ಈ ಬಾರಿಯ ಐಪಿಎಲ್ ರಿಟೈನ್ ಪ್ರಕ್ರಿಯೆಗೂ ಮುನ್ನ ಹಲವು ತಂಡಗಳು ನನ್ನ ಖರೀದಿಸಲು ಬಯಸಿತ್ತು ಎಂಬುದನ್ನು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಕೆಲ ಫ್ರಾಂಚೈಸಿಗಳು ನನ್ನನ್ನು ಮೆಗಾ ಹರಾಜಿನಲ್ಲಿ ಭಾಗವಹಿಸುವಂತೆ ಕೇಳಿಕೊಂಡಿತ್ತು. ಹೀಗೆ ಹಲವು ಬಾರಿ ನನ್ನಲ್ಲಿ ಮನವಿ ಮಾಡಲಾಗಿತ್ತು. ಇದಾಗ್ಯೂ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಉಳಿಯಲು ನಿರ್ಧರಿಸಿದೆ ಎಂದು ಖುದ್ದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಐಪಿಎಲ್ 2021 ರಲ್ಲಿ ಆರ್ಸಿಬಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ, ಇತರ ಐಪಿಎಲ್ ತಂಡಗಳು ನನ್ನನ್ನು ಹಲವು ಬಾರಿ ಸಂಪರ್ಕಿಸಿದ್ದವು. ಮೆಗಾ ಹರಾಜಿಗೆ ಹೆಸರು ನೀಡುವಂತೆ ಕೇಳಿಕೊಂಡವು. ನಾನು ಅದರ ಬಗ್ಗೆ ಯೋಚಿಸಬೇಕು ಎಂದು ನಯವಾಗಿ ಆಫರ್ ಅನ್ನು ತಿರಸ್ಕರಿಸಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಆರ್ಸಿಬಿ ನನ್ನ ಜೀವನದ ಒಂದು ಭಾಗವಾಗಿದೆ. ಈ ತಂಡಕ್ಕೆ ನಾನು ಸಂಪೂರ್ಣ ಪ್ರಾಮಾಣಿಕತೆಯಿಂದ ಇರುವೆ. ಆರ್ಸಿಬಿ ಲೀಗ್ನ ಮೊದಲ 3 ವರ್ಷಗಳಲ್ಲಿ ನನಗೆ ಅವಕಾಶ ನೀಡಿತು. ನನ್ನ ಮೇಲೆ ನಂಬಿಕೆಯಿರಿಸಿತ್ತು. ಇದು ನನಗೆ ತುಂಬಾ ವಿಶೇಷವಾಗಿದೆ. ನನಗೆ ಹಲವು ತಂಡಗಳಿಗೆ ಅವಕಾಶ ಸಿಕ್ಕಿತ್ತು. ಆದರೆ ಅವರು ನನ್ನನ್ನು ಹಾಗೆ ನಂಬುವುದಿಲ್ಲ ಎಂಬುದು ಗೊತ್ತಿದೆ. ಅಷ್ಟೇ ಅಂತಹ ಬೆಂಬಲ ಕೂಡ ಸಿಗುವುದಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಇನ್ನು ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲದಿರುವ ಬಗ್ಗೆ ಮಾತನಾಡಿದ ಕೊಹ್ಲಿ, 2016ರ ಫೈನಲ್ ಪಂದ್ಯದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ನಾವು 8 ರನ್ಗಳಿಂದ ಸೋಲನುಭವಿಸಿತ್ತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ನಾವು ಸೋತಿದ್ದೆವು. ಆ ಸೋಲು ಈಗಲೂ ಕಾಡುತ್ತಿದೆ ಎಂದು ತಿಳಿಸಿದರು.
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಈ ಬಾರಿ ಆರ್ಸಿಬಿ ತಂಡವು ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ರಿಟೈನ್ ಆಗಿದ್ದಾರೆ.
ಇನ್ನುಳಿದ ಆಟಗಾರರನ್ನು ಫೆಬ್ರವರಿ 12 ಮತ್ತು 13 ರಂದು ನಡೆಯುವ ಮೆಗಾ ಹರಾಜಿನಲ್ಲಿ ಆರ್ಸಿಬಿ ಖರೀದಿಸಲಿದೆ.