ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ರಾಜಧಾನಿ ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದ ಗಣಪನಿಗೆ ವಿಶೇಷ ಪೂಜೆ ನಡೆಯುತ್ತಿದೆ. ಗಣಪನಿಗೆ ಕ್ಷೀರಾಭಿಷೇಕ, ಮೊಸರು ಹಾಗೂ ಪಂಚಾಮೃತ ಅಭಿಷೇಕ, ಹಾಗೂ ಇಂದು ವಿಶೇಷವಾಗಿ ಗಣಪನಿಗೆ ನಾಣ್ಯಗಳಿಂದ ಅಭಿಷೇಕ ಮಾಡಲಾಯಿತು. ಈ ಹಿನ್ನಲೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಗಣೇಶ ಚತುರ್ಥಿಯ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬಂದಿದ್ದು, ರೈತರು ತಮ್ಮ ಜಮಿನಿನಲ್ಲಿ ಬೆಳೆದ ಬೆಳೆಗಳನ್ನು ಗಣೇಶನಿಗೆ ಅರ್ಪಣೆ ಮಾಡಿದರು.
ಗದಗ ನಗರದಲ್ಲಿ ಗಣೇಶ ಹಬ್ಬದ ಸಂಭ್ರಮ ಬಲು ಜೋರಾಗಿದ್ದು, ಶ್ರೀ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಸಡಗರ ಮನೆ ಮಾಡಿದೆ. ಇನ್ನು ಇಲ್ಲಿರುವ ರಾಜ್ಯದ ಏಕೈಕ ಕಪ್ಪು ಶಿಲೆಯ ಬಲಮುರಿ ಗಣಪತಿಗೆ ಬೆಳಗ್ಗೆಯಿಂದ ವಿಶೇಷ ಪೂಜೆ, ಹೋಮ- ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಬಂದಂತಹ ಭಕ್ತರಿಗೆ ದೇವಸ್ಥಾನ ಕಮಿಟಿ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕರಾವಳಿಯಲ್ಲಿಯೂ ಕೂಡ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಶರವು ಮಹಾಗಣಪತಿ ದೇವಸ್ಥಾನ, ಸೌತಡ್ಕ ಗಣಪತಿ ದೇವಸ್ಥಾನ ಸೇರಿದಂತೆ ವಿಶೇಷ ಪೂಜೆ ನಡೆಯುತ್ತಿದೆ. ಇನ್ನು ಶರವು ಮಹಾಗಣಪತಿಗೆ ವಿಶೇಷ ಪೂಜೆ, ಹೋಮ ಹವನ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನಲೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಗಣ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕುರುಡುಮಲೆಯಲ್ಲಿರುವ ವಿಶ್ವದ ಏಕೈಕ ಬೃಹತ್ ಸಾಲಿಗ್ರಾಮ ಶಿಲಾ ವಿನಾಯಕ, ಬೆಳ್ಳಿ ಕವಚದಲ್ಲಿ ಕಂಗೊಳಿಸುತ್ತಿದ್ದು, ಇದನ್ನು ತ್ರಿಮೂರ್ತಿಗಳಿಂದ ಸ್ಥಾಪಿಸಲಾಗಿದೆ ಎನ್ನುವ ಪ್ರತೀತಿಯಿದೆ. ಕಲಿಯುಗದಲ್ಲೂ ರಾಜಕಾರಣಿಗಳ ಅಚ್ಚು ಮೆಚ್ಚಿನ ವಿನಾಯಕ ಇದಾಗಿದ್ದು, ಗಣೇಶ ಚತುರ್ಥಿ ಹಿನ್ನೆಲೆ ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ವಿನಾಯಕ ರಥೋತ್ಸವ ನಡೆಯುತ್ತದೆ. ಇಂದು ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬಂದಿತ್ತು.