
ಇಂದು ನಾಡಿನೆಲ್ಲಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಎಲ್ಲೆಡೆ ಅದ್ದೂರಿಯಿಂದ ಗಣೇಶ ಚತುರ್ಥಿಯನ್ನ ಬರಮಾಡಿಕೊಂಡಿದ್ದು, ವಿಜೃಂಭಣೆಯಿಂದ ಹಬ್ಬವನ್ನ ಆಚಾರಿಸಲಾಗಿದೆ. ರಾಜ್ಯ ರಾಜಕೀಯ ನಾಯಕರು ಕೂಡ ತಮ್ಮ ಕುಟುಂಬದವರೊಂದಿಗೆ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ.

ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹಾಗೂ ಬಿಡದಿಯ ತೋಟದಲ್ಲಿ ಶ್ರೀ ವಿನಾಯಕನ ಪೂಜೆ ನೆರವೇರಿಸಿದ್ದಾರೆ. ಜೊತೆಗೆ ಮತ್ತೊಮ್ಮೆ ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ಮತ್ತು ಗಣಪನು ಸಕಲ ಕಷ್ಟಗಳನ್ನು ನಿವಾರಿಸಿ ಶುಭವುಂಟು ಮಾಡಲಿ ಎಂದಿದ್ದಾರೆ. ಹೆಚ್ಡಿ ಕುಮಾರಸ್ವಾಮಿಗೆ ನಿಖಿಲ್ ಕೂಡ ಸಾಥ್ ನೀಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟೂರಿನಲ್ಲಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಇಂದು ಗಣಪತಿ ಪೆಂಡಾಲ್'ಗೆ ಭೇಟಿ ನೀಡಿ, ವಿಘ್ನನಿವಾರಕನ ದರ್ಶನ ಪಡಿದಿದ್ದಾರೆ. ಸಕಲ ಸಂಕಷ್ಟಗಳನ್ನೂ ದೂರ ಮಾಡಿ ನಾಡು ಸುಭಿಕ್ಷವಾಗಿರಲು ಅನುಗ್ರಹಿಸುವಂತೆ ಗಣೇಶನನ್ನು ಪ್ರಾರ್ಥಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತೀ ವರ್ಷದಂತೆ ಈ ವರ್ಷವೂ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಗಣಪನ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಘ್ನ ವಿನಾಶಕ ಗಣಪತಿಯನ್ನು ಮನೆಗೆ ಬರಮಾಡಿಕೊಂಡ ಕ್ಷಣ. ಶ್ರೀ ಗೌರಿ ಗಣೇಶ ಸರ್ವರಿಗೂ ಹೊಸ ಉತ್ಸಾಹ, ಉಲ್ಲಾಸ, ಲವಲವಿಕೆಯನ್ನು ಕರುಣಿಸಿ ಎಲ್ಲರ ವಿಘ್ನಗಳನ್ನು ದೂರಾಗಿಸಿ ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.