
ಸಂಕ್ರಾಂತಿ, ಸೂರ್ಯ ತನ್ನ ಪಥ ಬದಲಾಯಿಸುವ ದಿನ. ಈ ದಿನವನ್ನು ಎಲ್ಲೆಡೆ ಅತೀ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕೂಡ ಕರೆಯಲಾಗುತ್ತೆ. ಇಂಥ ದಿನದಂದು ಮಹಿಳೆಯರಿಗಂತೂ ಖುಷಿಯೋ ಖುಷಿ. ಬಗೆ ಬಗೆಯ ಅಡುಗೆ ಮಾಡಿ, ಹೊಸ ಬಟ್ಟೆಗಳನ್ನು ಧರಿಸಿ ಹಬ್ಬವನ್ನು ಆಚರಿಸುತ್ತಾರೆ.

ಇಂದು ಮಕರ ಸಂಕ್ರಾಂತಿ. ಈ ದಿನದಂದು ನಗರದ ಸಾಧನಕೇರಿ ಉದ್ಯಾನವನದಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ತಮ್ಮ ತಮ್ಮ ಮನೆಯಿಂದ ಖುಷಿಖುಷಿಯಿಂದ ಒಂದೊಂದು ಬಗೆಯ ಅಡುಗೆ ಮಾಡಿಕೊಂಡು ಬಂದು ಹಬ್ಬ ಆಚರಿಸಿ ಸಂಭ್ರಮಿಸಿದರು.

ಸಜ್ಜಿ ರೊಟ್ಟಿ, ರಾಗಿ ರೊಟ್ಟಿ, ಎಳ್ಳು ಹಚ್ಚಿದ ರೊಟ್ಟಿ, ಮಾದಲಿ, ಎಣ್ಣೆಕಾಯಿ ಪಲ್ಲೆ, ಕೆಂಪು ಚಟ್ನಿ, ಶೇಂಗಾ ಹೋಳಿಗೆ, ಮೊಸರನ್ನ, ಪುಳಿಯೊಗರೆ, ಚಿತ್ರಾನ್ನ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ತಂದು, ಗಂಗಾ ಮಾತೆಗೆ ನೈವೇದ್ಯ ಮಾಡಿ, ಭಕ್ತಿ ಸಮರ್ಪಿಸಿದರು.

ಈ ಹಬ್ಬವನ್ನು ಸುಗ್ಗಿಯ ಹಬ್ಬವೆಂದೂ ಕರೆಯುತ್ತಾರೆ. ಬಗೆ ಬಗೆಯ ಬೆಳೆಗಳು ರೈತರ ಕೈಗೆ ಬಂದಿರುವ ಸಮಯವಿದು. ಹೀಗಾಗಿ ಈ ಹಬ್ಬವನ್ನು ದೇಶದ ಬಹುತೇಕ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸುತ್ತಾರೆ. ಇನ್ನು ಧಾರವಾಡದಲ್ಲಿ ನಡೆದ ಈ ಹಬ್ಬದಲ್ಲಿ ರಾಗಬದ್ಧವಾಗಿ ಮಹಿಳೆಯರು ಸಂಕ್ರಾಂತಿ ಹಾಡುಗಳನ್ನು ಹಾಡಿ, ಸಂಭ್ರಮಪಟ್ಟರು.

ಮಹಿಳೆಯರೆಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಬಳೆ, ನತ್ತು, ಬೋರಮಳ, ಬೆಂಡೋಲೆ, ಡಾಬು ಧರಿಸಿ ಬಂದಿದ್ದ ಮಹಿಳೆಯರ ಸಂಭ್ರಮ ಹೇಳತೀರದ್ದಾಗಿತ್ತು. ಪರಸ್ಪರ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸಿದರು. ಪ್ರತಿವರ್ಷವೂ ಸಂಭ್ರಮದಿಂದ ಸಂಕ್ರಾಂತಿ ಆಚರಿಸುವ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ಈ ಬಾರಿಯೂ ಆಚರಿಸಿ ಖುಷಿಪಟ್ಟರು.

ಇತ್ತೀಚಿನ ದಿನಗಳಲ್ಲಿ ಹಬ್ಬಗಳ ಆಚರಣೆ ಕಡಿಮೆಯಾಗಿದೆ. ಹೀಗಿರುವಾಗ ಜಾನಪದ ಸಂಶೋಧನಾ ಕೇಂದ್ರವು ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಮಹತ್ವದ ಕೆಲಸ ಮಾಡುತ್ತಿರೋದಂತೂ ಸತ್ಯ.