T20 World Cup 2024: ಬಾರ್ಬಡೋಸ್ನಲ್ಲಿ ನಡೆದ ರಣರೋಚಕ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ 17 ವರ್ಷಗಳ ಬಳಿಕ ಭಾರತ ತಂಡವು 2ನೇ ಬಾರಿಗೆ ಟಿ20 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ.
ಹೀಗೆ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಒಟ್ಟು 15 ಆಟಗಾರರಿದ್ದಾರೆ. ಆದರೆ ಇವರಲ್ಲಿ ಮೂವರು ಆಟಗಾರರಿಗೆ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೂ ಭಾರತದ ಪರ ಕಣಕ್ಕಿಳಿಯದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ...
ಸಂಜು ಸ್ಯಾಮ್ಸನ್: ಈ ಬಾರಿಯ ಟಿ20 ವಿಶ್ವಕಪ್ಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ಗೆ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಕ್ಕಿಲ್ಲ. ರಿಷಭ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಕಾರಣ ಸ್ಯಾಮ್ಸನ್ ಬೆಂಚ್ ಕಾಯಬೇಕಾಯಿತು.
ಯುಜ್ವೇಂದ್ರ ಚಹಲ್: ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ಗೂ ಪ್ಲೇಯಿಂಗ್ ಇಲೆವೆನ್ನಲ್ಲಿ ಒಮ್ಮೆಯೂ ಅವಕಾಶ ಸಿಕ್ಕಿಲ್ಲ. ಟೂರ್ನಿಯುದ್ದಕೂ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ಚಹಲ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿರಲಿಲ್ಲ.
ಯಶಸ್ವಿ ಜೈಸ್ವಾಲ್: ಟಿ20 ವಿಶ್ವಕಪ್ಗೆ ಆರಂಭಿಕನಾಗಿ ಆಯ್ಕೆಯಾದ ಯಶಸ್ವಿ ಜೈಸ್ವಾಲ್ ಕೂಡ ಬೆಂಚ್ ಕಾದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರಿಂದ ಜೈಸ್ವಾಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಕ್ಕಿಲ್ಲ.
ಇನ್ನು ಈ ಬಾರಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ರೋಹಿತ್ ಶರ್ಮಾ. 8 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಹಿಟ್ಮ್ಯಾನ್ 257 ರನ್ ಕಲೆಹಾಕಿದ್ದಾರೆ. ಹಾಗೆಯೇ 8 ಪಂದ್ಯಗಳಿಂದ ಒಟ್ಟು 17 ವಿಕೆಟ್ ಕಬಳಿಸಿ ಅರ್ಷದೀಪ್ ಸಿಂಗ್ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದಾರೆ.
ಟಿ20 ವಿಶ್ವಕಪ್ 2024 ಗೆದ್ದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.