
ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ತಮಿಳುನಾಡು ತಂಡಕ್ಕೆ ಪುದುಚೇರಿ ತಂಡವು ಶಾಕ್ ನೀಡಿದೆ. ಬಲಿಷ್ಠ ಆಟಗಾರರನ್ನೇ ತುಂಬಿರುವ ತಮಿಳುನಾಡು ತನ್ನ ನೆರೆಯ ಪುದುಚೇರಿ ವಿರುದ್ದ ಕೇವಲ 1 ರನ್ಗಳಿಂದ ಸೋಲನುಭವಿಸಿದೆ. ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದ್ದ ತಮಿಳುನಾಡು ತಂಡ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಮೋಘ ಪ್ರದರ್ಶನ ಮುಂದುವರೆಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಪುದುಚೇರಿ ಸೋಲುಣಿಸುವ ಮೂಲಕ ಜಯ ನಾಗಾಲೋಟಕ್ಕೆ ಕಡಿವಾಣ ಹಾಕಿದೆ.

ಮಳೆ ಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪುದುಚೇರಿ ನಿಗದಿತ 49 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ತಂಡದ ಪರ ಏಳನೇ ಕ್ರಮಾಂಕದ ಬ್ಯಾಟ್ಸ್ಮನ್ ಫಾಬಿದ್ ಅಹ್ಮದ್ ಗರಿಷ್ಠ 87 ರನ್ ಗಳಿಸಿದರು. 84 ಎಸೆತಗಳನ್ನು ಎದುರಿಸಿದ ಫಾಬಿದ್ 7 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು.

ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಪುದುಚೇರಿಯನ್ನು ಈ ಸಣ್ಣ ಸ್ಕೋರ್ನಲ್ಲಿ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 10-ಓವರ್ಗಳ ಆಫ್-ಸ್ಪಿನ್ ಬೌಲಿಂಗ್ನಲ್ಲಿ 48 ರನ್ಗಳಿಗೆ 5 ವಿಕೆಟ್ ಪಡೆದು ಸುಂದರ್ ಮಿಂಚಿದ್ದರು.

ಇದಕ್ಕೆ ಉತ್ತರವಾಗಿ ತಮಿಳುನಾಡು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 44 ಓವರ್ಗಳಲ್ಲಿ 206 ರನ್ಗಳ ಗುರಿ ಪಡೆಯಿತು. ತಂಡದ ಪರ ನಾಯಕ ನಾರಾಯಣ್ ಜಗದೀಸನ್ ಮತ್ತು ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಅರ್ಧಶತಕಗಳನ್ನು ಬಾರಿಸಿದರು.

ಆದರೆ ತಂಡವು ಕೇವಲ 204 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪುದುಚೇರಿ ತಂಡವು 1 ರನ್ನ ರೋಚಕ ಜಯ ಸಾಧಿಸಿತು. ಇನ್ನು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಫಾಬಿದ್ ಬೌಲಿಂಗ್ನಲ್ಲೂ ಮಿಂಚಿದ್ದರು. ಆಫ್ ಬ್ರೇಕ್ ನ ಮ್ಯಾಜಿಕ್ ಪ್ರದರ್ಶಿಸಿದ ಫಾಬಿದ್ 9 ಓವರ್ ಗಳಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್ ಪಡೆದರು.