
ಮಹಿಳಾ ವಿಶ್ವಕಪ್ 2025 ರ ಸ್ಪರ್ಧಿ ಎಂದು ಪರಿಗಣಿಸಲಾದ ಟೀಂ ಇಂಡಿಯಾ, ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ದೊಡ್ಡ ಹಿನ್ನಡೆ ಅನುಭವಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧವೂ ಸೋಲನುಭವಿಸಿದೆ. ಭಾನುವಾರ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆಲ್ಲಬಹುದಿತ್ತು, ಆದರೆ ಸ್ಮೃತಿ ಮಂಧಾನ ಔಟಾದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು.

ಅಂತಿಮವಾಗಿ ತಂಡಕ್ಕೆ 5 ರನ್ಗಳ ಸೋಲು ಎದುರಾಯಿತು. ಪಂದ್ಯದ ಬಳಿಕ ಮಾತನಾಡಿದ ನಾಯಕಿ ಹರ್ಮನ್ಪ್ರೀತ್ ಕೌರ್, ಸೋಲಿಗೆ ಕಳಪೆ ಶಾಟ್ ಆಯ್ಕೆಯೇ ಕಾರಣ ಎಂದು ದೂಷಿಸಿದರು ಮತ್ತು ಸ್ಮೃತಿ ಮಂಧಾನ ಅವರ ಹೆಸರನ್ನು ಉಲ್ಲೇಖಿಸಿದರು. ಸ್ಮೃತಿ ಮಂಧಾನ ವಿಕೆಟ್ ಪತನದ ಬಳಿಕ ಪಂದ್ಯ ನಮ್ಮ ಕೈಜಾರಿತು ಎಂದಿದ್ದಾರೆ. ಹಾಗೆಯೇ ಸ್ಮೃತಿ ಕೂಡ ಈ ಸೋಲಿಗೆ ನಾನಾ ಕಾರಣ ಎಂದಿದ್ದಾರೆ.

ಇಂಗ್ಲೆಂಡ್ ನೀಡಿದ 289 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ ಉತ್ತಮ ಸ್ಥಾನದಲ್ಲಿತ್ತು. ಆದರೆ ಕೊನೆಯಲ್ಲಿ ಎಡ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ತಂಡದ ಪರ ಅತ್ಯಧಿಕ 88 ರನ್ಗಳ ಇನ್ನಿಂಗ್ಸ್ ಆಡಿದ ಮಂಧಾನ, ನಾಯಕಿ ಹರ್ಮನ್ಪ್ರೀತ್ ಕೌರ್ ಅವರೊಂದಿಗೆ 125 ಮತ್ತು ದೀಪ್ತಿ ಶರ್ಮಾ ಅವರೊಂದಿಗೆ 67 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ತನ್ನ ಕಳಪೆ ಶಾಟ್ ಆಯ್ಕೆಯೇ ಸೋಲಿಗೆ ಕಾರಣ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಂಧಾನ, ‘ನಮ್ಮ ಶಾಟ್ ಆಯ್ಕೆಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಇದು ನನ್ನಿಂದ ಪ್ರಾರಂಭವಾಯಿತು, ಆದ್ದರಿಂದ ನಮ್ಮ ಶಾಟ್ ಆಯ್ಕೆ ಉತ್ತಮವಾಗಿರಬೇಕು ಎಂದು ನಾನು ನಂಬುತ್ತೇನೆ. ನಮಗೆ ಪ್ರತಿ ಓವರ್ಗೆ ಆರು ರನ್ಗಳು ಮಾತ್ರ ಬೇಕಾಗಿತ್ತು. ಬಹುಶಃ ನಾವು ಆಟವನ್ನು ಮತ್ತಷ್ಟು ಮುನ್ನಡೆಸಬೇಕಾಗಿತ್ತು. ವಿಕೆಟ್ಗಳ ಕುಸಿತ ನನ್ನಿಂದಲೇ ಪ್ರಾರಂಭವಾದ ಕಾರಣ ನಾನು ಇದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ.

ವಾಸ್ತವವಾಗಿ ಪಂದ್ಯದ 42 ನೇ ಓವರ್ನ ಎರಡನೇ ಎಸೆತದಲ್ಲಿ ಸ್ಮೃತಿ ಮಂಧಾನಾ ಔಟ್ ಆದರು. ಅವರು ಔಟ್ ಆದಾಗಲೂ, ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದಿತ್ತು, ಏಕೆಂದರೆ ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಇಬ್ಬರೂ ಅನುಭವಿ ಆಟಗಾರ್ತಿಯರಾಗಿದ್ದರು. 47 ನೇ ಓವರ್ನ ಹೊತ್ತಿಗೆ ಅವರೂ ಔಟಾದರು, ಮತ್ತು ಅಂತಿಮವಾಗಿ, ಅಂಜೋತ್ ಮತ್ತು ಸ್ನೇಹ್ ರಾಣಾ ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ.