- TV9 Kannada Photo gallery Dharwad Krishi Mela created a world of colorful flowers Here are the photos
ಬಣ್ಣ ಬಣ್ಣದ ಹೂವಿನ ಲೋಕ ಸೃಷ್ಠಿಸಿದ ಧಾರವಾಡದ ಕೃಷಿ ಮೇಳ; ಇಲ್ಲಿದೆ ಫೋಟೋಸ್
ಹೂವು ಅಂದರೆ ಯಾರಿಗೆ ಇಷ್ಟವಾಗೋಲ್ಲ ಹೇಳಿ? ಹೂವು ಪರಿಸರದ ಅದ್ಭುತ ಸೃಷ್ಟಿ. ಈ ಹೂವುಗಳ ಲೋಕದಲ್ಲಿ ಮುಳುಗಿದರೆ ಹೊತ್ತು ಹೋಗೋದೇ ಗೊತ್ತಾಗೋದಿಲ್ಲ. ಇಂಥ ಅದ್ಭುತ ಹೂವುಗಳ ನೂರಾರು ಬಗೆ ಒಂದೇ ಸೂರಿನಲ್ಲಿ ನೋಡಲು ಸಿಕ್ಕರೆ? ಸ್ವರ್ಗವೇ ಧರೆಗಿಳಿದ ಅನುಭೂತಿಯಲ್ಲವೇ? ಅಂಥ ಅನುಭೂತಿಗೆ ಧಾರವಾಡದ ಕೃಷಿ ಮೇಳ ಸಾಕ್ಷಿಯಾಗಿದೆ.
Updated on: Sep 10, 2023 | 5:16 PM

ಗುಲಾಬಿ, ಸೇವಂತಿ, ಕಾರ್ನೇಶನ್, ಅಂಥೋರಿಯಂ, ಗ್ಲ್ಯಾಡಿಯೋಲಸ್, ಲಿಲ್ಲಿ, ಜರ್ಬೆರಾ- ಒಂದಾ? ಎರಡಾ? ನೂರಾರು ಬಗೆಯ ಹೂವುಗಳ ರಾಶಿ. ಅದನ್ನು ಅಚ್ಚರಿಯಿಂದ ಸಂತೋಷದಿಂದ ನೋಡುತ್ತಿರುವ ಯುವತಿಯರು ಮತ್ತು ಮಕ್ಕಳು. ತಮ್ಮವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿರುವ ಯುವಕರು. ಇಂಥ ಬಗೆ ಬಗೆಯ ಬಣ್ಣ ಬಣ್ಣದ ಹೂವುಗಳ ಲೋಕಕ್ಕೆ ಸಾಕ್ಷಿಯಾಗಿದ್ದು ಧಾರವಾಡದ ಕೃಷಿ ಮೇಳ.

ಇಡೀ ಕೃಷಿ ಮೇಳಕ್ಕೆ ಒಂದು ಬಗೆಯ ಆಕರ್ಷಣೆ ಇದ್ದರೆ, ಅದೆಲ್ಲಕ್ಕಿಂತ ದೊಡ್ಡದಾದ ಆಕರ್ಷಣೆ ಈ ಫಲಪುಷ್ಪ ಪ್ರದರ್ಶನದ್ದು. ಕೃಷಿ ಮೇಳಕ್ಕೆ ಬರುವ ಬಹುತೇಕರು ಮರೆಯದೇ ಭೇಟಿ ಕೊಡೋದು ಈ ಫಲ-ಪುಷ್ಪ ಪ್ರದರ್ಶನದ ಸ್ಥಳಕ್ಕೆ.

ರೈತರ ಜನಾಭಿವೃದ್ಧಿ ಕೇಂದ್ರದ ಕಟ್ಟಡದಲ್ಲಿ ಆಯೋಜಿಸಲಾಗಿರೋ ಈ ಫಲ-ಪುಷ್ಪ ಪ್ರದರ್ಶನ ಕೃಷಿ ಮೇಳದ ಹೈಲೈಟ್ ಅಂದರೆ ತಪ್ಪಾಗಲಾರದು. ಈ ಪ್ರದರ್ಶನದಲ್ಲಿ ಒಂದೆಡೆ ಹೂವುಗಳು ತಮ್ಮ ಸೌಂದರ್ಯವನ್ನು ಜಗತ್ತಿಗೆ ತೋರಿಸುತ್ತಿದ್ದರೆ, ಅವುಗಳನ್ನು ನೋಡಲು ಬರೋ ಯುವತಿಯರು, ಮಹಿಳೆಯರು, ಮಕ್ಕಳು ಅವುಗಳ ಅಂದ, ಬಣ್ಣ ನೋಡಿ ಜಗತ್ತನ್ನೇ ಮರೆಯೋ ಖುಷಿಯಲ್ಲಿದ್ದರು.

ಅದರೊಂದಿಗೆ ಪ್ರತಿಯೊಂದು ಹೂವಿನ ಮುಂದೆ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳೋ ಸಂಭ್ರಮ. ಗಂಟೆಗಟ್ಟಲೇ ಸುತ್ತಿದರೂ ನೋಡಲು ಮುಗಿಯದಷ್ಟು ಹೂವುಗಳ ವೆರೈಟಿ. ಇನ್ನು ಕೇವಲ ಸುಂದರ ಹೂವಿಗಷ್ಟೇ ಇಲ್ಲಿ ಅವಕಾಶ ಅನ್ನುವಂತಿಲ್ಲ. ಇವುಗಳೊಂದಿಗೆ ಬೋನ್ಸಾಯಿ ಮರಗಳು, ಜನರ ಗಮನ ಸೆಳೆದವು.

ಇನ್ನು ಕಲ್ಲಂಗಡಿ ಹಣ್ಣುಗಳಲ್ಲಿ ನಾಡಿನ ಗಣ್ಯರ ಭಾವಚಿತ್ರಗಳನ್ನು ಕೆತ್ತಿದ ಕಲೆಯಂತೂ ಎಲ್ಲರನ್ನೂ ಕೈಬೀಸಿ ಕರೆಯುತ್ತಿವೆ. ಇದರೊಂದಿಗೆ ಬಗೆ ಬಗೆಯ ಹೂವುಗಳಿಂದ ತಯಾರಿಸಿರೋ ಬಗೆ ಬಗೆಯ ಕಲಾಕೃತಿಗಳು ಹಾಗೂ ಹೂವುಗಳಿಂದಲೇ ಮಾಡಿರೋ ರಂಗೋಲಿ ಎಲ್ಲರನ್ನು ಬೆರಗುಗೊಳಿಸುತ್ತಿವೆ.

ಇನ್ನು ಸಿರಿಧಾನ್ಯಗಳನ್ನು ಉತ್ತೇಜಿಸುವ ಹಾಗೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ಬಾರಿ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು ಘೋಷವಾಕ್ಯದಡಿ ಕೃಷಿ ಮೇಳವವನ್ನು ಆಯೋಜಿಸಲಾಗಿದೆ. ಇದೇ ಕಾರಣಕ್ಕೆ ಹೂವುಗಳೊಂದಿಗೆ ಸಿರಿ ಧಾನ್ಯಗಳನ್ನು ಬಳಸಿಕೊಂಡು ಬಗೆ ಬಗೆಯ ಕಲಾಕೃತಿ ಹಾಗೂ ರಂಗೋಲಿಗಳನ್ನು ಬಿಡಿಸಲಾಗಿದೆ.

ಇವುಗಳಂತೂ ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ಒಟ್ಟಿನಲ್ಲಿ ಈ ಬಾರಿ ಬರ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬರೋದಿಲ್ಲ ಅಂದುಕೊಂಡರೂ ಈ ಪ್ರದರ್ಶನವನ್ನು ನೋಡಿದರೆ ಆ ಮಾತು ಸುಳ್ಳು ಅನ್ನೋದು ಸಾಬೀತಾಗುತ್ತಿದೆ.

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
Read More



