕಿಂಗ್ಸ್ ಆಡಿರುವ 5 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ದಾಖಲಿಸಿದೆ. ಆದರೆ ಈ ಗೆಲುವುಗಳು ಮೂಡಿಬಂದಿರುವುದು ಬ್ಯಾಟ್ಸ್ಮನ್ಗಳ ನೆರವಿನಿಂದ. ಅಂದರೆ ಬೌಲರ್ಗಳ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ.

ಅದರಲ್ಲೂ ರಿಷಿ ಧವನ್ ಇಂಪ್ಯಾಕ್ಟ್ ಸಬ್ ಆಗಿ ಕಣಕ್ಕಿಳಿದರೂ ಬೌಲಿಂಗ್ನಲ್ಲಿ ಪರಾಕ್ರಮ ಮೆರೆಯಲು ಸಾಧ್ಯವಾಗಿಲ್ಲ. ಹಾಗೆಯೇ ತಂಡದಲ್ಲಿರುವ ಭಾರತೀಯ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರುತ್ತಿಲ್ಲ. ಹೀಗಾಗಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ವಿಧ್ವತ್ ಕಾವೇರಪ್ಪರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಏಕೆಂದರೆ 24 ವರ್ಷದ ಕರ್ನಾಟಕದ ಯುವ ವೇಗಿ 10 ಪ್ರಥಮ ದರ್ಜೆ ಪಂದ್ಯಗಳಿಂದ ಒಟ್ಟು 34 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 8 ಲೀಸ್ಟ್ ಎ ಪಂದ್ಯಗಳಿಂದ ಪಡೆದಿರುವುದು 17 ವಿಕೆಟ್ಗಳು. ಇದಲ್ಲದೆ 8 ಟಿ20 ಪಂದ್ಯಗಳನ್ನಾಡಿದ್ದು, ಈ ವೇಳೆ 18 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಮುಂದಿರುವ ಉತ್ತಮ ಆಯ್ಕೆ ವಿಧ್ವತ್ ಕಾವೇರಪ್ಪ.

ಅದರಂತೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವಿಧ್ವತ್ ಕಾವೇರಪ್ಪ ಅವರನ್ನು ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿದ್ದಾರಾ ಅಥವಾ ಇಂಪ್ಯಾಕ್ಟ್ ಸಬ್ ಆಯ್ಕೆಯ ಮೂಲಕ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

ಪಂಜಾಬ್ ಕಿಂಗ್ಸ್ ತಂಡ: ಅಥರ್ವ ಟೈಡೆ, ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಹರ್ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಾಝ, ಸ್ಯಾಮ್ ಕರನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಮೋಹಿತ್ ರಥಿ, ರಿಷಿ ಧವನ್, ಭಾನುಕಾ ರಾಜಪಕ್ಸೆ, ಗುರ್ನೂರ್ ಬ್ರಾರ್, ಬಲ್ತೇಜ್ ಸಿಂಗ್, ಲಿಯಾಮ್ ಲಿವಿಂಗ್ಸ್ಟೋನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್.