- Kannada News Photo gallery Cricket photos Rohit Sharma Reveals Why Yuzvendra Chahal Was Ignored For Asia Cup 2023
Asia Cup 2023: ಯುಜ್ವೇಂದ್ರ ಚಾಹಲ್ರನ್ನು ತಂಡದಿಂದ ಕೈಬಿಟ್ಟಿದ್ಯಾಕೆ? ಕಾರಣ ನೀಡಿದ ರೋಹಿತ್
Asia Cup 2023: ಏಷ್ಯಾಕಪ್ ಹಾಗೂ ವಿಶ್ವಕಪ್ಗೆ ಟೀಂ ಇಂಡಿಯಾದಲ್ಲಿ ಖಚಿತವಾಗಿ ಸ್ಥಾನ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಗೂಗ್ಲಿ ಮಾಸ್ಟರ್ ಯುಜುವೇಂದ್ರ ಚಾಹಲ್ರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಚಾಹಲ್ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಕುಲ್ದೀಪ್ ಯಾದವ್ಗೆ ಸಿಕ್ಕಂತೆ ನಿರಂತರ ಅವಕಾಶಗಳು ಸಿಗಲಿಲ್ಲ.
Updated on: Aug 21, 2023 | 3:25 PM

2023ರ ಏಕದಿನ ಏಷ್ಯಾಕಪ್ಗೆ 17 ಸದಸ್ಯರ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಅಚ್ಚರಿಯೆಂಬಂತೆ ಕೆಲವು ಆಟಗಾರರು ತಂಡದಲ್ಲಿ ಆಯ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಇನ್ನು ಕೆಲವು ಆಟಗಾರರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ತಂಡದಲ್ಲಿ ಆಯ್ಕೆಯಾಗದ ಪ್ರಮುಖ ಆಟಗಾರರಲ್ಲಿ ಸಂಜು ಸ್ಯಾಮ್ಸನ್ (ಬ್ಯಾಕ್ ಅಪ್), ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಭುವನೇಶ್ವರ್ ಕುಮಾರ್ ಹಾಗೂ ಯುಜುವೇಂದ್ರ ಚಾಹಲ್ರಂತಹ ಆಟಗಾರರು ಸೇರಿದ್ದಾರೆ.

ಅದರಲ್ಲೂ ಏಷ್ಯಾಕಪ್ ಹಾಗೂ ವಿಶ್ವಕಪ್ಗೆ ಟೀಂ ಇಂಡಿಯಾದಲ್ಲಿ ಖಚಿತವಾಗಿ ಸ್ಥಾನ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಗೂಗ್ಲಿ ಮಾಸ್ಟರ್ ಯುಜುವೇಂದ್ರ ಚಾಹಲ್ರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ವಾಸ್ತವವಾಗಿ ಯುಜ್ವೇಂದ್ರ ಚಹಾಲ್ ಈ ವರ್ಷ ಕೇವಲ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ಜನವರಿ 2023 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರೆ, ಇನ್ನೊಂದು ಜನವರಿ 2023 ರಂದು ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಚಾಹಲ್ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಕುಲ್ದೀಪ್ ಯಾದವ್ಗೆ ಸಿಕ್ಕಂತೆ ನಿರಂತರ ಅವಕಾಶಗಳು ಸಿಗಲಿಲ್ಲ. ಇದೀಗ ಏಷ್ಯಾಕಪ್ ತಂಡದಿಂದ ಚಾಹಲ್ರನ್ನು ಕೈಬಿಟ್ಟಿದ್ಯಾಕೆ ಎಂಬುದರ ಬಗ್ಗೆ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟತೆ ನೀಡಿದ್ದಾರೆ.

ಚಾಹಲ್ ಆಯ್ಕೆ ಮಾಡದ ಬಗ್ಗೆ ಮಾತನಾಡಿದ ರೋಹಿತ್, "ನಾವು ಕೇವಲ 17 ಸ್ಲಾಟ್ಗಳನ್ನು ಹೊಂದಿದ್ದರಿಂದ ನಮಗೆ ಚಹಾಲ್ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ರವಿ ಅಶ್ವಿನ್, ಯುಜ್ವೇಂದ್ರ ಚಹಾಲ್ ಮತ್ತು ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರಿಗೆ ವಿಶ್ವಕಪ್ ಬಾಗಿಲು ಇನ್ನೂ ತೆರೆದಿದೆ ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೀಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಚಹಾಲ್ ಹೊರಗಿಡುವುದರ ಬಗ್ಗೆ ಮಾತನಾಡಿ, ನಮಗೆ ಒಬ್ಬ ಮಣಿಕಟ್ಟಿನ ಸ್ಪಿನ್ನರ್ (Wrist Spinner) ಆಯ್ಕೆಗೆ ಮಾತ್ರ ಅವಕಾಶವಿತ್ತು. ಹೀಗಾಗಿ ಕುಲ್ದೀಪ್ರನ್ನು ಆಯ್ಕೆ ಮಾಡಿದೆವು. ಚಾಹಲ್ ಒಬ್ಬ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಾವು ತಂಡದ ಸಮತೋಲನವನ್ನು ನೋಡಬೇಕಾಗಿತ್ತು.

ಅಲ್ಲದೆ ತಂಡದಲ್ಲಿ ಇಬ್ಬರು ಮಣಿಕಟ್ಟಿನ ಸ್ಪಿನ್ನರ್ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿತ್ತು. ಚಾಹಲ್ ತಂಡದಲ್ಲಿ ಆಯ್ಕೆಯಾಗದಿರುವುದು ದುರದೃಷ್ಟಕರ ಎಂದು ಅಜಿತ್ ಅಗರ್ಕರ್ ಹೇಳಿಕೆ ನೀಡಿದ್ದಾರೆ.

ಏಷ್ಯಾಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಬ್ಯಾಕ್ಅಪ್).



















