- Kannada News Photo gallery Cricket photos Yuvraj Singh Raises Concerns About Team India Middle-Order
Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್
ODI World Cup 2023: ಅಕ್ಟೋಬರ್ 5 ರಿಂದ ಶುರುವಾಗಲಿರುವ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಅಕ್ಟೋಬರ್ 8 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
Updated on: Jul 12, 2023 | 10:08 PM

ICC ODI World Cup 2023: ಏಕದಿನ ವಿಶ್ವಕಪ್ಗಾಗಿ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಕ್ರಿಕೆಟ್ ಮಹಾಸಮರದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ ಭಾರತೀಯ ಅಭಿಮಾನಿಗಳು. ಇದಕ್ಕೆ ಮುಖ್ಯ ಕಾರಣ ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯುತ್ತಿರುವುದು.

ಆದರೆ ತವರಿನಲ್ಲಿ ಪಂದ್ಯಾವಳಿ ನಡೆದರೂ ಭಾರತ ತಂಡ ಕಪ್ ಗೆಲ್ಲುವುದು ಅನುಮಾನ ಎಂದಿದ್ದಾರೆ ಯುವರಾಜ್ ಸಿಂಗ್. ಇದಕ್ಕೆ ಮುಖ್ಯ ಕಾರಣಗಳನ್ನೂ ಕೂಡ ಯುವಿ ಮುಂದಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಪ್ರಮಾಣಿಕವಾಗಿ ಹೇಳಬೇಕೆಂದರೆ, ಈ ಸಲ ಭಾರತ ಟ್ರೋಫಿ ಗೆಲ್ಲುವ ಬಗ್ಗೆ ನನಗೆ ಯಾವುದೇ ಖಚಿತತೆ ಇಲ್ಲ. ಇದಕ್ಕೆ ಮುಖ್ಯ ಕಾರಣ ತಂಡದ ಸಂಯೋಜನೆಯಲ್ಲಿ ಕಂಡು ಬರುತ್ತಿರುವ ಸಮಸ್ಯೆ ಎಂದು ತಿಳಿಸಿದ್ದಾರೆ.

ಒಬ್ಬ ದೇಶಪ್ರೇಮಿಯಾಗಿ ನನಗೂ ಭಾರತ ಗೆಲ್ಲಬೇಕೆಂಬ ಆಸೆಯಿದೆ. ಆದರೆ ಪ್ರಸ್ತುತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಸಮಸ್ಯೆಗಳಿವೆ. ಟೀಮ್ ಇಂಡಿಯಾದ ಟಾಪ್ ಆರ್ಡರ್ ಉತ್ತಮವಾಗಿದೆ. ಆದರೆ 4ನೇ ಮತ್ತು 5ನೇ ಕ್ರಮಾಂಕದ ಬ್ಯಾಟರ್ಗಳ ಪ್ರದರ್ಶನ ಬಹಳ ಮುಖ್ಯವಾಗುತ್ತದೆ.

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬ್ಯಾಟರ್ ಸ್ಕೋರ್ಗಳಿಸಿದರಷ್ಟೇ ಸಾಲುವುದಿಲ್ಲ. ಇಲ್ಲಿ ಒತ್ತಡವನ್ನು ನಿಭಾಯಿಸುವ ಆಟಗಾರನ ಅಗತ್ಯವಿದೆ. ಹೀಗಾಗಿ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಯುವರಾಜ್ ಸಿಂಗ್ ಮುಂದಿಟ್ಟಿದ್ದಾರೆ.

ಇದೇ ವೇಳೆ ವಿಶ್ವಕಪ್ಗಾಗಿ ಆಯ್ಕೆ ಮಾಡಲು 20 ಆಟಗಾರರ ಬಳಗವನ್ನು ರೂಪಿಸಬೇಕೆಂದು ಅಭಿಪ್ರಾಯಪಟ್ಟ ಯುವರಾಜ್ ಸಿಂಗ್, ಆ ಬಳಿಕ ಕೆಲ ಪೂರ್ವ ಸಿದ್ಧತಾ ಪಂದ್ಯಗಳನ್ನು ಆಯೋಜಿಸಲು ಸಲಹೆ ನೀಡಿದರು. ಈ ಮೂಲಕ 15 ಸದಸ್ಯರ ಬಲಿಷ್ಠ ತಂಡವನ್ನು ರೂಪಿಸಬೇಕೆಂದು ಯುವರಾಜ್ ಸಿಂಗ್ ತಿಳಿಸಿದರು.

ಅಂದಹಾಗೆ ಟೀಮ್ ಇಂಡಿಯಾ ಪರ 2011 ರ ಏಕದಿನ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಟೂರ್ನಿಯಲ್ಲಿ ಒಟ್ಟು 362 ರನ್ ಕಲೆಹಾಕುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದೇ ಕಾರಣದಿಂದಾಗಿ 4ನೇ ಮತ್ತು 5ನೇ ಕ್ರಮಾಂಕದಲ್ಲಿ ಆಡುವ ಆಟಗಾರ ಪಾತ್ರವು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.



















