
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ, ಭಾರತೀಯ ಬ್ಯಾಟ್ಸ್ಮನ್ಗಳು ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಆದಾಗ್ಯೂ ಈ ಪಂದ್ಯದ ಸಮಯದಲ್ಲಿ ತಂಡದ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಗಂಭೀರ ಗಾಯಕ್ಕೆ ತುತ್ತಾದರು. ಇದರಿಂದ ಪಂತ್, ಕೊನೆಯ ಟೆಸ್ಟ್ನಿಂದಲೂ ಹೊರಬಿದ್ದಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ದಿನವೇ, ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನದಿಂದ ನಿರ್ಗಮಿಸಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಬಳಿಕ ಕೇವಲ ಬ್ಯಾಟಿಂಗ್ಗೆ ಮಾತ್ರ ಸೀಮಿತವಾಗಿದ್ದ ರಿಷಭ್ ಪಂತ್, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಗಾಯದ ಬಗ್ಗೆ ದೊಡ್ಡ ಮಾಹಿತಿಯನ್ನು ನೀಡಿದ್ದಾರೆ.

ರಿಷಭ್ ಪಂತ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಮ್ನಲ್ಲಿ ಇಂಜುರಿ ಕಾಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕಾಲಿಗೆ ಪ್ಲಾಸ್ಟರ್ ಧರಿಸಿ ಕೈ ಯಲ್ಲಿ ಊರುಗೋಲು ಹಿಡಿದುಕೊಂಡಿದ್ದಾರೆ. ಇದರೊಂದಿಗೆ, ಅವರು ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ.

‘ನಿಮ್ಮೆಲ್ಲರ ಪ್ರೀತಿ ಮತ್ತು ಶುಭಾಶಯಗಳನ್ನು ನಾನು ಕೃತಜ್ಞನಾಗಿದ್ದೇನೆ. ಇದು ನಿಜವಾದ ಶಕ್ತಿಯ ಮೂಲವಾಗಿದೆ. ನನ್ನ ಮೂಳೆ ಮುರಿತ ಗುಣವಾದ ನಂತರ ಮತ್ತೆ ಪುನರ್ವಸತಿಯನ್ನು ಪ್ರಾರಂಭಿಸುತ್ತೇನೆ. ದೇಶಕ್ಕಾಗಿ ಆಡುವುದು ಯಾವಾಗಲೂ ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಾನು ಇಷ್ಟಪಡುವದನ್ನು ಮಾಡಲು ಮತ್ತೆ ಕಾಯಲು ಸಾಧ್ಯವಿಲ್ಲ' ಎಂದು ರಿಷಭ್ ಪಂತ್ ಬರೆದಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ದಿನದ ಭಾರತದ ಇನ್ನಿಂಗ್ಸ್ನ 68 ನೇ ಓವರ್ನಲ್ಲಿ, ಕ್ರಿಸ್ ವೋಕ್ಸ್ ಎಸೆದ ವೇಗದ ಯಾರ್ಕರ್ ಚೆಂಡು ಪಂತ್ ಅವರ ಅವರ ಕಾಲಿಗೆ ತಗುಲಿತು. ಪಂತ್ ರಿವರ್ಸ್-ಸ್ವೀಪ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅವರ ಶೂಗೆ ತಗುಲಿತು. ನಂತರ ಪಂತ್ ನೋವಿನಿಂದ ನರಳುತ್ತಾ ರಿಟೈರ್ಡ್ ಹರ್ಟ್ ಆಗುವ ಮೂಲಕ ಮೈದಾನ ತೊರೆದಿದ್ದರು. ಆ ಬಳಿಕ ಬ್ಯಾಟಿಂಗ್ಗೆ ಬಂದಿದ್ದ ಪಂತ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು.