
ಮಂಜಿನ ನಗರಿ ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಸಂಭ್ರಮ ಮನೆ ಮಾಡಿದೆ. ಮಡಿಕೇರಿ ನಗರದ ಶಕ್ತಿ ದೇವತೆಗಳ ಕರಗ ಉತ್ಸವ ಆರಂಭಿಸುವ ಮೂಲಕ ಮಡಿಕೇರಿ ದಸರಾಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.

ಮಡಿಕೇರಿ ನಗರದ ಪಂಪಿನ ಕೆರೆಯಲ್ಲಿ ಉಸ್ತುವಾರಿ ಸಚಿವ ಬೋಸರಾಜು ಕರಗ ಉತ್ಸವಕ್ಕೆ ಚಾಲನೆ ನೀಡಿದರು. ನಾಲ್ಕು ಶಕ್ತಿ ದೇವತೆಗಳ ಕರಗಳಿಗೆ ದೇವತೆಗಳ ಮುಖವಾಡಗಳನ್ನು ಧರಿಸಿ ಹೂವುಗಳಿಂದ ಅದ್ಭುತವಾಗಿ ಅಲಂಕಾರ ಮಾಡಲಾಗಿತ್ತು.

ಮಡಿಕೇರಿಯ ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ, ಚೌಟಿ ಮಾರಿಯಮ್ಮ ದೇವರ ಕರಗಗಳಿಗೆ ಪೂಜೆ ಸಲ್ಲಿಸಿ ನಡೆಮುಡಿಗೆಯಲ್ಲಿ ಮೆರವಣಿಗೆ ಮಾಡಲಾಯಿತು.

ಮಡಿಕೇರಿ ನಗರದ ಮುಖ್ಯ ಬೀದಿಯಲ್ಲಿ ಕರಗ ಮೆರವಣಿಗೆ ಮಾಡಲಾಯಿತು. ವಿಜಯದಶಮಿಯವರೆಗೆ ಕರಗಗಳ ನಗರ ಪ್ರದಕ್ಷಿಣೆ ನಡೆಯಲಿದ್ದು ದಾರಿಯುದ್ದಕ್ಕೂ ನಗರವಾಸಿಗಳು ಕರಗಗಳಿಗೆ ಪೂಜೆ ಸಲ್ಲಿಸಿದರು.

ಮೈಸೂರು ದಸರಾದಂತೆ ಮಡಿಕೇರಿ ದಸರಾಗೂ ಐತಿಹಾಸಿಕ ಹಿನ್ನೆಲೆ ಇದೆ. ಪೇಟೆ ಶ್ರೀರಾಮಮಂದಿರ ಸೇರಿದಂತೆ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿ ದೇವಾಲಯಕ್ಕೆ 150 ವರ್ಷಗಳ ಇತಿಹಾಸವಿದೆ.

105 ವರ್ಷಗಳ ಇತಿಹಾಸ ಇರುವ ದೇಚೂರು ಶ್ರೀ ರಾಮಮಂದಿರ, ಶ್ರೀ ಕೋದಂಡ ರಾಮ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಕೋಟೆ ಗಣಪತಿ ದೇವಾಲಯ, ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ಹೀಗೆ 10 ದೇವಾಲಯಗಳಿಗೆ ಸಂಬಂಧಿಸಿದ ಮಂಟಪಗಳು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ.

ಆಯಾಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ದಸರಾ ಮಂಟಪ ಸಮಿತಿಗಳನ್ನು ರಚಿಸಲಾಗಿದೆ. ಪೌರಾಣಿಕ ಕತೆಗಳ ಆಧಾರದಲ್ಲಿ ಮಂಟಪಗಳನ್ನು ತಯಾರಿಸಲಾಗಿದೆ. ಅತ್ಯುತ್ತಮ ಮಂಟಪಗಳಿಗೆ ಬಹುಮಾನಗಳಿವೆ.