ಮೈಸೂರಿನ ಅಶೋಕಪುರಂ ಅರಣ್ಯ ಭವನದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳ ಹಾಗೂ ಅವುಗಳ ಮಾವುತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನೆಗಳಿಗೆ ಅರಣ್ಯ ಭವನದಲ್ಲೇ ಆಹಾರ, ವಾಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ಗಜಪಡೆ ಅರಣ್ಯ ಭವನದಿಂದ ಅರಮನೆಗೆ ತೆರಳಲಿದೆ. ಅರಣ್ಯ ಭವನದಿಂದ ನಡಿಗೆ ಮೂಲಕ ಅರಮನೆಗೆ ಆನೆಗಳ ತಂಡ ತೆರಳಲಿದೆ. ನಂತರ ಆನೆಗಳ ತರಬೇತಿ ಪ್ರಕ್ರಿಯೆ ಆರಂಭವಾಗಲಿದೆ. ಸದ್ಯ 9 ಆನೆಗಳ ತಂಡ ಇದ್ದು, ಎರಡನೇ ಹಂತದಲ್ಲಿ 5 ಆನೆಗಳು ಮೈಸೂರಿಗೆ ಆಗಮಿಸಲಿವೆ.
ಬುಧವಾರ ವೀರನಹೊಸಹಳ್ಳಿ ಗೇಟ್ನಲ್ಲಿ ಜಿಲ್ಲಾ ಸಚಿವ ಡಾ. ಎಚ್ಸಿ ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಪುಷ್ಪಾರ್ಚನೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಿದ್ದರು. ನಂತರ ಗಜಪಡೆ ಅಶೋಕಪುರಂ ಅರಣ್ಯ ಭವನಕ್ಕೆ ತೆರಳಿತ್ತು.
ಗಜ ಪಯಣದ ವೇಳೆ ಡೋಲು ಬಾರಿಸುವಿಕೆ, ಮಂಗಳವಾದ್ಯಗಳೂ ಇದ್ದವು. ಇದರ ನಡುವೆ ವೀರಗಾಸೆ ಕುಣಿತ, ಮಹಿಳಾ ಕೋಲಾಟ, ಮಹಿಳಾ ವೀರಗಾಸೆ ಕುಣಿತ ಸೇರಿದಂತೆ ವಿವಿಧ ಪ್ರಕಾರಗಳನ್ನು ಪ್ರದರ್ಶಿಸುತ್ತಾ ಸಾಂಸ್ಕೃತಿಕ ತಂಡಗಳು ವೀರನಹೊಸಹಳ್ಳಿ ಗೇಟ್ನಿಂದ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದವರೆಗೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದ್ದವು.
ಸುತ್ತಮುತ್ತಲ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೆರವಣಿಗೆಯ ದಾರಿಯ ಇಕ್ಕೆಲಗಳಲ್ಲಿ ವಿವಿಧ ಆಹಾರ ಪದಾರ್ಥಗಳು, ಅಕ್ಕಿ, ಹಣ್ಣಿನ ರಸ, ಕಬ್ಬಿನ ರಸ, ಹೂವುಗಳು ಮತ್ತು ಆಟಿಕೆಗಳನ್ನು ಮಾರಾಟ ಮಾಡುವ ಅಂಗಡಿಗಳೂ ಇದ್ದವು. ಸದ್ಯ ಅಶೋಕಪುರಂ ಅರಣ್ಯ ಭವನದಲ್ಲಿ ಆನೆಗಳು ರಿಲ್ಯಾಕ್ಸ್ ಮೂಡ್ನಲ್ಲಿವೆ.
Published On - 2:58 pm, Thu, 22 August 24