
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ತಿಂಗಳುಗಳು ಕಾಲ ಮಾತ್ರ ಉಳಿದಿವೆ. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿ ಕೂಡ ಸಿದ್ಧವಾಗಿದೆ. ಅದರಂತೆ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಶುರುವಾಗಲಿದೆ. ಆದರೆ ಈ ಮಹಾ ಕ್ರಿಕೆಟ್ ಕದನಕ್ಕಾಗಿ ಇನ್ನೂ ಕೂಡ ಟೀಮ್ ಇಂಡಿಯಾ ರೂಪುಗೊಂಡಿಲ್ಲ. ಇದಕ್ಕೆ ಸಾಕ್ಷಿಯೇ ಇತ್ತೀಚೆಗಿನ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲು.

ಈ ಹಿಂದೆ ಏಕದಿನ ವಿಶ್ವಕಪ್ಗಾಗಿ ಬಲಿಷ್ಠ ಬಳಗವನ್ನು ರೂಪಿಸಿಕೊಳ್ಳುವುದಾಗಿ ಬಿಸಿಸಿಐ ತಿಳಿಸಿತ್ತು. ಅದರಂತೆ 20 ಆಟಗಾರರನ್ನು ಫೈನಲ್ ಮಾಡಿ ಅವರಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ಪ್ಲ್ಯಾನ್ ರೂಪಿಸಲಾಗಿತ್ತು.

ಆದರೀಗ ಹೀಗೆ ಆಯ್ಕೆಯಾದ ಆಟಗಾರರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಇನ್ನು ಕೆಲವರು ಕಳಪೆ ಪ್ರದರ್ಶನ ನೀಡಿದ್ದಾರೆ. ಇದುವೇ ಈಗ ಬಿಸಿಸಿಐನ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಭಾರತದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಬಿಸಿಸಿಐಗೆ ಇದು ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.

ಹೀಗಾಗಿ ಮತ್ತೊಮ್ಮೆ ಐಸಿಸಿ ಟ್ರೋಫಿಗೆ ಮುತ್ತಿಕ್ಕಲು ಬಿಸಿಸಿಐ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ. ಅದಕ್ಕಾಗಿ ಟೀಮ್ ಇಂಡಿಯಾದ ಹಿರಿಯ ಆಟಗಾರ ಶಿಖರ್ ಧವನ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐ ಇತ್ತೀಚೆಗಷ್ಟೇ ಪ್ರಕಟಿಸಿರುವ ನೂತನ ವಾರ್ಷಿಕ ಒಪ್ಪಂದದಲ್ಲಿ ಶಿಖರ್ ಧವನ್ ಅವರನ್ನು ಕೂಡ ಆಯ್ಕೆ ಮಾಡಲಾಗಿದೆ.

ಬಿಸಿಸಿಐನ C ಗ್ರೇಡ್ನಲ್ಲಿ ಶಿಖರ್ ಧವನ್ ಹೆಸರು ಕಾಣಿಸಿಕೊಂಡಿದೆ. ಕಳೆದ ಕೆಲ ತಿಂಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಧವನ್ ಅವರನ್ನು ಸಿ ಗ್ರೇಡ್ನಲ್ಲಿ ಉಳಿಸಿಕೊಳ್ಳಲು ಮುಂಬರುವ ಏಕದಿನ ವಿಶ್ವಕಪ್ ಕಾರಣ ಎನ್ನಲಾಗುತ್ತದೆ.

ಅಲ್ಲದೆ ಇದೇ ಗ್ರೇಡ್ನಲ್ಲಿ ಸಂಜು ಸ್ಯಾಮ್ಸನ್ ಕೂಡ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ಗೆ ಸತತ ಅವಕಾಶ ನೀಡುತ್ತಿರುವ ಪರಿಣಾಮ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವಕಾಶ ವಂಚಿತರಾಗುತ್ತಿದ್ದಾರೆ. ಇದೀಗ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಗಾಯಗೊಂಡಿದ್ದಾರೆ.

ಅಂದರೆ ಮುಂಬರುವ ಏಕದಿನ ಸರಣಿಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಕಂಡು ಬರುವುದು ಖಚಿತ. ಇದೇ ಕಾರಣದಿಂದಾಗಿ ಸಂಜು ಸ್ಯಾಮ್ಸನ್ ಹಾಗೂ ಶಿಖರ್ ಧವನ್ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ಗ್ರೇಡ್-ಸಿ ಒಪ್ಪಂದವನ್ನು ಮುಂದುವರೆಸಿದೆ ಎನ್ನಲಾಗಿದೆ.

ಹೀಗಾಗಿ ಮುಂಬರುವ ಏಕದಿನ ಸರಣಿಗಳಲ್ಲಿ ಧವನ್, ಸಂಜು ಅವಕಾಶ ಪಡೆಯುವ ಸಾಧ್ಯತೆಯಿದೆ. ಆ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ರೆ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಖಚಿತ ಎನ್ನಬಹುದು.