ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವಿನ ನಾಗಲೋಟ ಮುಂದುವರೆದಿದೆ. ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರೋಹಿತ್ ಪಡೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಭಾರತ ಪರ ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಮಿಂಚಿದರೆ, 274 ರನ್ಗಳ ಟಾರ್ಗೆಟ್ ಬೆನ್ನಟ್ಟುವಾಗ ವಿರಾಟ್ ಕೊಹ್ಲಿ 95 ರನ್ ಸಿಡಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಹಾಗಾಯೆ ಜಡೇಜಾ ಅಜೇಯ 39 ರನ್ ಗಳಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಆಟದ ಬಗ್ಗೆ ಏನು ಹೇಳಿದ್ದಾರೆ ನೋಡಿ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತಾಡಿದ ರೋಹಿತ್ ಶರ್ಮಾ, ನಾವು ಟೂರ್ನಮೆಂಟ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದೇವೆ. ನಮ್ಮ ಅರ್ಧ ಕೆಲಸ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಸಮತೋಲಿತವಾಗಿರುವುದು ಮುಖ್ಯ. ಮುಂದಿನ ಪಂದ್ಯಗಳ ಬಗ್ಗೆ ತುಂಬಾ ಯೋಚಿಸಬಾರದು. ಈಗಿನ ಪರಿಸ್ಥಿತಿಗೆ ತಕ್ಕಂತೆ ಇರುವುದು ಮುಖ್ಯ ಎಂದು ಹೇಳಿದ್ದಾರೆ.
ಮೊಹಮ್ಮದ್ ಶಮಿ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಅವರು ಈರೀತಿಯ ಪರಿಸ್ಥಿತಿಗಳಲ್ಲಿ ಅನುಭವವನ್ನು ಹೊಂದಿದ್ದಾರೆ. ಅವರು ಕ್ಲಾಸ್ ಬೌಲರ್. ಒಂದು ಹಂತದಲ್ಲಿ, ನಾವು 300 ಪ್ಲಸ್ ನೋಡುತ್ತಿದ್ದೆವು. ಆದರೆ, ಬ್ಯಾಕ್ ಎಂಡ್ನಲ್ಲಿರುವ ನಮ್ಮ ಬೌಲರ್ಗಳಿಗೆ ಕ್ರೆಡಿಟ್ ಸಲ್ಲಬೇಕು ಎಂಬುದು ರೋಹಿತ್ ಶರ್ಮಾ ಮಾತು.
ನಾನು ನನ್ನ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದೇನೆ. ನಾವು ಗೆದ್ದಿದ್ದಕ್ಕೆ ಸಂತೋಷವಾಗಿದೆ. ವಿರಾಟ್ ಕೊಹ್ಲಿ ಇಷ್ಟು ವರ್ಷ ನಮಗಾಗಿ ಈ ರೀತಿಯ ಆಟವನ್ನು ಆಡುತ್ತಾ ಬರುತ್ತಿದ್ದಾರೆ. ಪಂದ್ಯವನ್ನು ಫಿನಿಶ್ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು. ನಾವು ಮಧ್ಯಮ ಓವರ್ನಲ್ಲಿ ಕೆಲವು ವಿಕೆಟ್ಗಳನ್ನು ಕಳೆದುಕೊಂಡಾಗ ಕೊಹ್ಲಿ ಮತ್ತು ಜಡೇಜಾ ಆಸರೆಯಾದರು ಎಂದು ರೋಹಿತ್ ಹೇಳಿದ್ದಾರೆ.
ಇಂದು ನಮ್ಮ ಫೀಲ್ಡಿಂಗ್ ಅದ್ಭುತ ಎಂಬಂತೆ ಇರಲಿಲ್ಲ. (ಜಡೇಜಾ ಕ್ಯಾಚ್ ಬಿಟ್ಟ ಬಗ್ಗೆ) ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರು. ಈ ರೀತಿಯ ಸಂಗತಿಗಳು ಸಂಭವಿಸುತ್ತವೆ. ಫೀಲ್ಡಿಂಗ್ ಮುಂದೆ ಅನೇಕ ವಿಷಯಗಳನ್ನು ನಿರ್ಧರಿಸುತ್ತದೆ. ನಾವು ಬೇರೆಬೇರೆ ಕಡೆ ಪ್ರಯಾಣಿಸಿ ಅಲ್ಲಿನ ತಾಣದಲ್ಲಿ ಆಡಲಿ ಇಷ್ಟಪಡುತ್ತೇವೆ - ರೋಹಿತ್ ಶರ್ಮಾ.
5 ವಿಕೆಟ್ ಪಡೆದುಕೊಂಡ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿ, ಮೊದಲ ಎಸೆತದಲ್ಲಿ ವಿಕೆಟ್ ಪಡೆದ ನಂತರ ನನ್ನ ಆತ್ಮವಿಶ್ವಾಸ ದುಪ್ಪಟ್ಟಾಯಿತು. ನಿಮ್ಮ ತಂಡದ ಸದಸ್ಯರು ಉತ್ತಮವಾಗಿ ಆಟವಾಡುತ್ತಿದ್ದರೆ, ನೀವು ಅವರನ್ನು ಬೆಂಬಲಿಸಬೇಕು, ತಂಡವು ಉತ್ತಮವಾಗಿ ಆಡುವುದು ಮುಖ್ಯ, ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಶಮಿ ಹೇಳಿದ್ದಾರೆ.