
ಅವರೆಲ್ಲಾ ವಿಮಾನದ ಸದ್ದು ಬಂದರೆ ಶಾಲೆಯಿಂದ ಹೊರಬಂದು ಆಕಾಶದಲ್ಲಿ ಹೋಗುತ್ತಿದ್ದ ವಿಮಾನವನ್ನು ಬೆರಗುಕಣ್ಣಿನಿಂದ ನೋಡ್ತಿದ್ದರು. ತಾವು ಕೂಡ ಒಮ್ಮೆಯಾದರೂ ವಿಮಾನದಲ್ಲಿ ಹಾರಾಡಬೇಕು ಅನ್ನೋ ಆಸೆಯಿದ್ದರು ಕೂಡ ಆರ್ಥಿಕ ಸಂಕಷ್ಟ ಮಕ್ಕಳ ಆಸೆಗೆ ಅಡ್ಡಿಯಾಗಿತ್ತು. ಆದರೆ ಮಕ್ಕಳ ಆಸೆಯನ್ನು ಶಿಕ್ಷಕರು, ಗ್ರಾಮಸ್ಥರು ಈಡೇರಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಆ ಮೂಲಕ ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ಕೊಪ್ಪಳ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮೂವತ್ತೆರಡು ಮಕ್ಕಳು ಇಂದು ಶೈಕ್ಷಣಿಕ ಪ್ರವಾಸಕ್ಕೆ ಹೈದ್ರಾಬಾಗ್ಗೆ ಹೋಗಿದ್ದಾರೆ. ಆದರೆ ಅವರು ಎಲ್ಲರಂತೆ ಬಸ್, ರೈಲಿನಲ್ಲಿ ಹೋಗಿಲ್ಲ, ಬದಲಾಗಿ ವಿಮಾನದಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ.

ಇಂದು ಮುಂಜಾನೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಆಗಮಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ಬಾವುಟ ತೋರಿಸಿ, ಶುಭ ಹಾರೈಸಿದರು. ಲಿಂಗದಹಳ್ಳಿ ಗ್ರಾಮದಿಂದ ಜಿಂದಾಲ್ ಏರ್ಪೋಟ್ವರೆಗೆ ಬಸ್ನಲ್ಲಿ ಪ್ರಯಾಣ ಮಾಡಿದ ಮಕ್ಕಳು, ಜಿಂದಾಲ್ ಏರ್ಪೋಟ್ಗೆ ಹೋಗುತ್ತಿದ್ದಂತೆ ಪುಳಕಿತರಾಗಿದ್ದರು. ನಂತರ ಸ್ವತ: ತಾವೇ ಬೋರ್ಡಿಂಗ್ ಪಾಸ್ನ್ನು ಪಡೆದು, ವಿಮಾನ ಬರ್ತಿದ್ದಂತೆ ಸಂತಸದಿಂದ ಹತ್ತಿದ್ದರು. ಬಳಿಕ ವಿಮಾನ ಟೈಕ್ ಆಪ್ ಆದಾಗ ಮಕ್ಕಳ ಜೀವನದ ಕನಸೊಂದು ನನಸಾದ ಸಂತಸದಲ್ಲಿದ್ದರು.

ಮೂವತ್ತೆರಡು ಮಕ್ಕಳು, ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಸೇರಿದಂತೆ ಒಟ್ಟು ನಲವತ್ತೈದು ಜನರು, ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ, ಹೈದ್ರಾಬಾದ್ಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ವಿಶೇಷವೆಂದರೆ ಇವರಿಗೆಲ್ಲಾ ಇದು ಮೊದಲ ವಿಮಾನಯಾನವಾಗಿದೆ.

ಇನ್ನು ಪ್ರತಿನಿತ್ಯ ಮಕ್ಕಳಿಗೆ ಮೂರು ವಿಧದ ಸಾರಿಗೆ ಬಗ್ಗೆ ಪಾಠ ಮಾಡ್ತಿದ್ದ ಶಿಕ್ಷಕರು, ಮಕ್ಕಳಿಗೆ ಮೂರು ವಿಧದ ಸಾರಿಗೆಯಲ್ಲಿ ಪ್ರಯಾಣ ಮಾಡಿದರೆ ಅದರ ಅನುಭವ ಗೊತ್ತಾಗುತ್ತದೆ ಅಂತ ತಿಳಿದು ವಿಮಾನದಲ್ಲಿ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡಿದರು. ಆದರೆ ಎಲ್ಲರಿಗೂ ವಿಮಾನದ ಖರ್ಚು ವೆಚ್ಚ ಭರಿಸೋದು ಕಷ್ಟವಾಗಿತ್ತು. ಹೀಗಾಗಿ ಮೊದಲು ಯಾರೆಲ್ಲಾ ಪ್ರವಾಸಕ್ಕೆ ಬರುತ್ತಾರೆ ಎನ್ನುವುದನ್ನು ಶಿಕ್ಷಕರು ಪಟ್ಟಿ ಮಾಡಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಗೆ ಕೇವಲ ಎರಡುವರೆ ಸಾವಿರ ರೂ. ಹಣವನ್ನು ಪ್ರವಾಸಕ್ಕೆ ನೀಡಬೇಕು ಅಂತ ಹೇಳಿದ್ದರು. ಹೀಗಾಗಿ ಮೂವತ್ತೆರಡು ಮಕ್ಕಳು ಹಣ ನೀಡಿದ್ದರು. ಆದರೆ ನಾಲ್ಕು ದಿನದ ಪ್ರವಾಸಕ್ಕೆ ಪ್ರತಿಯೊಬ್ಬರಿಗೂ ತಲಾ ಹತ್ತು ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಆ ಹಣವನ್ನು ಸ್ವತಃ ತಾವೇ ತಮ್ಮ ಜೇಬಿನಿಂದ ಒಂದಿಷ್ಟು ಹಣವನ್ನು ಹಾಕಿದ್ರೆ, ಗ್ರಾಮಸ್ಥರು ಒಂದಿಷ್ಟು ಹಣ ಹೊಂದಿಸಿ ನೀಡಿದ್ದಾರೆ. ಶಿಕ್ಷಕರು, ಗ್ರಾಮಸ್ಥರ ಸಹಕಾರದಿಂದ ಮಕ್ಕಳು ನಾಲ್ಕು ದಿನದ ಪ್ರವಾಸಕ್ಕೆ ಹೋಗಿದ್ದಾರೆ. ಇನ್ನು ಜೀವನದಲ್ಲಿ ಮೊದಲ ವಿಮಾನ ಪ್ರವಾಸಕ್ಕೆ ಹೋಗತ್ತಿರುವುದಕ್ಕೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ವಿಮಾನದಲ್ಲಿ ಹೈದ್ರಾಬಾದ್ಗೆ ಹೋಗಿರುವ ಮಕ್ಕಳು, ಅಲ್ಲಿ ಎರಡು ದಿನಗಳ ಕಾಲ ಅನೇಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ವಿಜಯಪುರಕ್ಕೆ ಬಂದು ಅಲ್ಲಿ ಗೋಲಗುಂಬಜ್ ಸೇರಿದಂತೆ ಅನೇಕ ಸ್ಥಳಗಳನ್ನು ನೋಡಿಕೊಂಡು, ನಂತರ ಆಲಮಟ್ಟಿಗೆ ಆಗಮಿಸಲಿದ್ದಾರೆ. ಬಳಿಕ ಮರಳಿ ತಮ್ಮೂರಿಗೆ ವಾಪಸ್ ಆಗಲಿದ್ದಾರೆ. ಕೊಪ್ಪಳದ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.