- Kannada News Photo gallery Cricket photos Ranji Trophy 2024 Shreyas Iyer hits first First-Class century after three years
Ranji Trophy 2024: ಕೊನೆಗೂ ಆಗಸ ನೋಡಿದ ಶ್ರೇಯಸ್ ಅಯ್ಯರ್ ಬ್ಯಾಟ್
Shreyas Iyer: ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿರುವ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಪ್ರಸ್ತುತ ರಣಜಿಯಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಮಹಾರಾಷ್ಟ್ರ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
Updated on: Oct 19, 2024 | 4:03 PM

ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿರುವ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಪ್ರಸ್ತುತ ರಣಜಿಯಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಮಹಾರಾಷ್ಟ್ರ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ನಾಯಕ ರಹಾನೆ ವಿಕೆಟ್ ಪತನದ ಬಳಿಕ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಶ್ರೇಯಸ್ ಬರೋಬ್ಬರಿ ಮೂರು ವರ್ಷಗಳ ನಂತರ ಮೊದಲ ಪ್ರಥಮ ದರ್ಜೆ ಶತಕ ಬಾರಿಸಿದರು. ಅಯ್ಯರ್ ಜೊತೆಗೂಡಿದ ಯುವ ಆರಂಭಿಕ ಆಟಗಾರ ಆಯುಷ್ 200ಕ್ಕೂ ಹೆಚ್ಚು ರನ್ಗಳ ಜೊತೆಯಾಟವಾಡಿ ತಂಡವನ್ನು 300ರ ಗಡಿ ದಾಟಿಸಿದರು.

ಅಲ್ಲದೆ ಶ್ರೇಯಸ್ ಅವರ ಶತಕದ ಆಧಾರದ ಮೇಲೆ, ಮುಂಬೈ ಇದುವರೆಗೆ ಇನ್ನೂರಕ್ಕೂ ಹೆಚ್ಚು ರನ್ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ತಮ್ಮ ಇನ್ನಿಂಗ್ಸ್ನಲ್ಲಿ 131 ಎಸೆತಗಳನ್ನು ಎದುರಿಸಿದ ಅಯ್ಯರ್ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ ಶತಕ ಪೂರೈಸಿದರು. ಅಂತಿಮವಾಗಿ ಅಯ್ಯರ್ 190 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 142 ರನ್ ಬಾರಿಸಿ ಔಟಾದರು.

ಇದೀಗ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಯ್ಯರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶತಕದ ಸುದೀರ್ಘ ಬರವನ್ನು ಅಂತ್ಯಗೊಳಿಸಿದ್ದಾರೆ. 29 ವರ್ಷ ವಯಸ್ಸಿನ ಅಯ್ಯರ್ ನವೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಪ್ರಥಮ ದರ್ಜೆ ಶತಕ ಬಾರಿಸಿದ್ದರು. ಈ ಶತಕದ ಇನ್ನಿಂಗ್ಸ್ ಮೂಲಕ ಅಯ್ಯರ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆರು ಸಾವಿರಕ್ಕೂ ಹೆಚ್ಚು ರನ್ ಪೂರ್ಣಗೊಳಿಸಿದ್ದಾರೆ.

ವಾಸ್ತವವಾಗಿ 2024-25ರ ದೇಶೀಯ ಕ್ರಿಕೆಟ್ ಸೀಸನ್ನ ಆರಂಭದಿಂದಲೂ ಅಯ್ಯರ್ ಅವರ ಪ್ರದರ್ಶನ ಕಳಪೆಯಾಗಿತ್ತು. ದುಲೀಪ್ ಟ್ರೋಫಿಯಲ್ಲಿ ಅಯ್ಯರ್ ಆಡಿದ ಆರು ಇನ್ನಿಂಗ್ಸ್ಗಳಲ್ಲಿ ಕೇವಲ 154 ರನ್ ಕಲೆಹಾಕಿದ್ದರು. ಇದರಲ್ಲಿ ಎರಡು ಅರ್ಧಶತಕಗಳು ಮಾತ್ರ ಸೇರಿದ್ದವು.

ಇದಲ್ಲದೆ ಇರಾನಿ ಕಪ್ ಪಂದ್ಯದಲ್ಲಿಯೂ ಅಯ್ಯರ್ ಎರಡು ಇನ್ನಿಂಗ್ಸ್ಗಳಲ್ಲಿ 57 ಮತ್ತು 8 ರನ್ ಮಾತ್ರ ಬಾರಿಸಿದ್ದರು. ಇದರ ನಂತರ, ಕಳೆದ ವಾರ ಬರೋಡಾದಲ್ಲಿ ನಡೆದ ರಣಜಿ ಟ್ರೋಫಿಯ ಆರಂಭಿಕ ಸುತ್ತಿನ ಪಂದ್ಯದಲ್ಲಿ ಅಯ್ಯರ್ಗೆ ಖಾತೆ ತೆರೆಯಲು ಸಹ ಸಾಧ್ಯವಾಗಿರಲಿಲ್ಲ.

ಅಯ್ಯರ್ ಕಳೆದ ವರ್ಷ ಎಲ್ಲಾ ಸ್ವರೂಪಗಳಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ಅಲ್ಲದೆ ಕಳೆದ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಎರಡು ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 468 ರನ್ ಕಲೆ ಹಾಕಿದ್ದರು. ಆದರೆ ಆ ಬಳಿಕ ನಡೆದ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಫಾರ್ಮ್ನಿಂದ ಬಳಲಿದ ಅಯ್ಯರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.
