
ಇತಿಹಾಸ ಪ್ರಸಿದ್ಧ ಮಧುಗಿರಿ ದಂಡಿನಮಾರಮ್ಮ ತೆಪ್ಪೋತ್ಸವ ಸಮಾರಂಭ ಅದ್ದೂರಿಯಾಗಿ ನೇರವೇರಿತು. 50 ವರ್ಷಗಳ ಬಳಿಕ ದೇವಿಯ ತೆಪ್ಪೋತ್ಸವ ಅದ್ದೂರಿಯಾಗಿ ನೆರವೇರಿತು. ದಂಡಿನಮಾರಮ್ಮ ದೇವಿ ಮಧುಗಿರಿ ಭಾಗವನ್ನು ಕಾಪಾಡುವ ಶಕ್ತಿ ದೇವತೆ. ದೇವತೆಯ ತೆಪ್ಪೋತ್ಸವ ನಡೆದು ಸುಮಾರು 50 ವರ್ಷವಾಗಿತ್ತು. ಅನೇಕ ಜನರು ತೆಪ್ಪೋತ್ಸವ ನಡೆದಿಲ್ಲ, ಈ ಬಾರಿ ನಡೆಸಬೇಕು ಎಂದು ಭಕ್ತರ ಒತ್ತಾಸೆಯಾಗಿತ್ತು.

ಅದರಂತೆ ಸಹಕಾರ ಸಚಿವ ಕೆಎನ್ ರಾಜಣ್ಣ ಪುತ್ರ ಎಮ್ಎಲ್ಸಿ ರಾಜೇಂದ್ರ ಈ ಬಾರಿ ಇತಿಹಾಸ ಪ್ರಸಿದ್ಧ ಮಧುಗಿರಿ ದಂಡಿನಮಾರಮ್ಮ ದೇವಿಯ ತೆಪ್ಪೋತ್ಸವ ನಡೆಸಲು ನಿರ್ಧರಿಸಿದರು. ಮಧುಗಿರಿ ಹೊರವಲಯದಲ್ಲಿರುವ ಕೆರೆಗಳಪಾಳ್ಯ ಚೋಳೆನಹಳ್ಳಿ ಕೆರೆಯಲ್ಲಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೇರವೇರಿತು.

ಗಂಗಾಪೂಜೆ ಹಾಗೂ ಭಾಗಿನ ಅರ್ಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಹಕಾರ ಸಚಿವ ಕೆಎನ್ ರಾಜಣ್ಣ ಕುಟುಂಬ ಸಮೇತ ಭಾಗಿಯಾಗಿದ್ದರು. ಜೊತೆಗೆ ಸಿದ್ದಗಂಗಾ ಮಠದ ಸಿದ್ಧಲಿಂಗ ಶ್ರೀ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತೆಪ್ಪೋತ್ಸವದಲ್ಲಿ ಭಾಗಿಯಾಗಿ ಆಶಿರ್ವದಿಸಿದರು.

ಕಾಶಿಯಿಂದ ಬಂದಿದ್ದ ಪಂಡಿತರು ಗಂಗಾರಾತಿ ಮಾಡಿದರು. ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಂತೆ ಮಧುಗಿರಿ ಕಂಗೊಳಿಸಿದ್ದು, ತೆಪ್ಪೋತ್ಸವ ಕಾರ್ಯಕ್ರಮವನ್ನ ಗೃಹ ಸಚಿವ ಡಾ ಪರಮೇಶ್ವರ್ ಹಾಡಿ ಹೊಗಳಿದರು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಗಬೇಕೆಂದರು.

ಒಟ್ಟಾರೆಯಾಗಿ 50 ವರ್ಷಗಳ ಬಳಿಕ ನಡೆದ ಮಧುಗಿರಿ ಮಾರಮ್ಮನ ತೆಪ್ಪೋತ್ಸವ ಕಾರ್ಯಕ್ರಮ ಯಶಸ್ವಿಯಾಯಿತು. ತುಮಕೂರು ಜಿಲ್ಲಾಡಳಿತ ಡಿಸಿ ಶುಭಕಲ್ಯಾಣ್, ಎಸ್ಪಿ ಅಶೋಕ್ ಸಿಇಓ ಪ್ರಭು ಪಾಲಿಕೆ ಆಯುಕ್ತೆ ಅಶ್ವಿಜಾ ಜೊತೆಗೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮಹಮ್ಮದ್ ಸುಜಿತಾ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ತಾರೆಯರು ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ತೆಪ್ಪೋತ್ಸವ ಕಣ್ಣುತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿದ್ದರು.