
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ದೊಡ್ಡಬಳ್ಳಾಪುರ ಆಕಾಶದಲ್ಲಿ ಇಂದು ಬಣ್ಣ ಬಣ್ಣದ ಗಾಳಿಪಟಗಳು ಹಾರಿ ಮಿಂಚಿದವು. ವಿವಿಧ ವಿನ್ಯಾಸದ ಗಾಳಿಪಟಗಳನ್ನು ಕಂಡು ಕುಟುಂಬ ಸಮೇತ ಆಗಮಿಸಿದ ಸಾರ್ವಜನಿಕರು ಹಾಗೂ ಮಕ್ಕಳು ಫುಲ್ ಖುಷ್ ಆದರು.

ದೊಡ್ಡಬಳ್ಳಾಪುರದಲ್ಲಿ 'ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಂಸ್ಕೃತಿ ಸಂಘ'ದ ವತಿಯಿಂದ ಆಷಾಢ ಮಾಸದ ವೇಗದ ಗಾಳಿಯ ಹಿನ್ನೆಲೆಯಲ್ಲಿ 10ನೇ ವರ್ಷದ ಅದ್ದೂರಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಬೆಳಗ್ಗಿನಿಂದಲೇ ನೂರಾರು ಸ್ಪರ್ಧಿಗಳು ನೂರಾರು ಅಡಿ ಎತ್ತರಕ್ಕೆ ಗಾಳಿಪಟಗಳನ್ನು ಹಾರಿಬಿಟ್ಟು ಸಂಭ್ರಮಿಸಿದರು.

ಈ ವಿಶೇಷ ಗಾಳಿಪಟ ಉತ್ಸವಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಆಕಾಶದಲ್ಲಿ ಬಸವ, ಆಂಜನೇಯ, ಗಣೇಶ, ಛತ್ರಪತಿ ಶಿವಾಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳಿದ್ದ ವಿಭಿನ್ನ ಗಾಳಿಪಟಗಳು ರಾರಾಜಿಸುವ ಮೂಲಕ ಎಲ್ಲರ ಗಮನ ಸೆಳೆದವು.

ವಾರಾಂತ್ಯ ಹಿನ್ನೆಲೆ ಬೆಳಿಗ್ಗೆಯಿಂದ ಸಂಜೆವರೆಗೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದರು. ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಗಾಳಿಪಟ ಕ್ರೀಡೆಯನ್ನು ಹತ್ತಿರದಿಂದ ಕಂಡು ಆನಂದಿಸಿದ ಯುವಜನತೆ ಹಾಗೂ ಸಾರ್ವಜನಿಕರು ಈ ವರ್ಣರಂಜಿತ ಉತ್ಸವಕ್ಕೆ ಫಿದಾ ಆದರು.

ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸಲು ಸೂಕ್ತ ವಾತಾವರಣವಿರುವುದರಿಂದ ಸ್ಪರ್ಧೆ ಕಳೆಗಟ್ಟಿತ್ತು. ಆಕಾಶದಲ್ಲಿ ಅತ್ಯಂತ ಹೆಚ್ಚು ಎತ್ತರ ಹಾಗೂ ಸುದೀರ್ಘ ಸಮಯದವರೆಗೆ ಯಶಸ್ವಿಯಾಗಿ ಗಾಳಿಪಟಗಳನ್ನು ಹಾರಿಸಿದ ಅತ್ಯುತ್ತಮ ಸ್ಪರ್ಧಿಗಳನ್ನು ಗುರುತಿಸಿ, ಆಯೋಜಕರ ವತಿಯಿಂದ ಆಕರ್ಷಕ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.

ದೊಡ್ಡಬಳ್ಳಾಪುರದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಗಾಳಿಪಟ ಉತ್ಸವವು ಜಾನಪದ ಕ್ರೀಡಾ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದ್ದು, ಈ ಬಾರಿಯೂ ಯಶಸ್ವಿಯಾಗಿ ನೂರಾರು ಜನರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.