- Kannada News Photo gallery Cricket photos Virat Kohli again in trouble BCCI Sourav Ganguly May Send Show Cause Notice To Team India Test Captain
Virat Kohli: ಸದ್ಯದಲ್ಲೇ ಬಿಸಿಸಿಐಯಿಂದ ಮತ್ತೊಂದು ಮಹತ್ವದ ಘೋಷಣೆ: ವಿರಾಟ್ ಕೊಹ್ಲಿಗೆ ಬೆಂಬಿಡದ ಸಂಕಷ್ಟ
BCCI vs Virat Kohli: ದಕ್ಷಿಣ ಆಫ್ರಿಕಾ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿ ಸಿಡಿಸಿದ ಬಾಂಬ್ ಇಂದು ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕೊಹ್ಲಿ ಆಡಿದ ಮಾತು ಈಗ ಅವರಿಗೇ ಉಲ್ಟಾ ಹೊಡೆಯುವಂತೆ ಮಾಡಿದೆ.
Updated on: Dec 17, 2021 | 9:45 AM

ಕ್ರೀಡಾ ವಲಯದಲ್ಲಿ ಈಗ ಭಾರತ ಕ್ರಿಕೆಟ್ ತಂಡದ್ದೇ ಸುದ್ದಿ. ಕಳೆದೊಂದು ವಾರದಿಂದ ಟೀಮ್ ಇಂಡಿಯಾ ಸಾಕಷ್ಟು ವಿಷಯಗಳ ಚರ್ಚೆಗೆ ಎಡೆಮಾಡಿಕೊಟ್ಟೊದೆ. ಆರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದಿಢೀರ್ ಆಗಿ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ ಪಟ್ಟ ಕೊಟ್ಟರೆ, ಟೆಸ್ಟ್ ತಂಡಕ್ಕೂ ರೋಹಿತ್ ಅವರನ್ನು ಉಪ ನಾಯಕನಾಗಿ ನೇಮಿಸಿತು.

ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ಉತ್ತಮ ಗೆಲುವಿನ ಸರಾಸರಿ ಹೊಂದಿದ್ದರೂ ಕ್ಯಾಪ್ಟನ್ ಸ್ಥಾನದಿಂದ ದಿಢೀರ್ ಕೆಳಗಿಳಿಸಿದ್ದಕ್ಕೆ ವಿರಾಟ್ ಬೇಸರಗೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ದಕ್ಷಿಣ ಆಫ್ರಿಕಾ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಕೊಹ್ಲಿ ಸುದ್ದಿಗೋಷ್ಠಿ ನಡೆಸಿ ಸಿಡಿಸಿದ ಬಾಂಬ್ ಇಂದು ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕೊಹ್ಲಿ ಆಡಿದ ಮಾತು ಈಗ ಅವರಿಗೇ ಉಲ್ಟಾ ಹೊಡೆಯುವಂತೆ ಮಾಡಿದೆ.

ಹೌದು, ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಿತ್ತು ಆದರೂ ಸಹ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದರು ಎಂಬ ಹೇಳಿಕೆಯನ್ನು ಗಂಗೂಲಿ ಈ ಹಿಂದೆ ನೀಡಿದ್ದರು. ಆದರೆ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇ ಬೇರೆಯಾಗಿತ್ತು.

ತಾನು ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಬದಲಾಗಿ ಬಿಸಿಸಿಐ ತನ್ನ ಮನವಿಯನ್ನು ಸ್ವೀಕರಿಸಿತು ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿ ಸಂಚಲನ ಸೃಷ್ಟಿಸಿದರು. ಇದರಿಂದ ಕೊಹ್ಲಿ ಈಗ ಬಿಸಿಸಿಐಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಂಡಳಿ ಅಧ್ಯಕ್ಷರ ಮಾತಿಗೆ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಎಬ್ಬಿಸಿರುವ ಬಿರುಗಾಳಿ ಈಗ ಅವರಿಗೆ ತಿರುಗಿ ಬೀಳುವಂತಹ ಪರಿಸ್ಥಿತಿ ಬಂದೊದಗಿದೆ. ಕ್ರಿಕೆಟಿಗರ ಕೇಂದ್ರಿಯ ಗುತ್ತಿಗೆ ನಿಯಮಾವಳಿಗಳ ಪ್ರಕಾರ, ಯಾವ ಆಟಗಾರನೂ ಮಂಡಳಿ ಅಥವಾ ಅಧಿಕಾರಿಗಳ ವಿರುದ್ಧ ಟೀಕೆಗಳನ್ನು ಮಾಡುವಂತಿಲ್ಲ. ಇಲ್ಲಿ ಕೊಹ್ಲಿ ಈ ನಿಯಮವನ್ನು ಮೀರಿದ್ದಾರೆ ಎನ್ನಲಾಗುತ್ತಿದೆ.

ಇದರ ಜೊತೆಗೆ ಕೊಹ್ಲಿ ಹೇಳಿದ ಮಾತುಗಳು ಅವರ ನೇರ ಹೇಳಿಕೆಗಳಲ್ಲ. ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತುಕ್ರಮದ ಮಾನದಂಡವೂ ಗೊಂದಲಮಯವಾಗಿದೆ. ಮಂಡಳಿಯ ವರ್ಚಸ್ಸು ಕುಂದಿಸುವಂತೆ ನಡೆದುಕೊಂಡಿರುವ ವಿರಾಟ್ ಕೊಹ್ಲಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಸಿಸಿಐ ಮುಂದಾದರೆ, ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಅವರು ಟೆಸ್ಟ್ ತಂಡದ ನಾಯಕತ್ವವನ್ನೂ ಕಳೆದುಕೊಂಡರೆ ಅಚ್ಚರಿ ಇಲ್ಲವೆನಿಸಿದೆ.

ಮೂಲಗಳ ಪ್ರಕಾರ ಬಿಸಿಸಿಐ ಸದ್ಯ ಕೊಹ್ಲಿ ಸುದ್ದಿಗೋಷ್ಠಿಯ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ಗಳನ್ನು ಪರಿಶೀಲಿಸುತ್ತಿದ್ದು, ಅವರ ಯಾವ ಮಾತುಗಳನ್ನು ಆಕ್ಷೇಪಾರ್ಹವಾಗಿ ಪರಿಗಣಿಸಬಹುದು ಎಂಬುದರ ಪರಾಮರ್ಶೆ ನಡೆಸುತ್ತಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕವಷ್ಟೇ ಕೊಹ್ಲಿಗೆ ಶೋಕಾಸ್ ನೋಟಿಸ್ ಜಾರಿಯಾಗಬಹುದು ಎನ್ನಲಾಗಿದೆ.
