
ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮೇಳಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದು, ಪುಸ್ತಕ ಖರೀದಿಯಲ್ಲಿ ಬ್ಯುಸಿಯಾಗಿದ್ದರು.

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶಕ್ತಿ ಸೌಧ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಸಾಹಿತ್ಯ ಕ್ಷೇತ್ರ ಮತ್ತಷ್ಟು ವಿಸ್ತರಿಸಬೇಕು ಮತ್ತು ಯುವಕರಲ್ಲಿ ಓದಿನ ಪ್ರಮಾಣ ಹೆಚ್ಚು ಮಾಡಬೇಕೆಂಬ ಉದ್ದೇಶದಿಂದ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ.

ಕರ್ನಾಟಕ ವಿಧಾನಸಭಾ ಸಚಿವಾಲಯ, ದೇಶದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದೆ. ಐದು ದಿನಗಳ ದಿನಗಳ ಕಾಲ ಈ ಪುಸ್ತಕ ಮೇಳಕ್ಕೆ ಅಧಿಕೃತವಾಗಿ ನಾಳೆ ತೆರಬೀಳಲಿದೆ. ಮೊದಲ ದಿನವೇ 15 ಸಾವಿರಕ್ಕೂ ಅಧಿಕ ಜನ ವೀಕ್ಷಣೆ ನಡೆಸಿದ್ದು, ನಾಳೆ ಭೇಟಿ ನೀಡಿದವರ ಒಟ್ಟು ಅಂಕಿ ಅಂಶ ಮಾಹಿತಿ ತಿಳಿಯಲಿದೆ.

ಇನ್ನೂ ಪುಸ್ತಕ ಮೇಳ ವೀಕ್ಷಣೆಗೆ ಇಂದು ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದ್ದರು. ಪುಸ್ತಕಗಳ ಸ್ಟಾಲ್ ಗಳಿಗೆ ಭೇಟಿ ನೀಡಿ ರಾಜ್ಯಪಾಲರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವರ ಉಪಸ್ಥಿತರಿದ್ದರು.

ಇದೇ ವೇಳೆ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್, ವಿಧಾನ ಪರಿಷತ್, ವಿಧಾನಸಭೆ ಸಚಿವಾಲಯದಿಂದ ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಸ್ತಕ ಮೇಳಕ್ಕೆ ನನ್ನನ್ನ ಆಹ್ವಾನಿಸಿದರು. ಇದು ಬಹಳ ಸಂತೋಷದ ವಿಚಾರ. ಸಾವಿರಾರು ಜನ ಪುಸ್ತಕ ಮೇಳ ವೀಕ್ಷಣೆ ಮಾಡುತ್ತಿದ್ದಾರೆ, ಖರೀದಿ ಮಾಡಿದ್ದಾರೆ. ಪುಸ್ತಕ ಖರೀದಿ ಮಾಡುವವರು ಓದೇ ಓದುತ್ತಾರೆ. ಓದುವುದರಿಂದ ದೇಶ, ಧರ್ಮ ಮತ್ತು ಸಂಸ್ಕೃತಿ, ಕನ್ನಡ ಭಾಷೆಯ ಬಗ್ಗೆ ಜ್ಞಾನ ಸಿಗುತ್ತೆ ಅಂತ ತಿಳಿಸಿದ್ದಾರೆ.

ನಾಳೆಯಿಂದ ಬಜೆಟ್ ಅಧಿವೇಶನ ಆರಂಭ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪುಸ್ತಕ ಮೇಳಕ್ಕೆ ನಾಳೆ ತೆರೆ ಬೀಳಲಿದೆ. ಸಾರ್ವಜನಿಕರ ಪ್ರವೇಶಕ್ಕೆ ನಾಳೆ ಅವಕಾಶ ಇಲ್ಲದ ಕಾರಣ, ಇಂದೇ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧ ಹಾಗೂ ಪುಸ್ತಕ ಮೇಳಕ್ಕೆ ಲಗ್ಗೆ ಇಟ್ಟಿದ್ದಾರೆ.
Published On - 9:28 pm, Sun, 2 March 25